ADVERTISEMENT

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅಗತ್ಯ: ಮಾಜಿ ಸಚಿವ ಎಚ್‌.ಎಂ. ರೇವಣ್ಣ ಸಲಹೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 8:12 IST
Last Updated 9 ನವೆಂಬರ್ 2021, 8:12 IST
ಮಾಗಡಿ ತಾಲ್ಲೂಕಿನ ಶ್ರೀಪತಿಹಳ್ಳಿ ಶಾಲೆಯ ಮಕ್ಕಳಿಗೆ ಮಾಜಿ ಸಚಿವ ಎಚ್‌.ಎಂ. ರೇವಣ್ಣ ನೋಟ್‌ಬುಕ್‌, ಸಿಹಿ ವಿತರಿಸಿದರು. ಕೃಷ್ಣಪ್ಪ, ಶಶಾಂಕ್‌ ರೇವಣ್ಣ, ರಾಮಕೃಷ್ಣಯ್ಯ, ತೇಜಸ್‌, ಶಾಲಾ ಮಕ್ಕಳು, ಶಿಕ್ಷಕರು ಇದ್ದರು
ಮಾಗಡಿ ತಾಲ್ಲೂಕಿನ ಶ್ರೀಪತಿಹಳ್ಳಿ ಶಾಲೆಯ ಮಕ್ಕಳಿಗೆ ಮಾಜಿ ಸಚಿವ ಎಚ್‌.ಎಂ. ರೇವಣ್ಣ ನೋಟ್‌ಬುಕ್‌, ಸಿಹಿ ವಿತರಿಸಿದರು. ಕೃಷ್ಣಪ್ಪ, ಶಶಾಂಕ್‌ ರೇವಣ್ಣ, ರಾಮಕೃಷ್ಣಯ್ಯ, ತೇಜಸ್‌, ಶಾಲಾ ಮಕ್ಕಳು, ಶಿಕ್ಷಕರು ಇದ್ದರು   

ಮಾಗಡಿ: ಗ್ರಾಮೀಣ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯುವಂತಾಗಬೇಕು ಎಂದು ಮಾಜಿ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದರು.

ಶ್ರೀಪತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಸೋಮವಾರ ಉಚಿತವಾಗಿ ನೋಟ್‌ಬುಕ್‌ ಮತ್ತು ಸಿಹಿ ವಿತರಿಸಿ ಅವರು ಮಾತನಾಡಿದರು.

‘ಸರ್ಕಾರಿ ಜೀಪ್‌ ಚಾಲಕನ ಮಗನನ್ನು ಸಚಿವರನ್ನಾಗಿಸಿ ಗೌರವಿಸಿರುವ ಮಾಗಡಿ ಜನತೆ ಮತ್ತು ರಂಗನಾಥ ಸ್ವಾಮಿಯನ್ನು ನಾನು ಮರೆಯಲಾರೆ. ನಾನು ಎಲ್ಲಿದ್ದರೂ ಮಾಗಡಿಯನ್ನು ಮರೆಯುವುದಿಲ್ಲ. ಕಲ್ಯಾ ಕಾಲೊನಿ ಸರ್ಕಲ್‌ ಬಳಿಯ ಮಾಗಡಿ–ಕುಣಿಗಲ್‌ ರಸ್ತೆಯಲ್ಲಿ ಸರ್ಕಲ್‌ ನಿರ್ಮಿಸಿ ಜನತೆಗೆ ಅನುಕೂಲ ಮಾಡಿಕೊಡುವಂತೆ ಕೆಶಿಪ್‌ ಅಧಿಕಾರಿಗಳಿಗೆ ಕೋರುತ್ತೇನೆ’ ಎಂದು ಹೇಳಿದರು.

ADVERTISEMENT

ಮುಖಂಡ ಶ್ರೀಪತಿಹಳ್ಳಿ ಕೃಷ್ಣಪ್ಪ ಮಾತನಾಡಿ, ಕುಡಿಯುವ ನೀರಿಲ್ಲದೆ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುತ್ತಿದ್ದ ಕಾಲದಲ್ಲಿ ಸಚಿವರಾಗಿದ್ದ ರೇವಣ್ಣ ಮಂಚನಬೆಲೆ ಜಲಾಶಯದ ನೀರನ್ನು ಪಟ್ಟಣಕ್ಕೆ ಒದಗಿಸಿದರು. ಬೆಂಗಳೂರು–ಮಾಗಡಿ ರಸ್ತೆ
ನಿರ್ಮಾಣ, ಅಂಗನವಾಡಿ ಕೇಂದ್ರಗಳು, ವಸತಿರಹಿತರಿಗೆ ಮನೆಗಳನ್ನು ಕಟ್ಟಿಸಿ ಕೊಡುವ ಮೂಲಕ ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವ ಯೋಜನೆಗೆ ಚಾಲನೆ ನೀಡಿದರು ಎಂದು
ಹೇಳಿದರು.

ಕಲ್ಯಾ ಬೆಸ್ತರ ಸಂಘದ ಮುಖಂಡ ಗಂಗಭೈಲಯ್ಯ, ಶ್ರೀಪತಿಹಳ್ಳಿ ಹೋರಾಟಗಾರ ರಾಮಕೃಷ್ಣಯ್ಯ, ಸಿದ್ದರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.