ಮಾಗಡಿ: ಕಾಡುಗೊಲ್ಲ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಕಾಡು ಗೊಲ್ಲರ ಸಂಘದ ವತಿಯಿಂದ ಉಪ ತಹಶೀಲ್ದಾರ್ ಪ್ರಭಾಕರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ತಾಲ್ಲೂಕು ಅಧ್ಯಕ್ಷ ಬಿ.ಡಿ.ಸುರೇಶ್ ಮಾತನಾಡಿ, ಕಾಡುಗೊಲ್ಲ ಸಮುದಾಯ ಒಂದು ಬುಡಕಟ್ಟು ಸಮುದಾಯ. ಇವರು ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು, ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಹಾಗಾಗಿ ಸರ್ಕಾರ ಈ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕೆಂದು ಅದಿಸೂಚನೆ ಹೊರಡಿಸಿದೆ. ಇದನ್ನು ಪರಿಗಣಿಸಿ ಕೆಲ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಜಾತಿ ಪ್ರಮಾಣ ಪತ್ರ ನೀಡಿದ್ದಾರೆ. ಹಾಗಾಗಿ ನಮ್ಮ ತಾಲ್ಲೂಕಿನಲ್ಲಿ ನೀಡಿದರೆ ಸರ್ಕಾರದಿಂದ ಬರುವ ಸೌಕರ್ಯ ಹಾಗೂ ಅನುದಾನ ಪಡೆಯಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲ್ಲೂಕಿನಲ್ಲಿ ಸುಮಾರು 30 ಗೊಲ್ಲರ ಹಟ್ಟಿಗಳಿದ್ದು, ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಹಾಗಾಗಿ ಕೂಡಲೇ ಜಾತಿ ಪ್ರಮಾಣ ಪತ್ರ ನೀಡುವಂತೆ ಮನವಿ ಮಾಡಲಾಯಿತು.
ಈ ವೇಳೆ ಮಾರಣ್ಣ, ಕಾಂತರಾಜು, ಶಿವರಾಜು, ಮಹಾಲಿಂಗಯ್ಯ, ನಾಗರಾಜು, ಶ್ರೀಪತಿಹಳ್ಳಿ ರಾಜಣ್ಣ, ತಮ್ಮಣ್ಣ, ಜಯರಾಮ್, ಗಿರಿಯಪ್ಪ, ಚಿಕ್ಕಣ್ಣ, ನಾಗೇಶ್, ಅಣ್ಣಯ್ಯ ಸೇರಿದಂತೆ ಕಾಡುಗೊಲ್ಲ ಸಂಘದ ಮುಖಂಡರುಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.