ಮಾಗಡಿ: ತಾಲ್ಲೂಕಿನ ಜಮಾಲ್ ಪಾಳ್ಯದ ಸರ್ಕಾರಿ ಉರ್ದು ಶಾಲೆಗೆ ತೆರಳುವ ಮಕ್ಕಳ ಅನುಕೂಲಕ್ಕಾಗಿ ಕೆ–ಶಿಫ್ ಅಧಿಕಾರಿಗಳು ಸರ್ವೀಸ್ ರಸ್ತೆ ಮಾಡಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ನೇತೇನಹಳ್ಳಿ ಗ್ರಾ. ಪಂ ಅಧ್ಯಕ್ಷ ಪುರುಷೋತ್ತಮ್ ಆರೋಪಿಸಿದರು.
ನೇತೇನಹಳ್ಳಿ ಗ್ರಾ. ಪಂ ವ್ಯಾಪ್ತಿಯ ಜಮಾಲ್ ಪಾಳ್ಯದ ಸರ್ಕಾರಿ ಉರ್ದು ಶಾಲೆಗೆ ಸೋಮವಾರ ಭೇಟಿ ನೀಡಿ ಮಾತನಾಡಿದ ಅವರು, ‘ಈ ಸಂಬಂಧ ಮಾಗಡಿ–ಹುಲಿಯೂರು ದುರ್ಗ ರಸ್ತೆ ತಡೆದು ಹೋರಾಟ ನಡೆಸಲಾಗುತ್ತದೆ’ ಎಂದು ಹೇಳಿದರು.
ಜಮಾಲ್ ಪಾಳ್ಯದ ಬಳಿ ಕೆ–ಶಿಪ್ ಅಧಿಕಾರಿಗಳು ರಸ್ತೆ ನಿರ್ಮಿಸುವ ಮುನ್ನ ಮುಖ್ಯ ರಸ್ತೆಯಿಂದ ಉರ್ದು ಶಾಲೆಗೆ ಹೋಗಲು ಸರ್ವೀಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ರಸ್ತೆ ನಿರ್ಮಾಣವಾಗಿ ಒಂದು ವರ್ಷ ಕಳೆದಿದೆ. ಆದರೆ, ಇನ್ನೂ ಸರ್ವೀಸ್ ರಸ್ತೆ ನಿರ್ಮಿಸಿಲ್ಲ. ಇದರಿಂದ ಕೊರಕಲು ಮಾರ್ಗದಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗುವ ದುಃಸ್ಥಿತಿ ನಿರ್ಮಾಣವಾಗಿದ್ದು, ಕೆಲ ವಿದ್ಯಾರ್ಥಿಗಳು ಬಿದ್ದು, ಗಾಯಗೊಂಡಿದ್ದಾರೆ ಎಂದರು.
ಶಾಲಾ ಮಕ್ಕಳಿಗೆ ಅನುಕೂಲ ಮಾಡಿಕೊಡಲು ಆಗ್ರಹಿಸಿ ರಸ್ತೆ ತಡೆ ನಡೆಸಿ ಹೋರಾಟ ಮಾಡುವುದಾಗಿ ಪಾಳ್ಯದ ಮುಖಂಡ ರಫೀಕ್ ಪಾಷಾ ತಿಳಿಸಿದರು. ಮುಖ್ಯಶಿಕ್ಷಕ ರಂಗೇಗೌಡ ಹಾಗೂ ಪಾಳ್ಯದ ನಿವಾಸಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.