ADVERTISEMENT

‘ದೀಪೋತ್ಸವ ಬದುಕಿನಲ್ಲಿ ಬೆಳಕು ತರಲಿ’

ಮರಳೇಗವಿ ಮಠದಲ್ಲಿ ಡಾ. ಮುಮ್ಮಡಿ ಶಿವರುದ್ರಸ್ವಾಮಿ ಆಶೀರ್ವಚನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 12:56 IST
Last Updated 8 ಡಿಸೆಂಬರ್ 2018, 12:56 IST
ಮರಳೇಗವಿಮಠದ ಲಕ್ಷದೀಪೋತ್ಸವಕ್ಕೆ ಡಾ.ಮುಮ್ಮಡಿ ಶಿವರುದ್ರಸ್ವಾಮಿ ಚಾಲನೆ ನೀಡಿದರು
ಮರಳೇಗವಿಮಠದ ಲಕ್ಷದೀಪೋತ್ಸವಕ್ಕೆ ಡಾ.ಮುಮ್ಮಡಿ ಶಿವರುದ್ರಸ್ವಾಮಿ ಚಾಲನೆ ನೀಡಿದರು   

ಕನಕಪುರ: ‘ಕಾರ್ತಿಕ ಮಾಸದ ಅಮಾವಾಸ್ಯೆಯ ಕತ್ತಲಿನಲ್ಲಿ ಹಚ್ಚುವ ದೀಪಗಳಿಂದ ಬೆಳಕು ಪ್ರಜ್ವಲಿಸುವಂತೆ ನಿಮ್ಮ ಬದುಕಿನಲ್ಲೂ ಬೆಳಕಾಗಲಿ. ಜೀವನ ಸುಖಮಯವಾಗಿರಲಿ’ ಎಂದು ಮರಳೆಗವಿ ಮಠದ ಡಾ. ಮುಮ್ಮಡಿ ಶಿವರುದ್ರಸ್ವಾಮಿ ಆಶೀರ್ವದಿಸಿದರು.

ತಾಲ್ಲೂಕಿನ ಮರಳೇಗವಿ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

‘ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಮಠಗಳ ಮತ್ತು ಭಕ್ತರ ನಡುವೆ ಅವಿನಾಭಾವ ಸಂಬಂಧವಿದೆ. ಮಠವಿಲ್ಲದೆ ಭಕ್ತರಿಲ್ಲ; ಭಕ್ತರಿಲ್ಲದೆ ಮಠವಿಲ್ಲ. ದೇವರು, ಪೂಜೆ ಪುನಸ್ಕಾರಗಳಲ್ಲಿ ಭಕ್ತರು ಮುಂದೆ ನಿಂತು ಧಾರ್ಮಿಕ ಆಚರಣೆಗಳು, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಕೊಡುತ್ತಾರೆ’ ಎಂದರು.

ADVERTISEMENT

ಮಠದ ಮೂಲ ಗದ್ದುಗೆ ಮುಂಭಾಗದಲ್ಲಿ ದೀಪಗಳನ್ನು ಹಚ್ಚಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಮಠದ ಆವರಣದಿಂದ ಮೂಲ ಗದ್ದುಗೆ ಮಠದವರೆಗೂ ಅಲಂಕಾರ ಮಾಡಲಾಗಿತ್ತು.

ರಾತ್ರಿಯಾಗಿದ್ದರೂ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕಲ್ಲು ಬಂಡೆಗಳ ದುರ್ಗಮ ಹಾದಿಯಲ್ಲಿ ನಡೆದು ದೀಪ ಹಚ್ಚುವ ಸ್ಥಳಕ್ಕೆ ಬಂದರು. ಸುಮಾರು 8 ಗಂಟೆಗೆ ಮೂಲ ಗದ್ದುಗೆ ಮಠಕ್ಕೆ ಬಂದು ಸ್ವಾಮೀಜಿ ಲಕ್ಷ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಹಿಳೆಯರು, ಮಕ್ಕಳು, ತಾಯಂದಿರು ಸಾಲು ಸಾಲಾಗಿ ದೀಪಗಳನ್ನು ಹಚ್ಚಿ ದೇವರಲ್ಲಿ ಪ್ರಾರ್ಥಿಸಿದರು.

ಪೂಜೆಗೆ ಸಾವಿರಾರು ಭಕ್ತರು ದೂರದ ಹಳ್ಳಿಗಳಿಂದ ಬಂದು ಪೂಜಾ ಕಾರ್ಯ ನೆರವೇರಿಸಿಕೊಟ್ಟರು. ‘ಎಲ್ಲ ಭಕ್ತರಿಗೂ ಒಳ್ಳೆಯದಾಗಲಿ. ಬಂದಿರುವ ಭಕ್ತರೆಲ್ಲ ಪ್ರಸಾದ ತೆಗೆದುಕೊಂಡು ಹೋಗಬೇಕು’ ಎಂದು ಆಯೋಜಕರು ಮನವಿ ಮಾಡಿದರು.

ಆವರಣದಲ್ಲಿ ಸಹಪಂಕ್ತಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.