ADVERTISEMENT

ಕನಕಪುರ: ಮೀನು ಹಿಡಿಯಲು ಹೋದ ಬಾಲಕ ನೀರು ಪಾಲು

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 4:20 IST
Last Updated 11 ಜುಲೈ 2021, 4:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿಯ ಅಚ್ಚಲು ಗ್ರಾಮ ಪಂಚಾಯಿತಿಯ ಅಚ್ಚಲುಗೇಟ್‌ನ ಬೊಮ್ಮನಹಳ್ಳಿ ರಸ್ತೆಯಲ್ಲಿರುವ ಕೆರೆಯಲ್ಲಿ ಶನಿವಾರ ಮೀನು ಹಿಡಿಯಲು ಹೋದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಇಲ್ಲಿನ ಅಜೀಜ್‌ನಗರದ ನಿವಾಸಿ ಮೆಹಬೂಬ್‌ಖಾನ್‌ ಅವರ ಮಗ ಮುಕ್ಸೂದ್‌ (12) ಮೃತಪಟ್ಟ ಬಾಲಕ.

ಶಾಲೆ ಇಲ್ಲದಿರುವುದರಿಂದ ಅಚ್ಚಲು ಗ್ರಾಮದ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದ. ಬೆಳಿಗ್ಗೆ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ.ಈ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿದ್ದಾನೆ. ತಕ್ಷಣವೇ ಅಕ್ಕಪಕ್ಕದಲ್ಲಿದ್ದವರು ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿದ್ದು, ಕನಕಪುರ ಕನಕ ನರ್ಸಿಂಗ್‌ ಹೋಂಗೆ ಕರೆದುಕೊಂಡು ಹೋಗಿದ್ದಾರೆ. ಆತನನ್ನು ಪರೀಕ್ಷಿಸಿದ ವೈದ್ಯರು ದಾರಿ ಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ಪೋಷಕರಿಗೆ ತಿಳಿಸಿದ್ದಾರೆ.

ADVERTISEMENT

ಮಾಹಿತಿ ಪಡೆದ ಸಾತನೂರು ಸಬ್‌ ಇನ್‌‌ಸ್ಪೆಕ್ಟರ್‌ ರವಿಕುಮಾರ್‌ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಟಿ.ಟಿ. ಕೃಷ್ಣ ಆತನ ಮನೆಗೆ ತೆರಳಿ ಪೋಷಕರೊಂದಿಗೆ ಮಾತನಾಡಿದರು. ದೂರು ಕೊಟ್ಟು ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಮನವಿ ಮಾಡಿದರು. ಇದಕ್ಕೆ ಪೋಷಕರು ನಿರಾಕರಿಸಿದರು.ಅಂತಿಮವಾಗಿ ಪೊಲೀಸರಿಗೆ ತಮ್ಮ ಮಗನ ಸಾವಿನ ಬಗ್ಗೆ ದೂರು ನೀಡಿ ಮರಣೋತ್ತರ ಪರೀಕ್ಷೆ ನಡೆಸದಿರುವ ಬಗ್ಗೆ ಪತ್ರ ಬರೆದುಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.