ADVERTISEMENT

ಯುವಕನಿಂದ ಬ್ಲಾಕ್‌ಮೇಲ್: ಡೆತ್ ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ

ಪ್ರೀತಿ ಹೆಸರಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಗೆ ಯುವಕನಿಂದ ಬ್ಲಾಕ್‌ಮೇಲ್; ಒಡವೆ, ಹಣ ಪಡೆದು ವಂಚನೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 23:26 IST
Last Updated 8 ಡಿಸೆಂಬರ್ 2025, 23:26 IST
ವರ್ಷಿಣಿ
ವರ್ಷಿಣಿ   

ರಾಮನಗರ: ತನ್ನೊಂದಿಗೆ ಪ್ರೀತಿಯ ನಾಟಕವಾಡಿದ ಯುವಕನಿಂದ ಬ್ಲಾಕ್‌ಮೇಲ್ ಮತ್ತು ವಂಚನೆಗೆ ಒಳಗಾದ ಯುವತಿಯೊಬ್ಬರು ನೇಣಿ ಹಾಕಿಕೊಂಡಿರುವ ಘಟನೆ ತಾಲ್ಲೂಕಿನಲ್ಲಿ ನಡೆದಿದೆ. 

ತಾಲ್ಲೂಕಿನ ವಿಭೂತಿಕೆರೆಯ ವರ್ಷಿಣಿ (22) ಮೃತರು. ಯುವುದಕ್ಕೆ ಮುನ್ನ ಮರಣಪತ್ರ ಬರೆದಿಟ್ಟಿರುವ ಅವರು, ‘ಪ್ರೀತಿ ಹೆಸರಲ್ಲಿ ಮೋಸ ಮಾಡಿರುವ ಅಭಿ ನನ್ನ ಸಾವಿಗೆ ಕಾರಣ. ಅವನನ್ನು ಸುಮ್ಮನೆ ಬಿಡಬೇಡಿ’ ಎಂದು ನಮೂದಿಸಿದ್ದಾರೆ.

ಮೈಸೂರಿನಲ್ಲಿ ಎಂ.ಎಸ್ಸಿ ಪ್ರಥಮ ವರ್ಷ ಓದುತ್ತಿದ್ದ ವರ್ಷಿಣಿ, ಕುಣಿಗಲ್ ತಾಲ್ಲೂಕಿನ ಹಾಲಪ್ಪನಗುಡ್ಡೆಯ ಅಭಿ (28) ಎಂಬಾತನನ್ನು ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು. ಘಟನೆಗೆ ಸಂಬಂಧಿಸಿದಂತೆ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಅಭಿಯನ್ನು ಬಂಧಿಸಿದ್ದಾರೆ.

ADVERTISEMENT

ರಾಮನಗರ ತಾಲ್ಲೂಕಿನ ದೇವರದೊಡ್ಡಿಯಲ್ಲಿರುವ ತನ್ನ ಮಾನವ ಮನೆಯಲ್ಲಿದ್ದ ಅಭಿ, ಬೆಂಗಳೂರಿನ ಕುಂಬಳಗೋಡಿನಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಸಹಪಾಠಿ ಮೂಲಕ ವರ್ಷಿಣಿಗೆ ಅಭಿ ಪರಿಚಯವಾಗಿತ್ತು. ನಂತರ ಇಬ್ಬರ ಸ್ನೇಹವು ಪ್ರೀತಿಗೆ ತಿರುಗಿತ್ತು ಎಂದು ಪೊಲೀಸರು ತಿಳಿಸಿದರು.

ಪ್ರೀತಿ ಹೆಸರಿನಲ್ಲಿ ಬಣ್ಣದ ಮಾತುಗಳನ್ನಾಡುತ್ತಿದ್ದ ಅಭಿಯನ್ನು ವರ್ಷಿಣಿ ಸಂಪೂರ್ಣ ನಂಬಿದ್ದರು. ತೀರಾ ಸಲುಗೆ ಬೆಳೆಸಿಕೊಂಡಿದ್ದ ಆತ, ವರ್ಷಿಣಿ ಅವರ ಖಾಸಗಿ ಫೋಟೊಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ನಂತರ ಫೋಟೊ ಬಹಿರಂಗಪಡಿಸುವುದಾಗಿ ಬ್ಲಾಕ್‌ಮೇಲ್ ಮಾಡಿ ದೈಹಿಕವಾಗಿ ಬಳಸಿಕೊಂಡು ವಂಚಿಸಿದ್ದ

ಪ್ರೀತಿ ಹೆಸರಿನಲ್ಲಿ ಅಭಿ ಮಾಡಿದ ಮೋಸದಿಂದಾಗಿ ಕುಗ್ಗಿದ್ದ ವರ್ಷಿಣಿ, ರಜೆ ನಿಮಿತ್ತ ಭಾನುವಾರ ಊರಿಗೆ ಬಂದಿದ್ದಾಗ ಡೆತ್‌ ನೋಟ್ ಬರೆದಿಟ್ಟು ಮನೆಯಲ್ಲಿದ್ದ ಫ್ಯಾನ್‌ಗೆ ರಾತ್ರಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಬೆಳಿಗ್ಗೆ ಎಷ್ಟೊತ್ತಾದರೂ ವರ್ಷಿಣಿ ಹೊರಕ್ಕೆ ಬಾರದಿದ್ದಾಗ, ಮನೆಯವರು ಆಕೆಯ ಕೊಠಡಿಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿ ಶವವನ್ನು ಕೆಳಕ್ಕಿಳಿಸಿ, ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಶವ ಹಸ್ತಾಂತರಿಸಲಾಯಿತು.

ಘಟನೆ ಕುರಿತು ಯುವತಿ ಬರೆದಿಟ್ಟಿದ್ದ ಮರಣಪತ್ರವನ್ನು ಕುಟುಂಬದವರಿಂದ ಪಡೆದು, ಆರೋಪಿ ಅಭಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಯಿತು. ಸಂಜೆ ವಿಭೂತಿಕೆರೆಯಲ್ಲಿ ಯುವತಿಯ ಅಂತ್ಯಕ್ರಿಯೆ ನೆರವೇರಿತು.  ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಭಿ

‘ಕ್ಷಮಿಸು ಅಮ್ಮ; ಅವನನ್ನು ಬಿಡಬೇಡಿ’

‘ಅಮ್ಮ ನನ್ನನ್ನು ಕ್ಷಮಿಸು. ನನ್ನ ಸಾವಿಗೆ ಅಭಿ (ಚಿತ್ರಲಿಂಗ) ಕಾರಣ. ಆತ ನನ್ನನ್ನು ನಂಬಿಸಿ ಮೋಸ ಮಾಡಿದ್ದಾನೆ. ಖಾಸಗಿ ಫೋಟೊ ಇಟ್ಟುಕೊಂಡು ದೈಹಿಕವಾಗಿ ಸಹಕರಿಸಿದರೆ ಮಾತ್ರ ಪೋಟೊ ಡೆಲಿಟ್ ಮಾಡುವುದಾಗಿ ಬ್ಲಾಕ್‌ಮೇಲ್ ಮಾಡಿದ. ನನ್ನಲ್ಲಿದ್ದ ಒಡವೆ ಹಾಗೂ ಹಣ ಪಡೆದು ವಂಚಿಸಿದ. ಬ್ಲಾಕ್‌ಮೇಲ್‌ಗೆ ಬೆದರಿ ಆತನೊಂದಿಗೆ ಸಹಕರಿಸಿದ್ದಕ್ಕೆ ನನ್ನನ್ನು ಗರ್ಭಿಣಿ ಮಾಡಿ ಗರ್ಭಪಾತ ಮಾಡಿಸಿದ. ಅಮ್ಮ ನಿನ್ನ ನಂಬಿಕೆಗೆ ನಾನು ಮೋಸ ಮಾಡಿದ್ದೇನೆ. ಸಾಯೋಕೆ ಭಯವಾಗುತ್ತಿದೆ. ಆದರೆ ನನಗೆ ಬೇರೆ ದಾರಿಯಿಲ್ಲ. ನಾನು ಅವನನ್ನು ನಂಬಬಾರದಿತ್ತು. ಅದೊಂದು ತಪ್ಪು ಮಾಡಿ ಎಲ್ಲಾ ಹಾಳು ಮಾಡಿಕೊಂಡುಬಿಟ್ಟೆ. ಆತನನ್ನು ಸುಮ್ಮನೆ ಬಿಡಬೇಡಿ. ನನ್ನಂತೆ ಯಾರೂ ಇಂತಹವರನ್ನು ನಂಬಿ ಜೀವನ ಹಾಳು ಮಾಡಿಕೊಳ್ಳಬೇಡಿ’ ಎಂದು ವರ್ಷಿಣಿ ತನ್ನ ಮರಣಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.