ಮಾಗಡಿ: ಇಲ್ಲಿನ ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪಂಕಜ ನರಸಿಂಹಮೂರ್ತಿ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಚುನಾವಣೆ ನಡೆಯಿತು. ಕೋರಮಂಗಲ ಗ್ರಾಮದ ಸದಸ್ಯ ಚನ್ನಗಂಗಯ್ಯ ಅಧ್ಯಕ್ಷರಾಗಿಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಜಯ ಸವಣೂರು ತಿಳಿಸಿದರು.
ನೂತನ ಅಧ್ಯಕ್ಷ ಚನ್ನಗಂಗಯ್ಯ ಮಾತನಾಡಿ, ‘ನಮ್ಮ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಜಲಸಿರಿ ಯೋಜನೆ ಅಡಿಯಲ್ಲಿ ಮಳೆ ನೀರನ್ನು ಇಂಗಿಸುವುದು, ಕೆರೆ–ಕಟ್ಟೆ, ಕಲ್ಯಾಣಿಗಳನ್ನು ದುರಸ್ಥಿ ಪಡಿಸಿ ಜಲಸಂಪನ್ಮೂಲ ರಕ್ಷಿಸಲು ಆದ್ಯತೆ ನೀಡಲಾಗುವುದು. ಪ್ರತಿಯೊಂದು ಗ್ರಾಮದಲ್ಲೂ ಸಸಿ ನೆಟ್ಟು ವನ ಮಹೋತ್ಸವ ಆಚರಿಸಿ, ಪರಿಸರ ರಕ್ಷಣೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಲಾಗುವುದು’ ಎಂದರು.
‘ಗ್ರಾಮ ಪಂಚಾಯಿತಿ ಅಧಿನಿಯಮದ ಅಡಿಯಲ್ಲಿ, ಸದಸ್ಯರೆಲ್ಲರ ಸಹಕಾರದೊಂದಿಗೆ, ಪ್ರತಿಯೊಂದು ಹಳ್ಳಿಗಳಲ್ಲೂ ಶುದ್ಧ ಕುಡಿಯುವ ನೀರು, ಕಾಂಕ್ರಿಟ್ ರಸ್ತೆ, ಶೌಚಾಲಯ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳನ್ನು ನರೇಗಾ ಯೋಜನೆಯಡಿ ಮಾಡಿಸಲಾಗುವುದು. ಮಾದರಿ ಗ್ರಾಮಪಂಚಾಯಿತಿ ಮಾಡಲು ಪ್ರಾಮಾಣಿಕವಾಗಿ ದುಡಿಯುತ್ತೇನೆ. ಗುಣಮಟ್ಟದ ಕಾಮಗಾರಿಗೆಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ನಾಜಿಯಾಖಾನ್ ಜವಾಹರ್, ಉಪಾಧ್ಯಕ್ಷೆ ಆನಂದಮ್ಮನಾಗರಾಜು, ಸದಸ್ಯರಾದ ಹನುಮಂತಯ್ಯ, ಲಕ್ಷ್ಮಿ ರೇವಣ್ಣ, ತಿಮ್ಮಕ್ಕ ಪುಟ್ಟಮಾರಯ್ಯ, ಸುಮ.ಜಿ. ಹನುಮಂತರಾಜು, ಕೃಷ್ಣಪ್ಪ, ಪದ್ಮ ಹನುಮಂತರಾಜು, ಕುಮಾರ್.ಎಲ್, ಎಂ.ಸಿ.ಬಲರಾಮು, ಗಂಗರಾಜು, ಗೌರಮ್ಮ ಮುನಿರಾಜು, ಮೀನಾಕ್ಷಿ ಆನಂದ್, ಶ್ರೀನಿವಾಸಮೂರ್ತಿ, ಪಿಡಿಒ ವಿಜಯಕುಮಾರ್, ಮುಖಂಡರಾದ ಶಂಕರಪ್ಪ, ಬೈಲನರಸಯ್ಯ, ವಿನೋದ್ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಸಿಹಿ ವಿತರಿಸಲಾಯಿತು. ಕನ್ನಡ ಪರವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.