ADVERTISEMENT

ದೇಶದಲ್ಲಿ ಬಿಜೆಪಿ ಗೆಲುವು: ಕಾರ್ಯಕರ್ತರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಮೇ 2019, 12:59 IST
Last Updated 24 ಮೇ 2019, 12:59 IST
ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಭ್ರಮಾಚರಣೆ ನಡೆಸಿದರು
ಐಜೂರು ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಶುಕ್ರವಾರ ಸಂಭ್ರಮಾಚರಣೆ ನಡೆಸಿದರು   

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿ ಪಕ್ಷದ ಕಾರ್ಯಕರ್ತರು ಶುಕ್ರವಾರ ಇಲ್ಲಿನ ಐಜೂರು ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿದರು.

‘ದೇಶದ ಜನತೆಯ ಆಶೀರ್ವಾದದಿಂದಾಗಿ, ಎನ್‌ಡಿಎ ಮಿತ್ರ ಪಕ್ಷಗಳು 350ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿದ್ದು, ಎರಡನೇ ಬಾರಿಗೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುತ್ತಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯುಡಿಯೂರಪ್ಪ ಅವರ ಶ್ರಮದಿಂದಾಗಿ ರಾಜ್ಯದಲ್ಲಿ ಬಿಜೆಪಿ 25 ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಪ್ರವೀಣ್ ಗೌಡ ತಿಳಿಸಿದರು.

‘ರಾಮನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 40 ಸಾವಿರಕ್ಕೂ ಅಧಿಕ ಮತಗಳು ಬಂದಿವೆ. ಬಿಜೆಪಿಯ ಗೆಲುವು ಕೇವಲ ಪಕ್ಷದ ಅಥವಾ ನರೇಂದ್ರ ಮೋದಿಯವರ ಗೆಲುವಲ್ಲ, ಇದು ರಾಷ್ಟ್ರದ ಗೆಲುವಾಗಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಜನ ಬಯಸಿದ್ದಾರೆ. ಮೋದಿ ಅವರಿಗೆ ಗೆಲುವಾಗುತ್ತಿದ್ದಂತೆ ವಿಶ್ವದ ಬೇರೆ ಬೇರೆ ದೇಶದ ಪ್ರಧಾನಿಗಳು ಮೋದಿ ಅವರಿಗೆ ಶುಭಾಶಯ ಕೋರಿದ್ದಾರೆ’ ಎಂದರು.

ADVERTISEMENT

‘ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಪಕ್ಷವನ್ನು ಗೆಲ್ಲಿಸಿದ ದೇಶದ ಹಾಗೂ ರಾಜ್ಯದ ಜನತೆಗೆ ಕೃತಜ್ಞತೆಗಳು. ರಾಜ್ಯದಲ್ಲಿ ಜನಾಭಿಪ್ರಾಯವಿಲ್ಲದೆ ತಿರಸ್ಕಾರಗೊಂಡಿದ್ದ ಎರಡೂ ಪಕ್ಷಗಳು ಜತೆಯಾಗಿ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚನೆ ಮಾಡಿವೆ. ಈಗ ಎರಡು ಪಕ್ಷಗಳನ್ನು ವಿರೋಧಿಸಿ ರಾಜ್ಯದ ಜನತೆ ಇಂದು ಪಕ್ಷವನ್ನು ಸಂಪೂರ್ಣವಾಗಿ ಆಶೀರ್ವದಿಸಿದ್ದಾರೆ’ ಎಂದು ಅವರು ಹೇಳಿದರು.

ಬಿಜೆಪಿ ಮುಖಂಡರಾದ ಎಸ್.ಆರ್. ನಾಗರಾಜ್, ಜಿ.ವಿ. ಪದ್ಮನಾಭ, ಪಿ. ರವಿಕುಮಾರ್, ಚನ್ನಪ್ಪ, ವಿನೋದ್ ಭಗತ್, ರಮೇಶ್, ಪಿ. ಶಬರಿ, , ಅಶೋಕ್, ಕಿರಣ್, ಮಂಜು, ಪಾರ್ಥಸಾರಥಿ, ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.