ರಾಮನಗರ: ನಗರದ ಹೊರವಲಯದಲ್ಲಿರುವ ಚಾಮುಂಡಿಪುರದ ತೆಂಗಿನ ತೋಟವೊಂದರಲ್ಲಿ ಮಂಗಳವಾರ ಆಹಾರವಿಲ್ಲದೆ ಚಿರತೆಯೊಂದು ಅಸ್ವಸ್ಥಗೊಂಡಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಿಸಿ ಉಪಚರಿಸಿದರು.
ಸೋಮವಾರ ರಾತ್ರಿ ಆಹಾರ ಅರಸಿ ಚಿರತೆ ಗ್ರಾಮದತ್ತ ಬಂದಿದ್ದು, ಎಲ್ಲಿಯೂ ಆಹಾರ ಸಿಗದ ಕಾರಣ ಹಸಿವಿನಿಂದ ನಿತ್ರಾಣಗೊಂಡು ತೆಂಗಿನ ತೋಟದಲ್ಲೇ ಮಲಗಿತ್ತು. ಬೆಳಗ್ಗೆ ಗ್ರಾಮದ ಯುವಕರು ಇದನ್ನು ಗಮನಿಸಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಚಿರತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಹಾಕಿ ರಕ್ಷಣೆ ಮಾಡಿದರು. ನಂತರ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪಶುವೈದ್ಯರು ಚಿರತೆಗೆ ಪ್ರೋಟೀನ್ ಇಂಜೆಕ್ಷನ್ ನೀಡಿದರು. ತರವಾಯ ಅದನ್ನು ಅರಣ್ಯ ಇಲಾಖೆಯ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.
‘ಮೂರು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದ್ದು, ಹಸಿವಿನಿಂದ ಬಳಲಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಸೂಕ್ತ ಚಿಕಿತ್ಸೆ ಬಳಿಕ ಅದನ್ನು ಕಾಡಿಗೆ ಬಿಡಲಾಗುವುದು’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಮಕೃಷ್ಣ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.