ಹಲ್ಲೆ
– ಗೆಟ್ಟಿ ಚಿತ್ರ
ಪ್ರಜಾವಾಣಿ ವಾರ್ತೆ
ರಾಮನಗರ: ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೆಂಗಳೂರು–ದಿಂಡಿಗಲ್ ರಾಷ್ಟ್ರೀಯ ಹೆದ್ದಾರಿಯ ಸೋಮನಹಳ್ಳಿ ಟೋಲ್ ಸಿಬ್ಬಂದಿ, ಇಬ್ಬರು ವಾಹನ ಸವಾರರ ಮೇಲೆ ಮೇಲೆ ಶುಕ್ರವಾರ ಹಲ್ಲೆ ನಡೆಸಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕಿನ ಪಟ್ಟರೆಡ್ಡಿಪಾಳ್ಯದ ಅಬ್ದುಲ್ ಮರ್ದಾನ್ ಮತ್ತು ರೈತ ಸಂಘದ ಕಾರ್ಯಕರ್ತ ನಜೀರ್ ಅಹಮದ್ ಹಲ್ಲೆಗೊಳಗಾದವರು. ಘಟನೆಗೆ ಸಂಬಂಧಿಸಿದಂತೆ ಟೋಲ್ ಸಿಬ್ಬಂದಿ ಅಭಿ, ದಿಣ್ಣೆಪಾಳ್ಯದ ಕುಮಾರ್ ಹಾಗೂ ಇತರರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಬ್ದುಲ್ ಮತ್ತು ನಜೀರ್ ಇಬ್ಬರೂ ತಮ್ಮ ಬೊಲೆರೊ ವಾಹನದಲ್ಲಿ ಸೋಮನಹಳ್ಳಿಯಲ್ಲಿರುವ ಜಮೀನಿಗೆ ಹೊರಟ್ಟಿದ್ದರು. ಸ್ಥಳೀಯರಾದ ನಮಗೆ ಟೋಲ್ನ ಕಡೆಯ ರಸ್ತೆಯಲ್ಲಿ ದಾರಿ ಬಿಡಿ ಎಂದು ನಜೀರ್ ಸಿಬ್ಬಂದಿ ಬಳಿ ಕೇಳಿದರು. ಆಗ ಸಿಬ್ಬಂದಿ, ‘ಹಣ ಕೊಟ್ಟು ಓಡಾಡಿ. ಇಲ್ಲ ಫಾಸ್ಟ್ಟ್ಯಾಗ್ ಇರುವ ಕಡೆ ಹೋಗಿ’ ಎಂದು ಅವಾಚ್ಯವಾಗಿ ನಿಂದಿಸಿದರು ಎಂದು ಪೊಲೀಸರು ಹೇಳಿದರು.
ಎರಡೂ ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು. ಆಗ ಟೋಲ್ ಸಿಬ್ಬಂದಿ ವಾಹನದಲ್ಲಿದ್ದ ಇಬ್ಬರನ್ನೂ ಕೆಳಕ್ಕಿಳಿಸಿ ಹಲ್ಲೆ ನಡೆಸಿದರು. ಮೊಬೈಲ್ ಫೋನ್ ಒಡೆದು ಹಾಕಿದರು. ಹಲ್ಲೆಯಿಂದ ಗಾಯಗೊಂಡ ನಜೀರ್ ಅವರಿಗೆ ರಕ್ತಬಂದು ಗಾಯವಾಯಿತು ಎಂದು ಅಬ್ದುಲ್ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.