ಕನಕಪುರ: ‘ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಇಂತಹ ಶಿಕ್ಷಕರನ್ನು ಸರ್ಕಾರವಾಗಲಿ, ಸಮಾಜವಾಗಲಿ ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಖಾಸಗಿ ಶಾಲೆಗಳ ಶಿಕ್ಷಕರು ಇನ್ನು ಅಭದ್ರತೆಯಲ್ಲಿ ಬದುಕುತ್ತಿದ್ದಾರೆ’ ಎಂದು ಬಿಎಂಐಸಿ ಮಾಜಿ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಬೇಸರ ವ್ಯಕ್ತಪಡಿಸಿದರು.
ಮಾನಸ ಶಾಲೆಯಲ್ಲಿ ಖಾಸಗಿ ಶಾಲಾ ಶಿಕ್ಷಕರ ಸಂಘದ ವತಿಯಿಂದ ಭಾನುವಾರ ಆಯೋಜನೆ ಮಾಡಿದ್ದ ರೇಷನ್ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
‘ಇಂದು ಸಮಾಜದಲ್ಲಿ ಕೂಲಿ ಕಾರ್ಮಿಕರು, ಗಾರೆ ಕೆಲಸ ಮಾಡುವವರು ತಿಂಗಳಿಗೆ ₹20 ರಿಂದ 30 ಸಾವಿರ ಸಂಪಾದನೆ ಮಾಡುತ್ತಿದ್ದಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕರು ಕನಿಷ್ಠ ₹4 ರಿಂದ 5 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇಂತಹ ಶಿಕ್ಷಕರ ಬಗ್ಗೆ ಸರ್ಕಾರವಾಗಲಿ, ಸಮಾಜವಾಗಲಿ ಚಿಂತನೆ ನಡೆಸದಿರುವುದು, ಅವರ ಕುಟುಂಬಕ್ಕೆ ಭದ್ರತೆ ಒದಗಿಸದಿರುವುದು ದುರದುಷ್ಟಕರ’ ಎಂದರು.
‘ನಾಯಿ ಕೊಡಗಳಂತೆ ಖಾಸಗಿ ಶಾಲೆಗಳನ್ನು ತೆರೆಯುವ ಬದಲು, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವ ಹಾಗೂ ಶಿಕ್ಷಕರಿಗೆ ಭದ್ರತೆಯನ್ನು ಒದಗಿಸುವ ಮಟ್ಟದಲ್ಲಿ ಶಾಲೆ ತೆರೆಯಬೇಕು. ಸಣ್ಣಪುಟ್ಟ ಶಾಲೆಗಳನ್ನು ತೆರೆದರೆ ಅದರಿಂದ ಮಕ್ಕಳ ಭವಿಷ್ಯ ಮತ್ತು ಶಿಕ್ಷಕರ ಜೀವನ ನಾಶವಾಗಲಿದೆ’ ಎಂದು ಎಚ್ಚರಿಸಿದರು.
ಜೆಟ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ಕಿರಣ್ರಾಜ್ ಮಾತನಾಡಿ, ‘ಸಮಾಜ ಬದಲಾವಣೆಗೆ ಗುರುಗಳ ಅವಶ್ಯಕತೆಯಿದೆ. ಆದರೆ ಗುರುಗಳ ಸಮಸ್ಯೆಗಳು ಯಾರಿಗೂ ಬೇಡವಾಗಿದೆ. ಸಮಾಜ ಮತ್ತು ಸರ್ಕಾರ ಖಾಸಗಿ ಶಾಲೆಗಳ ಶಿಕ್ಷಕರನ್ನು ನಿರ್ಲಕ್ಷ್ಯ ಮಾಡಿದೆ. ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶಿಕ್ಷಕರು ಸಮಸ್ಯೆಗೆ ಸಿಲುಕಿದ್ದು ಅವರ ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.