ಮಾಗಡಿ: ತಾಲ್ಲೂಕಿನ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಸ್ತರಣಾ ನಿರ್ವಹಣೆಯ ರಾಷ್ಟ್ರೀಯ ಸಂಸ್ಥೆ ಹೈದರಾಬಾದ್, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಇಲಾಖೆ ಇವರ ಸಹಯೋಗದಲ್ಲಿ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಡಿಪ್ಲೊಮಾ ಪಡೆದವರಿಗೆ ಪ್ರಮಾಣಪತ್ರ ಪ್ರಧಾನ ಸಮಾರಂಭ ನಡೆಯಿತು.
ಕೃಷಿ ಸಮುದಾಯಕ್ಕೆ ನಿಕಟ ಸಂಪರ್ಕದಲ್ಲಿರುವ ಕೃಷಿ ಪರಿಕರ ಮಾರಾಟಗಾರರಿಗೆ ವೈಜ್ಞಾನಿಕ ಕೃಷಿ ತಂತ್ರಜ್ಞಾನ, ನೂತನ ತಾಂತ್ರಿಕ ಮಾಹಿತಿ, ಕೃಷಿ ಸಂಬಂಧಿತ ಮಾಹಿತಿಯ ಬಗ್ಗೆ ತರಬೇತಿ, ಪ್ರಾತ್ಯಕ್ಷಿಕೆ, ಶೈಕ್ಷಣಿಕ ಪ್ರವಾಸಗಳ ಮೂಲಕ ಅಧ್ಯಯನ ಒಂದು ವರ್ಷ ಅವಧಿಯ ಡಿಪ್ಲೊಮಾ ತರಬೇತಿಯನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ನೀಡಲಾಗಿತ್ತು.
ಈ ವೇಳೆ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ರಾಜ್ಯ ನೋಡಲ್ ಅಧಿಕಾರಿ ಡಾ.ನಾರಾಯಣ ರೆಡ್ಡಿ ಮಾತನಾಡಿ, ಈ ದೇಸಿ ಡಿಪ್ಲೊಮಾ ಕೋರ್ಸ್ನಿಂದ ಕೃಷಿ ಪರಿಕರ ಮಾರಾಟಗಾರರಿಗೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ನಡುವೆ ಉತ್ತಮ ಸಂಪರ್ಕ ಬೆಳೆಯಲಿದೆ. ತರಬೇತಿಯಲ್ಲಿ ಪಡೆದ ಮಾಹಿತಿಯಿಂದ ರೈತರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ರಾಮನಗರ ಜಿಲ್ಲೆಯ ಉಷಾ ಎಂ.ಸಿ. ಮಾತನಾಡಿ, ತರಬೇತಿಯಿಂದ ಪಡೆದ ಅನುಭವದಿಂದ ಕೃಷಿ ಪರಿಕರ ಮಾರಾಟಗಾರರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ ಎಂದರು.
ಇಂದುಮತಿ ಎಚ್.ಆರ್. ತರಬೇತಿ ತಂಡದ ವರದಿ ನೀಡಿದರು. ಈ ಸಂದರ್ಭದಲ್ಲಿ ದೇಸಿ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿದರು. ಅತ್ಯುತ್ತಮ ಅಂಕ ಗಳಿಸಿದ ಗೋವಿಂದರಾಜು, ವಿದ್ಯಶ್ರೀ ಮತ್ತು ಮಹೇಶ ಕುಮಾರ್ ಅವರಿಗೆ ಸನ್ಮಾನಿಸಲಾಯಿತು.
ಕೇಂದ್ರದ ವಿಜ್ಞಾನಿ ಪ್ರೀತು ಡಿ.ಸಿ., ತೋಟಗಾರಿಕಾ ವಿಜ್ಞಾನಿ ಡಾ.ದೀಪ ಪೂಜಾರ, ಕೇಂದ್ರದ ವಿಸ್ತರಣಾ ವಿಜ್ಞಾನಿ ಡಾ.ಸೌಜನ್ಯ ಎಸ್, ಕೇಂದ್ರದ ವಿಜ್ಞಾನಿ ರಾಜೇಂದ್ರ ಪ್ರಸಾದ್, 40ಕ್ಕೂ ಹೆಚ್ಚು ಪರಿಕರ ಮಾರಾಟಗಾರರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.