ರಾಮನಗರ: ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ರಾಜಕೀಯ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆಯುತ್ತಿದೆ. ಬಿಜೆಪಿ–ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ನಿಂದ ಕಣಕ್ಕಿಳಿಯುವುದು ಬಹುತೇಕ ಅಂತಿಮವಾಗುತ್ತಿದೆ ಎನ್ನುತ್ತಿರುವಾಗಲೇ ಬಿಜೆಪಿಯ ಸಿ.ಪಿ. ಯೋಗೇಶ್ವರ್ ವರಸೆ ಬದಲಿಸಿದ್ದಾರೆ.
ಬಿಜೆಪಿ ಟಿಕೆಟ್ಗೆ ಪಟ್ಟು ಹಿಡಿದು ಸೋಮವಾರ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಯೋಗೇಶ್ವರ್, ಬಿಜೆಪಿ ಟಿಕೆಟ್ ಸಿಗದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುವ ಸವಾಲು ಹಾಕಿದ್ದಾರೆ. ಕ್ಷೇತ್ರದ ಮೇಲೆ ಹಿಡಿತ ಹೊಂದಿರುವ ಅವರ ಈ ನಡೆ ಮೈತ್ರಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
‘ಕೈ’ನಿಂದ ಕಣಕ್ಕೆ?: ‘ಕಾಂಗ್ರೆಸ್ನಿಂದ ಸ್ಪರ್ಧಿಸುವ ಇಂಗಿತವಿಲ್ಲ. ಮುಂದೇನಾಗುತ್ತದೊ ಗೊತ್ತಿಲ್ಲ’ ಎಂಬ ಒಗಟಿನ ಮಾತನ್ನಾಡಿರುವ ಸಿಪಿವೈ, ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ನಿಂದ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಬಿಜೆಪಿ ಮತ್ತು ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರುತ್ತಿವೆ.
‘ಕೈ’ನಿಂದ ಕಣಕ್ಕಿಳಿಯುವುದಕ್ಕಾಗಿಯೇ ಪರಿಷತ್ ಸ್ಥಾನಕ್ಕೆ ಯೋಗೇಶ್ವರ್ ದಿಢೀರನೇ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಪಕ್ಷದ ಕೆಲ ನಾಯಕರು ಯೋಗೇಶ್ವರ್ ಅವರನ್ನು ಕಾಂಗ್ರೆಸ್ನಿಂದ ಕಣಕ್ಕಿಳಿಸುವ ಕುರಿತು ಈಗಾಗಲೇ ಮಾತುಕತೆ ನಡೆಸಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಸಿಪಿವೈ ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು ಅವರ ಮುಂದಿನ ರಾಜಕೀಯ ನಡೆ ಕುರಿತು ಕುತೂಹಲ ಮೂಡಿಸಿದೆ.
ತ್ರಿಕೋನ ಸ್ಪರ್ಧೆ?: ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸುವುದನ್ನು ತಳ್ಳಿ ಹಾಕುತ್ತಲೇ ಬಂದಿದ್ದ ಮಾಜಿ ಸಂಸದ ಡಿ.ಕೆ. ಸುರೇಶ್, ತಮ್ಮ ನಿಲುವು ಸಡಿಲಿಸಿದ್ದಾರೆ. ಪಕ್ಷದ ತೀರ್ಮಾನ ಒಪ್ಪಿಕೊಳ್ಳಬೇಕಾಗುತ್ತದೆ ಎಂದಿರುವ ಅವರು ಸ್ಪರ್ಧೆಯ ಸುಳಿವು ನೀಡಿದ್ದಾರೆ.
ಸಿಪಿವೈ ಪಕ್ಷಕ್ಕೆ ಬರಲು ಒಪ್ಪದಿದ್ದರೆ ಏರ್ಪಡುವ ತ್ರಿಕೋನ ಸ್ಪರ್ಧೆಯಲ್ಲಿ ಚನ್ನಪಟ್ಟಣವನ್ನು ‘ಕೈ’ವಶ ಮಾಡಿಕೊಳ್ಳಲು ಡಿ.ಕೆ. ಶಿವಕುಮಾರ್ ತಂತ್ರ ಹೆಣೆದಿದ್ದಾರೆ. ಯೋಗೇಶ್ವರ್ ಸ್ವತಂತ್ರವಾಗಿ ಹಾಗೂ ಬಿಜೆಪಿ–ಜೆಡಿಎಸ್ ಮೈತ್ರಿಕೂಟದಿಂದ ನಿಖಿಲ್ ಅಥವಾ ಬೇರೊಬ್ಬರು ಸ್ಪರ್ಧಿಸಿದರೆ, ಸಹೋದರ ಸುರೇಶ್ ಕಣಕ್ಕಿಳಿಸುವ ಆಲೋಚನೆ ಡಿಕೆಶಿಯದ್ದು ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ನಾಮಪತ್ರ ಸಲ್ಲಿಕೆಗೆ ಇನ್ನು ನಾಲ್ಕೇ ದಿನ ಬಾಕಿ ಇದ್ದರೂ, ಪ್ರಮುಖ ಮೂರು ಪಕ್ಷಗಳಿಂದ ಅಭ್ಯರ್ಥಿ ಅಂತಿಮವಾಗಿಲ್ಲ. ಟಿಕೆಟ್ ಕುರಿತು ದಿನದಿಂದ ದಿನಕ್ಕೆ ನಡೆಯುತ್ತಿರುವ ಬೆಳವಣಿಗೆಗಳು ಕಾರ್ಯಕರ್ತರ ತಲೆಗೆ ಹುಳು ಬಿಟ್ಟಂತಾಗಿದೆ. ಯಾರ ಪರ ಕೆಲಸ ಮಾಡಬೇಕು ಎಂಬ ಸ್ಪಷ್ಟತೆ ಇಲ್ಲದೆ ಗೊಂದಲಕ್ಕೆ ಸಿಲುಕಿದ್ದಾರೆ.
ಜೆಡಿಎಸ್ ಮುಂದಿನ ನಡೆ ಏನು? ಕ್ಷೇತ್ರವನ್ನು ಬಿಜೆಪಿಗೆ ಬಿಡದೆ ಜೆಡಿಎಸ್ನಿಂದಲೇ ಯೋಗೇಶ್ವರ್ ಕಣಕ್ಕಿಳಿಸಲು ಮುಂದಾಗಿದ್ದ ಪಕ್ಷಕ್ಕೆ ‘ಸೈನಿಕ’ನ ಯೂ ಟರ್ನ್ ಇಕ್ಕಟ್ಟಿಗೆ ಸಿಲುಕಿಸಿದೆ. ಯೋಗೇಶ್ವರ್ ಬಿಜೆಪಿ ತೊರೆದರೆ ಕ್ಷೇತ್ರದಲ್ಲಿ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗಲಿದ್ದು 2028ರ ಸಾರ್ವತ್ರಿಕ ಚುನಾವಣೆಯಲ್ಲೂ ಕ್ಷೇತ್ರ ಕೈ ತಪ್ಪುವ ಆತಂಕ ಎಚ್ಡಿಕೆ ಅವರನ್ನು ಕಾಡುತ್ತಿದೆ. ಸ್ಪರ್ಧೆಗೆ ಪುತ್ರ ನಿಖಿಲ್ ಕುಮಾರಸ್ವಾಮಿ ನಿರಾಕರಿಸಿದರೂ ಪಕ್ಷದಿಂದ ಯಾರನ್ನಾದರೂ ನಿಲ್ಲಿಸಲೇಬೇಕಾದ ಅನಿವಾರ್ಯತೆ ಅವರಿಗಿದೆ. ಹಾಗಾಗಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಜಯಮುತ್ತು ಅವರನ್ನು ಕಣಕ್ಕಿಳಿಸುವ ಆಲೋಚನೆ ಅವರ ಮನದಲ್ಲಿದೆ ಎನ್ನುತ್ತವೆ ಜೆಡಿಎಸ್ ಮೂಲಗಳು.
ಜೆಡಿಎಸ್ಗೆ ಗೇಟ್ಪಾಸ್ ಕೊಡಲು ಕೈ ತಂತ್ರ ಸ್ವತಂತ್ರವಾಗಿ ಯೋಗೇಶ್ವರ್ ಮತ್ತು ಮೈತ್ರಿ ಅಭ್ಯರ್ಥಿಯಾಗಿ ಬೇರೆಯವರು ಕಣಕ್ಕಿಳಿದರೆ ಆಗುವ ಮತ ವಿಭಜನೆಯಿಂದ ಸಹೋದರ ಡಿ.ಕೆ. ಸುರೇಶ್ ಗೆಲುವಿನ ಹಾದಿ ಸುಗಮವಾಗಲಿದೆ ಎಂಬ ಲೆಕ್ಕಾಚಾರ ಡಿಕೆಶಿ ಅವರದ್ದು. ಒಂದು ವೇಳೆ ಯೋಗೇಶ್ವರ್ ಬಿಜೆಪಿಯಿಂದಲೇ ಕಣಕ್ಕಿಳಿದರೆ ತಮ್ಮ ಆಪ್ತ ರಘುನಂದನ್ ರಾಮಣ್ಣ ಅವರನ್ನು ಅಭ್ಯರ್ಥಿ ಮಾಡುವ ಆಲೋಚನೆಯೂ ಅವರಿಗಿದೆ. ಇದರಿಂದ ಯೋಗೇಶ್ವರ್ಗೆ ಲಾಭವಾದರೂ ಕ್ಷೇತ್ರ ಮತ್ತು ಜಿಲ್ಲೆಯಿಂದ ಜೆಡಿಎಸ್ಗೆ ಗೇಟ್ಪಾಸ್ ಕೊಟ್ಟಂತಾಗುತ್ತದೆ ಎಂಬ ಲೆಕ್ಕಾಚಾರ ನಮ್ಮ ನಾಯಕರದ್ದು ಎನ್ನುತ್ತಾರೆ ಸ್ಥಳೀಯ ಕಾಂಗ್ರೆಸ್ ಮುಖಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.