ADVERTISEMENT

ಕನಕಪುರ: ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ

ಸ್ಮಶಾನಕ್ಕೆ ಜಾಗ ನಿಗದಿಗೆ ಸಿದ್ದಯ್ಯನದೊಡ್ಡಿ ಗ್ರಾಮಸ್ಥರ ಮನವಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 4:53 IST
Last Updated 29 ಜುಲೈ 2021, 4:53 IST
ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರೊಂದಿಗೆ ಬುಧವಾರ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು
ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಪಕ್ಷದ ಮುಖಂಡರೊಂದಿಗೆ ಬುಧವಾರ ವಿವಿಧ ಕಾಮಗಾರಿಗೆ ಚಾಲನೆ ನೀಡಿದರು   

ಕನಕಪುರ: ಜನರನ್ನು ಭಯಾನಕವಾಗಿ ಕಾಡಿದ್ದ ಕೊರೊನಾ ಸೋಂಕು ನಿಯಂತ್ರಣದಿಂದ ಎಲ್ಲಾ ಕ್ಷೇತ್ರಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ. ಇನ್ನು ಮುಂದೆ ಕ್ಷೇತ್ರದ ಅಭಿವೃದ್ಧಿ ಕಡೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಬುಧವಾರ ಚಾಲನೆ ನೀಡಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಕೊರೊನಾ ಕಾರಣದಿಂದ ಹಲವು ಸಮಯ ಕ್ಷೇತ್ರಕ್ಕೆ ಬರಲು ಆಗಿರಲಿಲ್ಲ. ಈ ಭಾಗದಲ್ಲಿ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಅಗತ್ಯ ಮೂಲ ಸೌಕರ್ಯ ಕೊರತೆಯಿದ್ದು ಅವುಗಳನ್ನು ಮಾಡಲು ಬಂದಿದ್ದೇನೆ. ಮುಂದೆಯು ಈ ಕ್ಷೇತ್ರದಲ್ಲಿ ಆಗಬೇಕಿರುವ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಿ, ಹೆಚ್ಚಿನ ಅನುದಾನ ತಂದು ಕೆಲಸ ಮಾಡಿಕೊಡುವುದಾಗಿ ಭರವಸೆ ನೀಡಿದರು.

ADVERTISEMENT

ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಡಮಾರನಹಳ್ಳಿ, ಹುಳುಗೊಂಡನಹಳ್ಳಿ, ನಾರಾಯಣಪುರ, ಸೊಂಟೇನ ಹಳ್ಳಿ, ಅಣೇದೊಡ್ಡಿ, ರಾಮ ಸಾಗರ, ಗಾರೇಪಾಳ್ಯ, ಎರೇಹಳ್ಳಿ ಗ್ರಾಮ ಗಳಲ್ಲಿ ಕಾಂಕ್ರೀಟ್‌ ರಸ್ತೆ, ಹೊನ್ನಾಲಗನದೊಡ್ಡಿಯಲ್ಲಿ ಚರಂಡಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿದರು.

ಅರಸು ಕಾಲೊನಿ ಮತ್ತು ಸಿದ್ದಯ್ಯನದೊಡ್ಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿದರು. ಕಡಸಿಕೊಪ್ಪ ಗ್ರಾಮದಲ್ಲಿ ಉದ್ಯಾನ ಉದ್ಘಾಟನೆಯನ್ನು ಮಾಡಿದರು.

ಪಿಡಿಒ ದೊಡ್ಡಲಿಂಗೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಎಸ್‌. ಭುಜಂಗಯ್ಯ, ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ರಾಮಕೃಷ್ಣ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಎನ್‌. ರಾಮು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಗೊಲ್ಲಳ್ಳಿ ಸುರೇಶ್‌, ಕೆ.ಎನ್‌. ಲಕ್ಷ್ಮಣ್‌, ಮುಖಂಡರಾದ ಭೈರೇಗೌಡ, ಬನ್ನಿಕುಪ್ಪೆ ರಾಜು, ತಾಮಸಂದ್ರ ನಾಗೇಶ್‌, ಮೇಡಮಾರನಹಳ್ಳಿ ಕುಮಾರ್‌, ಪ್ರದೀಪ, ಶಿವನಂಜಪ್ಪ, ಸಿದ್ದಪ್ಪ, ತಿಮ್ಮಪ್ಪ, ಸಿದ್ದರಾಜು, ವೆಂಕಟೇಶ್‌, ಶಿವಕುಮಾರ್‌, ರಾಘವೇಂದ್ರ, ಕರಿಯಪ್ಪ, ರಂಗಪ್ಪ, ಸೊಂಟೇನಹಳ್ಳಿ ರಾಜು, ಮುನಿರಾಜು, ಮಹದೇವು ಹಾಜರಿದ್ದರು.

ಸ್ಮಶಾನ ಜಾಗಕ್ಕೆ ಒತ್ತಾಯ: ಅನಿತಾ ಕುಮಾರಸ್ವಾಮಿ ಅವರು ವಿವಿಧ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿಕೊಂಡು ಸಿದ್ದಯ್ಯನದೊಡ್ಡಿ ಗ್ರಾಮಕ್ಕೆ ಬಂದಾಗ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡಲು ಸ್ಮಶಾನವಿಲ್ಲ. ಸತ್ತವರ ಮೃತದೇಹವನ್ನು ಅರೆಯ(ಬಂಡೆಯ) ಮೇಲೆ ಸುಟ್ಟು ಸಂಸ್ಕಾರ ಮಾಡುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ನಮಗೆ ಸ್ಮಶಾನದ ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ ಮಾಡಿದರು. ತ್ವರಿತವಾಗಿ ಸಂಬಂಧಪಟ್ಟವರಿಂದ ಮಾಹಿತಿ ಪಡೆದು ಸ್ಮಶಾನದ ಜಾಗದ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.