ಕನಕಪುರ: ‘ಮಕ್ಕಳ ಭವಿಷ್ಯಕ್ಕಾಗಿ ಪೋಷಕರು ತಮ್ಮ ಭವಿಷ್ಯವನ್ನು ಬಲಿಕೊಟ್ಟು ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಾರೆ. ಬೆಳೆದು ದೊಡ್ಡವರಾದ ಮೇಲೆ ಮಕ್ಕಳು ತಮ್ಮ ಭವಿಷ್ಯಕ್ಕಾಗಿ ಪೋಷಕರನ್ನೇ ಅನಾಥಶ್ರಮಕ್ಕೆ ಅಟ್ಟುತ್ತಾರೆ’ ಎಂದು ಆರ್ಇಎಸ್ ಸಂಸ್ಥೆಯ ಅಧ್ಯಕ್ಷ ಕೆ.ಬಿ.ನಾಗರಾಜು ವಿಷಾದ ವ್ಯಕ್ತಪಡಿಸಿದರು.
ನಗರದ ರೂರಲ್ ಎಜುಕೇಷನ್ ಸೊಸೈಟಿಯ ಆರ್ಎಂಪಿಎಚ್ಎಸ್ಎಸ್ ಶಾಲೆಯಲ್ಲಿ ಶಾಲಾ ಮಕ್ಕಳಿಗೆ 2019ನೇ ಸಾಲಿನ ಸೈಕಲ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಿಂದಿನ ಕಾಲದಲ್ಲಿ ಆಧುನಿಕತೆಯಾಗಲಿ ಇರಲಿಲ್ಲ. ಉತ್ತಮವಾದ ಸಂಸ್ಕೃತಿ ಮತ್ತು ಸಂಸ್ಕಾರವಿತ್ತು. ಇಂದಿನ ಕಾಲದಲ್ಲಿ ಆಧುನಿಕತೆಯಿದೆ. ಮುಖ್ಯವಾಗಿ ಇರಬೇಕಾದ ಸಂಸ್ಕಾರವಾಗಲಿ ಸಂಸ್ಕೃತಿಯಾಗಲಿ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಕ್ಕಳು ಚಿಕ್ಕಂದಿನಿಂದಲೇ ಉತ್ತಮವಾದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಶಾಲೆಯಲ್ಲಿ ಶಿಕ್ಷಕರು ಶಿಕ್ಷಣದ ಜತೆಗೆ ಜೀವನದ ಮೌಲ್ಯ, ಗುರುಹಿರಿಯರಿಗೆ ಗೌರವ ಕೊಡುವ ಸಂಸ್ಕಾರವನ್ನು ಕಲಿಸಿಕೊಡಬೇಕು’ ಎಂದು ಸಲಹೆ ನೀಡಿದರು.
‘ನಿಮ್ಮ ಭವಿಷ್ಯಕ್ಕಾಗಿ ತಮ್ಮ ಭವಿಷ್ಯವನ್ನು ತ್ಯಾಗ ಮಾಡಿರುವ ತಂದೆ ತಾಯಿಯರನ್ನು ಮುಪ್ಪಿನ ಕಾಲದಲ್ಲಿ ಚೆನ್ನಾಗಿ ನೋಡಿಕೊಂಡು ಆರೈಕೆ ಮಾಡಬೇಕು. ನಿಜವಾಗಿಯೂ ಜೀವನದಲ್ಲಿ ಅತ್ಯಂತ ಪುಣ್ಯ ತಂದು ಕೊಡುವ ಕೆಲಸವೆಂದರೆ ತಂದೆ ತಾಯಿಯನ್ನು ನೋಡಿಕೊಳ್ಳುವುದು ಒಂದೇ’ ಎಂದು ತಿಳಿಸಿದರು.
ಆರ್ಇಎಸ್ ಸಂಸ್ಥೆಯ ಕಾರ್ಯದರ್ಶಿ ಸಿ.ರಮೇಶ್ ಮಾತನಾಡಿ, ‘ಕರಿಯಪ್ಪನವರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿ ಈ ವಿದ್ಯಾಸಂಸ್ಥೆ ಕಟ್ಟಿದ್ದಾರೆ. ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಅವರ ಅದರ್ಶವನ್ನು ಮೈಗೂಡಿಸಿಕೊಂಡು ಇನ್ನೊಬ್ಬರಿಗೆ ಪರೋಪಕಾರಿಯಾಗಿ ಬದುಕಿದರೆ, ಸಮಾಜಕ್ಕಾಗಿ ನಿಮ್ಮನ್ನು ತೊಡಗಿಸಿಕೊಂಡರೆ ಅದುವೆ ಸಾರ್ಥಕ’ ಎಂದು ಹೇಳಿದರು.
‘ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಸರ್ಕಾರವು ಉಚಿತವಾಗಿ ಈ ಸೈಕಲ್ ಕೊಡುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ಶಾಲೆಗೆ ಸರಿಯಾದ ಸಮಯಕ್ಕೆ ಬರಬೇಕು. ಚೆನ್ನಾಗಿ ಓದಿ ದೊಡ್ಡ ವ್ಯಕ್ತಿಯಾಗಬೇಕು’ ಎಂದು ತಿಳಿಸಿದರು.
ಸಂಸ್ಥೆಯ ವೆಂಕಟೇಶಯ್ಯ, ಮುಖ್ಯ ಶಿಕ್ಷಕ ಎಂ.ಎನ್. ಮುನಿರಾಜು, ಶಿಕ್ಷಕರಾದ ಟಿ.ಗುರುಮೂರ್ತಿ, ಸಿದ್ದಲಿಂಗಯ್ಯ, ಜಿ.ಆರ್.ಸತೀಶ್, ಮೂರ್ತಿಗೌಡ, ಎಚ್.ಆರ್.ಸತೀಶ್, ಜಿ.ವೈ.ಕಾಂಬ್ಳೆ, ಎಚ್.ವಿ.ಶಿವಕುಮಾರ್, ಪುಷ್ಪಾವತಿ, ಭಾವನ, ರಾಣಿ, ಕೆ.ನಂದಿನಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.