ADVERTISEMENT

ಕಾಂಗ್ರೆಸ್‌ನಲ್ಲಿ  ಕ್ರಾಂತಿಯಾಗಲ್ಲ; ಸಿ.ಎಂ ಬದಲಾಗುತ್ತಾರೆ: ಇಕ್ಬಾಲ್‌ ಹುಸೇನ್‌

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 6:44 IST
Last Updated 2 ಜುಲೈ 2025, 6:44 IST
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ
ಎಚ್‌.ಎ. ಇಕ್ಬಾಲ್ ಹುಸೇನ್, ಶಾಸಕ   

ರಾಮನಗರ: ‘ನಮ್ಮ ನಾಯಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಅವಧಿಯಲ್ಲೇ ಎರಡೂವರೆ ವರ್ಷ ಮುಖ್ಯಮಂತ್ರಿಯಾಗಬೇಕು. ಹೈಕಮಾಂಡ್ ಅವರಿಗೂ ಒಂದು ಅವಕಾಶ ನೀಡಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಕುರಿತು ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಮುಖ್ಯಮಂತ್ರಿ ಬದಲಾವಣೆ ಕ್ರಾಂತಿಯಲ್ಲ. ಬದಲಿಗೆ, ಅದೊಂದು ಬದಲಾವಣೆ ಅಷ್ಟೆ. ಸಚಿವ ಕೆ.ಎನ್‌. ರಾಜಣ್ಣ ಅವರು ಹೇಳುವಂತೆ ಇಲ್ಲಿ ಯಾವುದೇ  ಕ್ರಾಂತಿಯಾಗುವುದಿಲ್ಲ. ಕೇವಲ ಮುಖ್ಯಮಂತ್ರಿ ಬದಲಾಗುತ್ತಾರೆ. ಇಲ್ಲಿ ಕ್ರಾಂತಿಯಾಗುವಂತಹದ್ದು ಏನೂ ಇಲ್ಲ’ ಎಂದು ಹೇಳಿದರು.

‘ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನಾನು ಸೇರಿದಂತೆ ಹಲವರ ಅಭಿಲಾಷೆಯಾಗಿದೆ. ಅದಕ್ಕೆ ಪಕ್ಷದ ಶಾಸಕರ ಬೆಂಬಲವೂ ಇದೆ. ಈ ಕುರಿತು ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕಷ್ಟೇ’ ಎಂದರು.

ADVERTISEMENT

‘ಕೆಪಿಸಿಸಿ ಅಧ್ಯಕ್ಷರಾಗಿ ಶಿವಕುಮಾರ್ ಅವರು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದಾರೆ. ಪೂರ್ಣ ಬಹುಮತದೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದಾರೆ. ಮೇಕೆದಾಟು, ಭಾರತ್ ಜೋಡೊ ಪಾದಯಾತ್ರೆ ಸೇರಿದಂತೆ ಪಕ್ಷದ ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಅವರನ್ನು ಸಿ.ಎಂ ಮಾಡಿದರೆ ಉತ್ತಮ ಸಂಘಟನಕಾರ ಮತ್ತು ಹೋರಾಟಗಾರನಿಗೆ ಗೌರವ ಕೊಟ್ಟಂತಾಗುತ್ತದೆ’ ಎಂದು ಹುಸೇನ್‌ ಸಮರ್ಥಿಸಿಕೊಂಡರು.

‘ಪಕ್ಷದ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲಾ ಅವರು ಶಾಸಕರೊಂದಿಗೆ ಸಭೆ ನಡೆಸಿ ಕ್ಷೇತ್ರದ ಅಭಿವೃದ್ಧಿ, ಕಾಮಗಾರಿ ಹಾಗೂ ಅನುದಾನ ಕುರಿತು ಕೇಳುತ್ತಾರೆ. ನಾನೂ ಅವರನ್ನು ಭೇಟಿ ಮಾಡಿ ಮಾಹಿತಿ ನೀಡುವೆ. ಅಲ್ಪಸಂಖ್ಯಾತ ಶಾಸಕರ ಸಭೆಯಲ್ಲೂ ಇದನ್ನೇ ಚರ್ಚಿಸಲಾಗಿದೆ. ‌ನನ್ನ ಕ್ಷೇತ್ರಕ್ಕೂ ₹50 ಕೋಟಿ ಅನುದಾನ ಕೊಟ್ಟಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.