ಕೋಡಿಹಳ್ಳಿ (ಕನಕಪುರ): ಮಕ್ಕಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಪುಸ್ತಕದ ಹುಳುವಾಗದೆ ಪುಸ್ತಕದ ಆಚೆಗಿನ ಜಗತ್ತನ್ನು ಚಿಕ್ಕಂದಿನಿಂದಲೇ ತಿಳಿದುಕೊಳ್ಳಬೇಕು ಎಂದು ಡಿಕೆಎಸ್ ಹಿಪ್ಪೊ ಕ್ಯಾಂಪಸ್ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷೆ ಗೌರಮ್ಮ ಕೆಂಪೇಗೌಡ ಹೇಳಿದರು.
ಇಲ್ಲಿನ ಕೋಡಿಹಳ್ಳಿ ಹೋಬಳಿ ಪ್ಲಾಂಟೇಷನ್ ಬಳಿಯಿರುವ ಡಿಕೆಎಸ್ ಹಿಪ್ಪೊ ಕ್ಯಾಂಪಸ್ ಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳಿಗೆ ಪಾಠಕ್ಕಿಂತ ಆಟ ಆಡುವುದೆಂದರೆ ಹೆಚ್ಚು ಖುಷಿ. ಮಕ್ಕಳು ಆಟ ಆಡಿಕೊಂಡೇ ಬೆಳೆಯಬೇಕು. ಅದಕ್ಕಾಗಿ ಶಾಲೆಗಳಲ್ಲಿ ಮಕ್ಕಳಿಗೆ ಆಟದ ಮೂಲಕವೇ ಎಲ್ಲವನ್ನೂ ಕಲಿಸಬೇಕು. ಹೆಚ್ಚು ಸಮಯ ಆಟಕ್ಕೆ ಅವಕಾಶ ನೀಡಬೇಕೆಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಶಾಲೆಯ ಮನೋಜ್ ಮತ್ತು ಯಶೋಧ ಕ್ರೀಡಾಜ್ಯೋತಿ ತಂದರು. ಶಾಂತಿಯ ಸಂಕೇತವಾಗಿ ಪಾರಿವಾಳಗಳನ್ನು ಹಾರಿಸಲಾಯಿತು. ಪುಣಾಣಿ ಮಕ್ಕಳು ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಟಿಎಪಿಸಿಎಂಎಸ್ ಅಧ್ಯಕ್ಷ ಮುನಿಹುಚ್ಚೇಗೌಡ, ಪಂಚಾಯಿತಿ ಸದಸ್ಯೆ ರಾಜೇಶ್ವರಿ, ಶಾಲೆಯ ಮುಖ್ಯ ಶಿಕ್ಷಕಿ ಆಂತೋಣಿ ಮೇರಿ, ಸಹ ಶಿಕ್ಷಕರಾದ ಆಶಾ, ಸಂಜನಾ ಕೈಲಾಸ್, ನೇತ್ರಾವತಿ, ದಿವ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.