ADVERTISEMENT

ಎಚ್‌ಡಿಕೆ ಕುಟುಂಬದ ಪಂಶಪಾರಂಪರ್ಯ ರಾಜಕಾರಣ ಶೀಘ್ರ ಅಂತ್ಯ: ಸಿ.ಪಿ. ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2022, 7:11 IST
Last Updated 22 ಡಿಸೆಂಬರ್ 2022, 7:11 IST
 ಸುದ್ದಿಗೋಷ್ಠಿಯಲ್ಲಿ  ಸಿ.ಪಿ. ಯೋಗೇಶ್ವರ್ ಮಾತನಾಡಿದರು
 ಸುದ್ದಿಗೋಷ್ಠಿಯಲ್ಲಿ ಸಿ.ಪಿ. ಯೋಗೇಶ್ವರ್ ಮಾತನಾಡಿದರು   

ರಾಮನಗರ: ರಾಮನಗರಜಿಲ್ಲೆಯಲ್ಲಿ ಕುಮಾರಸ್ವಾಮಿ ಕುಟುಂಬದ ವಂಶಪಾರಂಪರ್ಯ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ಜನತೆ ಅಂತ್ಯ ಹಾಡಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ' ಕ್ಷೇತ್ರದಲ್ಲಿ ₹1,500 ಕೋಟಿ ಅನುದಾನ ತಂದಿರುವುದಾಗಿ ಕುಮಾರಸ್ವಾಮಿ ಹೇಳಿದ್ದು, ಈ ಎಲ್ಲ ಕಾಮಗಾರಿಯನ್ನು ಬೇನಾಮಿ ಹೆಸರಿನಲ್ಲಿ ತಾವೇ ನಡೆಸಿದ್ದಾರೆ. ಗುತ್ತಿಗೆದಾರರಿಂದ ದಂದೆ ನಡೆಸಿ, ಆ ಪಾಪದ ಹಣವನ್ನು ಹೆಲಿಕಾಪ್ಟರ್ ನಲ್ಲಿ ಹೂವಿನ ರೂಪದಲ್ಲಿ ಚೆಲ್ಲಿಸಿಕೊಳ್ಳುತ್ತಿದ್ದಾರೆ' ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಬಗ್ಗೆ ಬಿ.ಎಲ್. ಸಂತೋಷ್ ಹೇಳಿಕೆ ಸರಿಯಾಗಿಯೇ ಇದೆ. ಸಂತೋಷ್ ಜೀ ಅವರ ಬಗ್ಗೆ ವೈಯಕ್ತಿಕ ಟೀಕೆ ಸರಿಯಲ್ಲ. ಅವರು ನಮ್ಮ ನಾಯಕರು ಎಂದರು.

ADVERTISEMENT

ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ವಿಚಾರದಲ್ಲಿ ಜೆಡಿಎಸ್ ಜನರ ದಿಕ್ಕು ತಪ್ಪಿಸುತ್ತಿದೆ. ಕಳೆದ ಬಾರಿಯೂ ಇವರ ಮಾತು ನಂಬಿಕೊಂಡು ಜನರ ಆಸ್ತಿ ಹರಾಜಾಯಿತು ಎಂದು ಟೀಕಿಸಿದರು.

ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ. ಮೇಘಾಲಯದಲ್ಲಿ ಶೇ 90ರಷ್ಟು ಕ್ರಿಶ್ಚಿಯನ್ನರೇ ಇದ್ದರೂ ನಮ್ಮ ಪಕ್ಷವೇ ಆಡಳಿತದಲ್ಲಿದೆ ಎಂದರು.

ಪಕ್ಷ ಬಿಡಲ್ಲ

ಬಿಜೆಪಿಯೇ ನನ್ನ ಮಾತೃ ಪಕ್ಷ. ಚನ್ನಪಟ್ಟಣದಲ್ಲಿ ಅಭಿವೃದ್ದಿ ಆಗಿದೆ, ನನಗೂ ಹೆಸರು ಬಂದಿದೆ ಎಂದರೆ ಅದಕ್ಕೆ ಬಿಜೆಪಿಯೇ ಕಾರಣ. ಅದೇ ಪಕ್ಷದಿಂದಲೇ ಚುನಾವಣೆ ಎದುರಿಸುತ್ತೇನೆ. ಸದ್ಯ ಸಚಿವ ಸ್ಥಾನದ ಕುರಿತು ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದರು.

ಶಾಸಕರಿಗೆ ಹಣದ ಆಮಿಷ ಕುರಿತು ಎಚ್. ವಿಶ್ವನಾಥ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಸಿಪಿವೈ, ಈಗ 2023ರ ಚುನಾವಣೆ ಬಂತು. ಆ ಬಗ್ಗೆ ಮಾತನಾಡುವುದು ಅಪ್ರಸ್ತುತ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.