ಚನ್ನಪಟ್ಟಣ: ರಂಗಕಲೆ ಹರಿಯುವ ನೀರಿದ್ದಂತೆ. ಅದರಲ್ಲಿ ಮುಳುಗಿದಷ್ಟು ಹೊಸಹೊಸ ವಿಚಾರಗಳನ್ನು ಅರಿತುಕೊಳ್ಳಬಹುದು ಎಂದು ರಂಗಭೂಮಿ ಕಲಾವಿದ ತಿಮ್ಮರಾಜು ಅಭಿಪ್ರಾಯಪಟ್ಟರು.
ಪಟ್ಟಣದ ತಟ್ಟೆಕೆರೆಯಲ್ಲಿ ಶನಿವಾರ ಶ್ರೀ ಬೀರೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಕುರುಕ್ಷೇತ್ರ ಪೌರಾಣಿಕ ನಾಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸಹೊಸ ಕಲಾವಿದರು ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕಾಗಿದೆ ಎಂದರು.
ನಾಟಕ ಕಲೆ ಎಂಬುದು ಸಾಮಾನ್ಯವಾದ ಕಲೆಯಲ್ಲ. ಅದು ಕಲಾವಿದನಿಗೆ ಬಳುವಳಿಯಾಗಿ ಬರುವ ಕಲೆ. ಇಂತಹ ಕಲೆಯನ್ನು ಕಲಿಯಲು ಶ್ರದ್ಧೆ ಹಾಗೂ ತಾಳ್ಮೆ ಬಹಳ ಅವಶ್ಯಕ. ತಾಳ್ಮೆಯಿಂದ ಕಲಿತ ವ್ಯಕ್ತಿ ಮಾತ್ರ ಒಳ್ಳೆಯ ಕಲಾವಿದನಾಗಿ ಹೊರಹೊಮ್ಮತ್ತಾನೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ನಾಟಕ ಕಲೆ ಹಾಗೂ ಕಲಾವಿದರು ಎಂಬುದು ಹೇರಳವಾಗಿದ್ದು ಅಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ್ದು ಸಂಘಸಂಸ್ಥೆಗಳ ಕರ್ತವ್ಯ ಎಂದರು.
ಮತ್ತೊಬ್ಬ ರಂಗಭೂಮಿ ಕಲಾವಿದ ಮಂಗಳವಾರಪೇಟೆಯ ನಾರಾಯಣ್ ಮಾತನಾಡಿ, ಎಲೆಮರೆ ಕಾಯಿಯಂತೆ ಇರುವ ರಂಗಭೂಮಿ ಪ್ರತಿಭೆಗಳಿಗೆ ಬೆಳಕು ನೀಡುವ ನಿಟ್ಟಿನಲ್ಲಿ ಇಂತಹ ವೇದಿಕೆಗಳು ಸಹಕಾರಿಯಾಗಿದೆ. ಪ್ರಸಕ್ತ ದಿನಗಳಲ್ಲಿ ಪಾಶ್ಚಾತ್ಯ ಸಂಸ್ಕೃತಿಯತ್ತ ಒಲವು ತೋರುವ ಮಂದಿ ಹೆಚ್ಚಾಗುತ್ತಿದ್ದಾರೆ. ಅಂತಹ ಮಂದಿಗೆ ನಾಡು, ನುಡಿ, ಸಂಸ್ಕೃತಿ ಹಾಗೂ ಪೌರಾಣಿಕ ನಾಟಕಗಳ ಬಗ್ಗೆ ಒಲವು ಬೆಳೆಸಬೇಕಾದ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕಲಾವಿದ ಪೇಟೆಚೇರಿ ಕರ್ಣ ಹಾಗೂ ಇನ್ನಿತರ ಕಲಾವಿದರನ್ನು ಸನ್ಮಾನಿಸಲಾಯಿತು. ರಂಗಭೂಮಿ ನಿರ್ದೇಶಕ ಶ್ಯಾಮ್ ರಾವ್, ಕಲಾವಿದರಾದ ಅಶೋಕ್ ಪ್ರಭು, ಅರಸೇಗೌಡ, ಕೆ.ವಿ. ಪ್ರಕಾಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.