ಕುದೂರು(ಮಾಗಡಿ): ಕಣ್ಣೂರು ಗೇಟ್ ಬಳಿ ಇರುವ ವೈದ್ಯ ಸುಭಾಷ್ ಸಿಂಗ್ ಮನೆಯಲ್ಲಿ ಭಾನುವಾರ ರಾತ್ರಿ ದರೋಡೆ ನಡೆದಿದೆ. ರಾತ್ರಿ 9.30ರ ಸಮಯದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಮಗು ಎತ್ತಿಕೊಂಡು ತುಂಬಾ ಅಯಾಸವಾಗುತ್ತಿದೆ ವೈದ್ಯರ ಬಳಿ ಔಷಧ ಕೇಳಲು ಬಂದಿದ್ದೇನೆ. ಕುಡಿಯಲು ನೀರು ಕೊಡಿ ಎಂದಿದ್ದಾರೆ. ಇದೇ ಸಮಯಕ್ಕೆ ಇಬ್ಬರು ಯುವಕರು ಕೂಡ ಮಹಿಳೆ ಸಂಬಂಧಿಕರು ಎಂದು ಹೇಳಿಕೊಂಡು ಏಕಾಏಕಿ ಮನೆಯೊಳಗೆ ನುಗ್ಗಿ ಕಣ್ಣಿಗೆ ಕಾರದ ಪುಡಿ ಎರಚಿದ್ದಾರೆ. ನಂತರ 15ಮಂದಿ ಒಳ ನುಗ್ಗಿದ್ದಾರೆ. ಬಾಗಿಲು ಚಿಲಕ ಹಾಕಿದ ಕಳ್ಳರ ತಂಡ, ಕೈಕಾಲು ಕಟ್ಟಿ ಬಾಯಿಗೆ ಟೇಪು ಅಂಟಿಸಿದರು ಎಂದು ಮನೆ ಒಡತಿ ಶಶಿಕಲಾ ಘಟನೆ ಕುರಿತು ವಿವರಿಸಿದರು.
‘ಮಾರಕಾಸ್ತ್ರಗಳಿಂದ ಪುತ್ರರಾದ ಲೋಕನಾಥ್ ಸಿಂಗ್ ಮತ್ತು ಪೃಥ್ವಿಸಿಂಗ್ ಅವರ ಮೇಲೆ ಕಳ್ಳರ ತಂಡ ಮನಸೋಇಚ್ಛೆ ಹೊಡೆದು ಹಲ್ಲೆ ನಡೆಸಿತು. ಮನೆಯಲ್ಲಿದ್ದ ₹50 ಸಾವಿರ ನಗದು, ಚಿನ್ನ ಮತ್ತು ಬೆಳ್ಳಿ ಆಭರಣ, ಲ್ಯಾಪ್ಟಾಪ್, ಮೊಬೈಲ್ ಫೋನ್, ಡಿಜೆರೊ ಕಾರು ಸಮೇತ ದೋಚಿಕೊಂಡು ಪರಾರಿಯಾದರು. ಬಾಯಿಗೆ ಅಂಟಿಸಿದ ಟೇಪು ಬಿಚ್ಚಿಕೊಂಡು ಮನೆ ಹೊರಗೆ ಬಂದ ಮಕ್ಕಳಿಬ್ಬರು ಕೂಗಾಡಿದರು. ನೆರೆಹೊರೆ ಜನರು ಬಂದು ರಕ್ಷಿಸಿದರು. ಈಗ ಪುತ್ರರಿಬ್ಬರು ನೆಲಮಂಗಲ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಶಶಿಕಲಾ ತಿಳಿಸಿದರು.
ವೈದ್ಯ ಸುಭಾಷ್ ಸಿಂಗ್ ಅವರ ತೋಟದ ಮನೆಯೊಳಗೆ 15 ಸಾಕು ನಾಯಿಗಳಿವೆ. 14ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಸುಭದ್ರ ಕೋಟೆಯಂತಿದ್ದ ಮನೆಯೊಳಗೆ ದರೋಡೆ ನಡೆದಿರುವ ಬಗ್ಗೆ ಸ್ಥಳೀಯರು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಳ್ಳರು ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯನ್ನು ಕೊಂಡೊಯ್ಯದಿದ್ದಾರೆ. ಕುದೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.