ADVERTISEMENT

‘ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿ’

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 16 ಜೂನ್ 2019, 13:36 IST
Last Updated 16 ಜೂನ್ 2019, 13:36 IST
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಉಚಿತ ಬೋಧನಾ ಕಾರ್ಯಕ್ರಮವನ್ನು ಡಿಡಿಪಿಐ ಗಂಗಮಾರೇಗೌಡ ಉದ್ಘಾಟಿಸಿದರು
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಉಚಿತ ಬೋಧನಾ ಕಾರ್ಯಕ್ರಮವನ್ನು ಡಿಡಿಪಿಐ ಗಂಗಮಾರೇಗೌಡ ಉದ್ಘಾಟಿಸಿದರು   

ರಾಮನಗರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳಲ್ಲಿ ಶಿಕ್ಷಕರು ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಂಗಮಾರೇಗೌಡ ಹೇಳಿದರು.

ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾರತ ವಿಕಾಸ ಪರಿಷದ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಭಾನುವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸೋಲೇ ಗೆಲುವಿನ ಮೆಟ್ಟಿಲಾಗಿದ್ದು, ವಿದ್ಯಾರ್ಥಿಗಳು ಸೋಲನ್ನು ಸವಾಲಾಗಿ ಸ್ವೀಕರಿಸಬೇಕು. ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಮಾತ್ರಕ್ಕೆ ನಿಮ್ಮ ಭವಿಷ್ಯದ ವಿದ್ಯಾಭ್ಯಾಸ ಮುಗಿಯಿತು ಎಂಬ ಕೀಳರಿಮೆಯನ್ನು ಬಿಟ್ಟು, ಶಿಕ್ಷಕರು ನೀಡಿದ ಮಾಹಿತಿಗಳನ್ನು ಅರ್ಥ ಮಾಡಿಕೊಂಡು ಪೂರಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕು’ ಎಂದರು.

ADVERTISEMENT

ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಭಾರತ ವಿಕಾಸ ಪರಿಷದ್ ಒಳ್ಳೆಯ ಚಿಂತನೆ ನಡೆಸಿದೆ. ಈ ರೀತಿ ಮುಂದೆ ಬರುವ ಸಂಘ ಸಂಸ್ಥೆಗಳಿಗೆ ಇಲಾಖೆಯ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ಹೇಳದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್.ಮರೀಗೌಡ ಮಾತನಾಡಿ, ಒಂದು ವಾರ ಉಚಿತ ಬೋಧನೆ ಆಯೋಜನೆ ಮಾಡಲಾಗಿದೆ. ಇರುವ ಅಲ್ಪಕಾಲದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ವಿಷಯಗಳನ್ನು ಮನನ ಮಾಡಿಕೊಳ್ಳಬೇಕು. ಪರೀಕ್ಷೆಯಲ್ಲಿ ಪ್ರಶ್ನೆಗಳಿಗೆ ಪುಟಗಟ್ಟಲೆ ದೀರ್ಘವಾದ ಉತ್ತರ ಬರೆಯುವ ಬದಲು ಸರಳವಾಗಿ ಪ್ರಮುಖ ಅಂಶಗಳನ್ನು ಬರೆಯುವುದರಿಂದ ಹೆಚ್ಚಿನ ಅಂಕಗಳು ಬಂದು ಉತ್ತೀರ್ಣರಾಗಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಭಾರತ ವಿಕಾಸ ಪರಿಷದ್ ಅಧ್ಯಕ್ಷ ಅಂಬರೀಶ್ ಮಾತನಾಡಿ, ವಿಷಯಗಳ ಬಗ್ಗೆ ಮನಸ್ಸಿಟ್ಟು ಓದಿ ಮನನ ಮಾಡಿಕೊಂಡು ಉತ್ತರಿಸುವ ಮಾರ್ಗವನ್ನು ಅಳವಡಿಸಿಕೊಳ್ಳಿ. ವಿದ್ಯಾರ್ಥಿಗಳು ಉಚಿತ ಭೋಧನಾ ಕಾರ್ಯಕ್ರಮದ ಸದುಪಯೋಗವನ್ನು ಬಳಸಿಕೊಂಡು ಮುಂದಿನ ವಿದ್ಯಾಭ್ಯಾಸದ ದಾರಿ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ಕ್ಷೇತ್ರ ಸಮನ್ವಯಾಧಿಕಾರಿ ಸಂಪತ್ ಕುಮಾರ್, ಭಾರತ ವಿಕಾಸ ಪರಿಷದ್ ಗೌರವಾಧ್ಯಕ್ಷ ಎಚ್.ವಿ. ಶೇಷಾದ್ರಿ ಅಯ್ಯರ್, ಕೆ.ಎಲ್.ಶೇಷಗಿರಿರಾವ್, ಉಪಾಧ್ಯಕ್ಷ ಕೆಂಗಲ್‍ ಹನುಮಂತಯ್ಯ, ಖಜಾಂಚಿ ಪರಮಶಿವಯ್ಯ, ಸದಸ್ಯರಾದ ಎನ್.ವಿ. ಲೋಕೇಶ್, ಶೋಭಾ.ಆರ್.ಗೌಡ, ರಮೇಶ್ ಹೊಸದೊಡ್ಡಿ, ಪ್ರಭು, ಶಿಕ್ಷಕರಾದ ಶಿವಸ್ವಾಮಿ, ವಿಜಯ್‍ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.