ಕನಕಪುರ: ತಾಲ್ಲೂಕಿನ ಚೀಲೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಮತ್ತು ಹಣ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ತಂಡವು ಬುಧವಾರ ಪಂಚಾಯಿತಿಗೆ ಭೇಟಿನೀಡಿ ಪರಿಶೋಧನೆ ಪ್ರಾರಂಭಿಸಿತು.
ಪಂಚಾಯಿತಿಯಲ್ಲಿ ಪಂಚಾಯಿತಿ ಅಧ್ಯಕ್ಷೆ ಶೋಭಾ ರವಿಗೌಡ ಮತ್ತು ಅಧಿಕಾರಿಗಳು ಸೇರಿ ವರ್ಗ-1 ಮತ್ತು 14ನೇ ಹಣಕಾಸನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಉಪಾಧ್ಯಕ್ಷೆ ಸುಧಾ ನಾಗೇಶ್ ಆರೋಪಿಸಿದ್ದರು.
ಈ ಹಿನ್ನೆಲೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಲ್.ಮಧು ಅವರು ಅಧಿಕಾರಿ
ಗಳ ತಂಡವು ಪಂಚಾಯಿತಿಗೆ ಭೇಟಿ ನೀಡಿ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಂಶಗಳ ಬಗ್ಗೆ ತನಿಖೆ ನಡೆಸಿ ವಿವರವಾದ ವರದಿಯನ್ನು 7 ದಿನಗಳ ಒಳಗೆ ಸಲ್ಲಿಸುವಂತೆ ಆದೇಶಿಸಿದ್ದರು.
ಜಿಲ್ಲಾ ಪಂಚಾಯಿತಿ ಲೆಕ್ಕ ಅಧೀಕ್ಷಕ ಗಂಗರಾಜು, ಲೆಕ್ಕ ಸಹಾಯಕ ಗಿರೀಶ್, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಬಿ.ಎ.ಮೋಹನ್ ಬಾಬು, ಲೆಕ್ಕ ಸಹಾಯಕ ರಾಜು ಅಧಿಕಾರಿಗಳ ತಂಡವು ಬುಧವಾರದಿಂದ ಪಂಚಾಯಿತಿಯಲ್ಲಿ ಲೆಕ್ಕ ಪರಿಶೋಧನೆಯನ್ನು ಪ್ರಾರಂಭಿಸಿದೆ. ತನಿಖೆ ವೇಳೆ ಪಂಚಾಯಿತಿ ಅಧ್ಯಕ್ಷೆ ಶೋಭಾ ರವಿಗೌಡ, ಉಪಾಧ್ಯಕ್ಷೆ ಸುಧಾ ನಾಗೇಶ್, ಪಿಡಿಒ ದಯಾನಂದ ಸಾಗರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.