ADVERTISEMENT

ನಗರದೊಳಗೆ ಸೆರೆ ಸಿಕ್ಕ ಚಿರತೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 12:48 IST
Last Updated 1 ಜುಲೈ 2019, 12:48 IST
ಬೋನಿಗೆ ಬಿದ್ದ ಚಿರತೆ
ಬೋನಿಗೆ ಬಿದ್ದ ಚಿರತೆ   

ರಾಮನಗರ: ಇಲ್ಲಿನ ಹಳೇ ಬಸ್‌ ನಿಲ್ದಾಣದ ಸಮೀಪ ಅರ್ಕಾವತಿ ನದಿ ದಂಡೆಯ ಮನೆಯೊಂದರ ಬಳಿ ಇಡಲಾಗಿದ್ದ ಬೋನಿನಲ್ಲಿ ಭಾನುವಾರ ತಡರಾತ್ರಿ ಚಿರತೆ ಸೆರೆಯಾಯಿತು.

ತಡರಾತ್ರಿ 2.30ರ ಸುಮಾರಿಗೆ ಚಿರತೆ ಬೋನಿಗೆ ಬಿದ್ದಿತು. ಅದರ ಕೂಗಾಟ ಕೇಳಿ ಸ್ಥಳೀಯರು ಎಚ್ಚೆತ್ತಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಸೋಮವಾರ ಮುಂಜಾನೆ 4ರ ಸುಮಾರಿಗೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಚಿರತೆ ಸಮೇತ ಬೋನನ್ನು ಕೊಂಡೊಯ್ದರು.
ಎರಡು ವರ್ಷ ಪ್ರಾಯದ ಗಂಡು ಚಿರತೆ ಇದಾಗಿದೆ. ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗುವುದು. ಜನರ ಮನವಿ ಮೇರೆಗೆ ಸ್ಥಳದಲ್ಲಿ ಮತ್ತೆರಡು ಬೋನುಗಳನ್ನು ಇಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ದಾಳೇಶ್‌ ತಿಳಿಸಿದರು.

ನಿಟ್ಟುಸಿರು ಬಿಟ್ಟ ಜನತೆ: ಅರ್ಕಾವತಿ ನದಿ ದಡದಲ್ಲಿ ಕಳೆದ 15 ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಜನರು ಆತಂಕಕ್ಕೆ ಒಳಗಾಗಿದ್ದರು.

ADVERTISEMENT

ಈಚೆಗೆ ರಾಘವೇಂದ್ರ ಕಾಲೊನಿಯಲ್ಲಿನ ಮನೆಯೊಂದಕ್ಕೆ ನುಗ್ಗಿ ಸಾಕುನಾಯಿಯನ್ನು ಕೊಂದಿದ್ದ ಚಿರತೆ, ಮತ್ತೆ ದಾಳಿ ಮಾಡಿ ಬೀದಿ ನಾಯಿಗಳನ್ನು ಹೊತ್ತೊಯ್ದಿತ್ತು. ರಾತ್ರಿ ಹೊತ್ತು ಮನೆಯ ಮಹಡಿ ಮೇಲೂ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.

ರಾಮದೇವರ ಬೆಟ್ಟದ ಬಳಿಯಿಂದ ಅರ್ಕಾವತಿ ನದಿ ಪ್ರದೇಶಕ್ಕೆ ಬಂದಿರುವ ಚಿರತೆಗಳು ಅಲ್ಲಿನ ಜೊಂಡು ಹುಲ್ಲಿನ ನಡುವೆ ಆಶ್ರಯ ಪಡೆದಿವೆ. ನಗರದ ಒಳಗೇ ನುಗ್ಗಿ ದಾಳಿ ನಡೆಸುತ್ತಿವೆ. ಹೀಗಾಗಿ ಅರ್ಕಾವತಿ ನದಿ ದಡವನ್ನು ಸ್ವಚ್ಛಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.