ಮಾಗಡಿ: ಗ್ರಾಮದೇವತೆಗಳ ಆರಾಧನೆಯಿಂದ ಬದುಕಿನಲ್ಲಿ ನೆಮ್ಮದಿ ಸಿಗಲಿದೆ. ಅಲ್ಲದೆ, ಮಳೆ ಬೆಳೆಯಾಗಿ ಸಕಲರು ಸಂತೃಪ್ತಿಯಿಂದ ಬದುಕಲು ಸಾಧ್ಯವಾಗಲಿದೆ ಎಂದು ಪುರಸಭೆ ಸದಸ್ಯ.ಆರ್.ಸುರೇಶ್ ತಿಳಿಸಿದರು.
ಪಟ್ಟಣದ ಕೋಟಪ್ಪನಪಾಳ್ಯ, ಚನ್ನಪ್ಪ ಬಡಾವಣೆಯಲ್ಲಿ ಸೋಮವಾರ ರಾತ್ರಿ ನಡೆದ ಚೌಡೇಶ್ವರಿ ಅಮ್ಮನವರ ಊರಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತಾಪಿ ವರ್ಗದವರು ಸುಗ್ಗಿ ನಂತರ ಸಕಲ ಚರಾಚರ ಜೀವಿಜಂತುಗಳಿಗೆ ಒಳಿತಾಗಲಿ ಎಂದು ಕುಲದೇವತೆ ಮತ್ತು ಗ್ರಾಮದೇವತೆಗಳನ್ನು ಆರಾಧನೆ ಮಾಡಿ, ನೆಂಟರಿಗೆ ಸಾಮೂಹಿಕವಾಗಿ ಊಟ ಹಾಕಿಸುವುದು ಪುರಾತನ ಕಾಲದಿಂದಲೂ ನಡೆದು ಬಂದ ವಾಡಿಕೆ ಎಂದು ತಿಳಿಸಿದರು.
ಚನ್ನಪ್ಪ ಬಡಾವಣೆ ಮುಖಂಡ ವೆಂಕಟೇಶ್.ಜಿ.ಮಾತನಾಡಿ, ಪೂರ್ವಿಕರು ನಿಸ್ಪೃಹ ಹೃದಯದವರು. ಮನೆದೇವತೆ ಚೌಡೇಶ್ವರಿ, ಕಾಳಿಕಾಂಬ ದೇವಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ಪೂಜೆ, ಬಲಿದಾನ ಹಿಂದಿನಿಂದಲೂ ನಡೆದು ಬಂದ ಪದ್ಧತಿಯಾಗಿದೆ ಎಂದರು.
ಕೋಟಪ್ಪನಪಾಳ್ಯದ ಮುಖಂಡರಾದ ರತ್ನಮ್ಮ ರಂಗೇಗೌಡ, ಶಂಕರ್, ಚನ್ನಪ್ಪಬಡಾವಣೆ ಮುಖಂಡರಾದ ಮಹೇಶ್, ಲೋಕೇಶ್, ಮುತ್ತುರಾಜು, ಶಿವಕುಮಾರ್, ಹರೀಶ್, ಎನ್.ಲೋಕೇಶ್, ಲೇಖಕ ಖಂಡಪರಶು, ಲಕ್ಷ್ಮಮ್ಮ, ವಕೀಲ ಸುರೇಶ್, ನರಸಪ್ಪ, ತಿಮ್ಮೇಗೌಡ, ಪತ್ರಕರ್ತ ನರಸಿಂಹಮೂರ್ತಿ, ಬಡಗಿ ಮುತ್ತುರಾಜ್ ಇದ್ದರು.
ಮಹಿಳೆಯರು ಹೂವು –ಹೊಂಬಾಳೆ, ಹಸಿ ತಂಬಿಟ್ಟಿನ ಆರತಿ ಬೆಳಗಿದರು. ವಿವಿಧ ಜನಪದ ಕಲಾತಂಡಗಳು ನೃತ್ಯ ನಡೆಸಿದವು. ದೇವರ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.