ADVERTISEMENT

ಮಾಗಡಿ: ಮೂರು ದಶಕದಿಂದ ನೀರು ಇಲ್ಲದ ಚಕ್ರಬಾವಿ ಕೆರೆ

ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಕೆರೆ ತುಂಬವ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 3:09 IST
Last Updated 7 ಸೆಪ್ಟೆಂಬರ್ 2025, 3:09 IST
ಮಾಗಡಿ ತಾಲ್ಲೂಕಿನ ಚಕ್ರಬಾವಿ ಕೆರೆಯ ನೋಟ 
ಮಾಗಡಿ ತಾಲ್ಲೂಕಿನ ಚಕ್ರಬಾವಿ ಕೆರೆಯ ನೋಟ    

ಮಾಗಡಿ: ನಾಡಪ್ರಭು ಕೆಂಪೇಗೌಡರು ಕಟ್ಟಿಸಿದ ಐತಿಹಾಸಿಕ ಚಕ್ರಬಾವಿ ಕೆರೆ ಮೂರು ದಶಕಗಳಿಂದ ನೀರಿಲ್ಲದೆ ಒಣಗಿದ್ದು, ಜನ, ಜಾನುವಾರುಗಳಿಗೆ ಸಾಕಷ್ಟು ತೊಂದರೆಯಾಗಿದೆ. ಹಾಗಾಗಿ ಈ ಬಾರಿ ಸರ್ಕಾರದ ಯೋಜನೆಯಿಂದಾದರೂ ಕೆರೆಗೆ ನೀರು ಬರುವ ನಿರೀಕ್ಷೆಯಲ್ಲಿದ್ದಾರೆ ಜನತೆ.

ಚಕ್ರಬಾವಿಯಲ್ಲಿ 38.39 ಎಕರೆ ಜಾಗದಲ್ಲಿ ಸುಂದರವಾದ ಕೆರೆ ನಿರ್ಮಾಣ ಮಾಡಲಾಗಿದೆ. ಆದರೆ, ಕೆರೆಗೆ ಯಾವುದೇ ನೀರಿನ ಮೂಲವಿಲ್ಲದೆ ಮೂರು ದಶಕಗಳಿಂದ ಕೆರೆಯಲ್ಲಿ ನೀರಿಲ್ಲದಂತಾಗಿದೆ.

ಮಳೆಗಾಲದಲ್ಲಿ ರಾಜ್ಯದ ಎಲ್ಲೆಡೆ ಸಾಕಷ್ಟು ಕೆರೆಗಳಿಗೆ ನೀರು ತುಂಬಿರುತ್ತದೆ. ಆದರೆ, ಚಕ್ರಬಾವಿ ಕೆರೆಗೆ ನೀರಿನ ಮೂಲವಿಲ್ಲದೆ, ಕೆರೆಗೆ ನೀರೇ ಬಂದಿಲ್ಲ. ಚಕ್ರಬಾವಿ ಕೆರೆಯಲ್ಲಿ ನೀರು ಸಂಗ್ರಹವಾದರೆ ಈ ಭಾಗದ ಸುತ್ತಮುತ್ತಲ ಪ್ರದೇಶ ಹಾಗೂ ಕೋರಮಂಗಲ, ಸೀಗೇಕುಪ್ಪೆ, ಬ್ಯಾಡರಹಳ್ಳಿ, ಕಲ್ಲುದೇವನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಅನುಕೂಲವಾಗಲಿವೆ. ಹಾಗಾಗಿ ಸರ್ಕಾರ ವಿಶೇಷ ಸಮಿತಿಯನ್ನು ರಚಿಸಿ ಐತಿಹಾಸಿಕ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕೆಂದು ಒತ್ತಾಯಿಸಿದ್ದಾರೆ.

ADVERTISEMENT

ಸತ್ಯಗಾಲ ಯೋಜನೆಯಿಂದ ಕೆರೆಗೆ ನೀರು ಬರುವ ನಿರೀಕ್ಷೆ: ಸತ್ತೇಗಾಲದಿಂದ ವೈಜಿಗುಡ್ಡ ಜಲಾಶಯಕ್ಕೆ ಈಗಾಗಲೇ ಕಾವೇರಿ ನೀರು ತರಲಾಗಿದೆ. ಈ ಮೂಲಕ ಚಕ್ರಬಾವಿ ಸೇರಿದಂತೆ 44 ಕೆರೆಗಳಿಗೆ ಪೈಪ್ ಮೂಲಕ ನೀರು ತುಂಬಿಸುವ ಕೆಲಸ ಮಾಡುತ್ತೇವೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಅದರಂತೆ ನೂರು ಕೋಟಿ ವೆಚ್ಚದಲ್ಲಿ ಈಗಾಗಲೇ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಈ ಮೂಲಕ ಕೆರೆಗಳಿಗೆ ನೀರು ಬರುವ ನಿರೀಕ್ಷೆಯಲ್ಲಿ ಜನರಿದ್ದಾರೆ.

ವೈಜಿ ಗುಡ್ಡ ಜಲಾಶಯದಿಂದ ಹಲವು ಕೆರೆಗಳಿಗೆ ನೀರು: ಈಗಾಗಲೇ ತಾಲ್ಲೂಕಿನ 25 ಗ್ರಾಮಕ್ಕೆ ವೈ.ಜಿ.ಗುಡ್ಡ ಜಲಾಶಯದಿಂದ ಏತ ನೀರಾವರಿ ಮೂಲಕ ಶಾಶ್ವತ ಕುಡಿಯುವ ನೀರು ಪೂರೈಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಮೂಲಕ ಹಲವು ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.

-----

ಚಕ್ರಬಾವಿ ಸೇರಿದಂತೆ ನಮ್ಮ ಭಾಗದ ಹಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹ 100 ಕೋಟಿ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಈ ಮೂಲಕ ನಮ್ಮ ಭಾಗದ ಕೆರೆಗಳಿಗೆ ಕಾವೇರಿ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಲಾಗುವುದು.

ಎಚ್.ಸಿ.ಬಾಲಕೃಷ್ಣ ಶಾಸಕರು ಮಾಗಡಿ

‘ನನ್ನ ಪಟ್ಟಾಭಿಷೇಕ ಸಮಯದಲ್ಲಿ ಚಕ್ರಬಾವಿ ಕೆರೆಗೆ ನೀರು ತುಂಬಿತ್ತು. ನಂತರ ಕೆರೆಗೆ ಇಲ್ಲಿಯವರೆಗೂ ನೀರೇ ಬಂದಿಲ್ಲ. ಕೆರೆಗೆ ನೀರು ತುಂಬಿದರೆ ಜನ ಜಾನುವಾರುಗಳಿಗೆ ಅನುಕೂಲವಾಗಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಹಾಗಾಗಿ ಸರ್ಕಾರ ಕೆಂಪೇಗೌಡರ ಕಾಲದ ಕೆರೆಗಳಿಗೆ ಕಾಯಕಲ್ಪ ನೀಡುವ ಕೆಲಸ ಮಾಡಬೇಕು. ವೈಜಿಗುಡ್ಡ ಜಲಾಶಯದಿಂದ ಚಕ್ರಬಾವಿಗೆ ಆರೇಳು ಕಿ.ಮೀ ದೂರದ ಕೆರೆಗೆ ನೀರು ತುಂಬಿಸುವ ಕೆಲವಾಗಲಿ.

-ಸಿದ್ದಲಿಂಗ ಸ್ವಾಮೀಜಿ

ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ ಸಂಸದನಾಗಿದ್ದಾಗ ಸತ್ಯಗಾಲದಿಂದ ವೈಜಿಗುಡ್ಡ ಜಲಾಶಯಕ್ಕೆ ಕಾವೇರಿ ನೀರು ತರುವ ಯೋಜನೆಗೆ ಚಾಲನೆ ನೀಡಿ ಈಗ ಅನುಷ್ಠಾನಗೊಳಿಸಲಾಗಿದೆ. ಅದೇ ರೀತಿ ಚಕ್ರಬಾವಿ ಕೆರೆಗೆ ನೀರು ತುಂಬಿಸುವ ಕೆಲಸ ಮಾಡುತ್ತೇನೆ.

ಡಿ.ಕೆ.ಸುರೇಶ್ ಬಮೂಲ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.