ADVERTISEMENT

ರಾಮನಗರ: ಜನರ ಆರೋಗ್ಯ ಮಾಹಿತಿ ಗಣಕೀಕೃತ

ಕೊರೊನಾ ವಾರ್‌ರೂಂ, ರಿಮೋಟ್‌ ಐಸಿಯು ಘಟಕಕ್ಕೆ ಸಚಿವರಿಂದ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಮೇ 2020, 9:53 IST
Last Updated 12 ಮೇ 2020, 9:53 IST
ಕಂದಾಯ ಭವನದ ಕೋವಿ‌ಡ್‌-19 ಆಸ್ಪತ್ರೆಯಲ್ಲಿ ರಿಮೋಟ್‌ ಐಸಿಯು ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್‌ ನಾರಾಯಣ್‌ ಸೋಮವಾರ ಚಾಲನೆ ನೀಡಿದರು. ಸಚಿವ ನಾರಾಯಣ ಗೌಡ, ಶಾಸಕ ಎ.ಮಂಜುನಾಥ್‌ ಇದ್ದರು
ಕಂದಾಯ ಭವನದ ಕೋವಿ‌ಡ್‌-19 ಆಸ್ಪತ್ರೆಯಲ್ಲಿ ರಿಮೋಟ್‌ ಐಸಿಯು ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್‌ ನಾರಾಯಣ್‌ ಸೋಮವಾರ ಚಾಲನೆ ನೀಡಿದರು. ಸಚಿವ ನಾರಾಯಣ ಗೌಡ, ಶಾಸಕ ಎ.ಮಂಜುನಾಥ್‌ ಇದ್ದರು   

ರಾಮನಗರ: ಜಿಲ್ಲೆ ಆರೋಗ್ಯ ಕ್ಷೇತ್ರದಲ್ಲಿ ಎರಡು ಮಹತ್ವದ ಯೋಜನೆಗಳಾದ ರಿಮೋಟ್‌ ಐಸಿಯು ಹಾಗೂ ಕೊರೊನಾ ವಾರ್‌ರೂಮ್‌ ಕೇಂದ್ರಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್‌ ನಾರಾಯಣ್‌ ಸೋಮವಾರ ಚಾಲನೆ ನೀಡಿದರು.

ಕೊರೊನಾ ರಾಮ್‌ರೂಂ ಸ್ಥಾಪನೆಗೆ ಪೂರಕವಾಗಿ ಜಿಲ್ಲೆಯಲ್ಲಿನ ಕಾರ್ಯಕರ್ತೆಯರಿಂದ ಜಿಲ್ಲೆಯಲ್ಲಿನ 3 ಲಕ್ಷಕ್ಕೂ ಹೆಚ್ಚು ಮನೆಗಳ 12 ಲಕ್ಷಕ್ಕೂ ಹೆಚ್ಚು ಜನರ ಆರೋಗ್ಯ ಮಾಹಿತಿಯನ್ನು ಕಲೆಹಾಕ
ಲಾಗಿದೆ. ಯಾರು ಯಾರಿಗೆ ಆರೋ
ಗ್ಯದ ಸಮಸ್ಯೆ ಇದೆ. ಎಷ್ಟು ಮಂದಿ ಅಧಿಕ ರಕ್ತದೊತ್ತಡ, ಮಧುಮೇಹ, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂಬೆಲ್ಲ ಮಾಹಿತಿಯನ್ನು ಅವರು ಸಂಗ್ರಹಿಸಿದ್ದಾರೆ. ಇದೀಗ ಇದನ್ನು ವಾರ್‌ರೂಂ ಮೂಲಕ ಆನ್‌ಲೈನ್‌ಗೆ ಅಪ್‌ಲೋಡ್‌ ಮಾಡಲಾಗಿದೆ ಎಂದರು.

ಜೊತೆಗೆ 60 ವರ್ಷ ಮೇಲ್ಪಟ್ಟವರ ಮಾಹಿತಿಯನ್ನೂ ಕಲೆಹಾಕಲಾಗಿದೆ. ಈ ಮಾಹಿತಿಯು ಕೊರೊನಾದಂತಹ ತುರ್ತು ಪರಿಸ್ಥಿತಿಯಲ್ಲಿ ಹೆಚ್ಚು ಬಳಕೆಗೆ ಬರಲಿದೆ. ಅಲ್ಲದೆ ಒಟ್ಟಾರೆ ಆರೋಗ್ಯ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ. ದೇಶದಲ್ಲಿ ಈ ರೀತಿ ಜನರ ಆರೋಗ್ಯ ದತ್ತಾಂಶ ಸಂಗ್ರಹಿಸಿದ ಮೊದಲ ಜಿಲ್ಲೆ ರಾಮನಗರವಾಗಿದೆ ಎಂದು ಸಚಿವರು ಈ ಸಂದರ್ಭ ತಿಳಿಸಿದರು.

ADVERTISEMENT

ರಿಮೋಟ್‌ ಐಸಿಯು: ಕಂದಾಯ ಭವನದಲ್ಲಿನ ಕೋವಿಡ್‌-19 ಆಸ್ಪತ್ರೆಯಲ್ಲಿ ನಿರ್ಮಿಸಲಾದ ರಿಮೋಟ್‌ ಐಸಿಯು ಘಟಕದ ಮೂಲಕ ಜಿಲ್ಲೆಯ ಐಸಿಯು ಅಗತ್ಯತೆಗಳನ್ನು ಪೂರೈಸಲಾಗಿದೆ. ದಿನದ 24 ಗಂಟೆಯು ಸೇವೆ ಸಲ್ಲಿಸಲು 16 ಹಾಸಿಗೆಯ ಸೌಲಭ್ಯ ನೀಡಲಾಗಿದೆ. ಕ್ಲೌಡ್ ಫಿಸಿಶಿಯನ್ ಸಂಸ್ಥೆಯ ಸಹಯೋಗದಲ್ಲಿ ಈ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ರಿಮೋಟ್‌ ಕಮಾಂಡ್‌ನ ಮೂಲಕವೇ ಈ ವ್ಯವಸ್ಥೆ ಸಂಪೂರ್ಣ ಕಾರ್ಯ ನಿರ್ವಹಿಸಲಿದ್ದು, ತಜ್ಞ ವೈದ್ಯರು ಸಲಹೆ ಮಾರ್ಗದರ್ಶನ ನೀಡಲಿದ್ದಾರೆ.

ಆ ಮೂಲಕವೇ ಐಸಿಯುನಲ್ಲಿ ಇರುವ ರೋಗಿಗಳ ಆರೋಗ್ಯ ನಿರ್ವಹಣೆ ಸಾಧ್ಯವಾಗಲಿದೆ. ದ್ವಿತೀಯ ಹಂತದ ಜಿಲ್ಲೆಗಳಲ್ಲಿ ಇಂತಹ ಆರೋಗ್ಯ ಸೇವೆ ಹೊಂದುತ್ತಿರುವ ಅವಕಾಶ ರಾಮನಗರಕ್ಕೆ ದೊರೆತಿದೆ. ಕೊರೊನಾ ಸಂಕಷ್ಟ ಮುಗಿದ ಮೇಲೂ ಇದು ಸಾರ್ವಜನಿಕರ ಬಳಕೆ ಲಭ್ಯವಾಗಲಿದೆ ಎಂದು ಅವರು ಮಾಹಿತಿನೀಡಿದರು.

ಆರೋಗ್ಯ ವ್ಯವಸ್ಥೆ ನಿರ್ವಹಣೆ: ಕೊರೊನಾ ವಾರ್‌ರೂಂ ಮೂಲಕ ಇಡೀ ಜಿಲ್ಲೆಯ ಆರೋಗ್ಯ ವ್ಯವಸ್ಥೆಯನ್ನು ನಿರ್ವಹಣೆ ಮಾಡಲು ವೇದಿಕೆ ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು ಜಿಲ್ಲಾ ಆಸ್ಪತ್ರೆಯವರೆಗೆ ಎಲ್ಲ ಆರೋಗ್ಯ ಸೇವೆಗಳನ್ನು ಒಂದೇ ನಿರ್ವಹಣೆ ವ್ಯವಸ್ಥೆ ಅಡಿ ತರಲಾಗಿದೆ. ಫೀವರ್‍ ಕ್ಲಿನಿಕ್‌ನಿಂದ ಕೋವಿಡ್‌-19 ಆಸ್ಪತ್ರೆವರೆಗೆ ಎಲ್ಲೆಲ್ಲಿ ಎಷ್ಟೆಷ್ಟು ಹಾಸಿಗೆಗಳು ಖಾಲಿ ಇವೆ. ಎಷ್ಟು ರೋಗಿಗಳು ದಾಖಲಾಗಿದ್ದಾರೆ ಎಂಬ ತತ್‌ಕ್ಷಣದ ಮಾಹಿತಿ ವಾರ್‌ರೂಮ್‌ನಲ್ಲಿ ಸಿಗಲಿದೆ ಎಂದು ಅವರು ಹೇಳಿದರು.

ತೋಟಗಾರಿಕಾ ಸಚಿವ ನಾರಾಯಣ ಗೌಡ, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.