ADVERTISEMENT

ಕನಕಪುರ: ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 5:19 IST
Last Updated 3 ಅಕ್ಟೋಬರ್ 2021, 5:19 IST
ನೀಲಕಂಠೇಶ್ವರ ಶಾಲೆಯಲ್ಲಿ ಸೆಂಟ್ರಲ್‌ ಬ್ಯಾಂಕ್‌ ಮ್ಯಾನೇಜರ್‌ ವಸುಂಧರಾ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚನ್ನನರಸಿಂಹಯ್ಯ, ಆರ್‌. ದಾಸರಾಜ್‌, ವಿಜಯಕುಮಾರ್‌, ರಾಮಚಂದ್ರ, ಕೆ.ವಿ. ಆನಂದ, ರಾಜೇಂದ್ರ, ಮಹಾಲಿಂಗ, ಕಾಳಪ್ಪ, ಸುರೇಂದ್ರ, ನವೀನ್‌ ಉಪಸ್ಥಿತರಿದ್ದರು
ನೀಲಕಂಠೇಶ್ವರ ಶಾಲೆಯಲ್ಲಿ ಸೆಂಟ್ರಲ್‌ ಬ್ಯಾಂಕ್‌ ಮ್ಯಾನೇಜರ್‌ ವಸುಂಧರಾ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚನ್ನನರಸಿಂಹಯ್ಯ, ಆರ್‌. ದಾಸರಾಜ್‌, ವಿಜಯಕುಮಾರ್‌, ರಾಮಚಂದ್ರ, ಕೆ.ವಿ. ಆನಂದ, ರಾಜೇಂದ್ರ, ಮಹಾಲಿಂಗ, ಕಾಳಪ್ಪ, ಸುರೇಂದ್ರ, ನವೀನ್‌ ಉಪಸ್ಥಿತರಿದ್ದರು   

ಕನಕಪುರ: ‘ಪರಿಸರದಲ್ಲಿ ಆಮ್ಮಜನಕ ಎಷ್ಟು ಮುಖ್ಯ ಎಂಬುದು ಕೊರೊನಾ ಸಂದರ್ಭದಲ್ಲಿ ಎಲ್ಲರಿಗೂ ಅರಿವಾಗಿದೆ. ಅದಕ್ಕಾಗಿ ಪ್ರತಿಯೊಬ್ಬರು ಪರಿಸರದ ಶುಚಿತ್ವ ಕಾಪಾಡುವುದರ ಜತೆಗೆ ಗಿಡಗಳನ್ನು ಬೆಳೆಸಬೇಕು’ ಎಂದು ಸೆಂಟ್ರಲ್‌ ಬ್ಯಾಂಕ್‌ ಮ್ಯಾನೇಜರ್‌ ವಸುಂಧರಾ ಸಲಹೆನೀಡಿದರು.

ಇಲ್ಲಿನ ನೀಲಕಂಠೇಶ್ವರ ಶಾಲಾ ಆವರಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ಗಾಂಧಿ ಜಯಂತಿ ಅಂಗವಾಗಿ ಶಾಲೆಯ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ಮನುಷ್ಯನಿಗೆ ಬೇಕಾಗುವಷ್ಟು ಆಮ್ಲಜನಕವನ್ನು ಒಂದು ಗಿಡ ನೀಡುತ್ತದೆ. ಪ್ರಕೃತಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮರಗಳಿರಬೇಕು. ಕಾಡು ಇರಬೇಕು. ಆದರೆ, ಸ್ವಾರ್ಥಕ್ಕಾಗಿ ಕಾಡು ಮತ್ತು ಮರಗಳನ್ನು ನಾಶ ಮಾಡಿದ್ದೇವೆ. ಅರಣ್ಯ ಸಂರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಯ ಕರ್ನಾಟಕ ಜನಪರ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್‌. ರಾಜೇಂದ್ರ ಮಾತನಾಡಿ, ಮಹಾತ್ಮ ಗಾಂಧೀಜಿ ಅವರು ಶಾಂತಿ, ಸಹನೆಯ ಜತೆಗೆ ಪರಸರ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಟ್ಟಿದ್ದರು. ಅವರ ಜಯಂತಿ ಅಂಗವಾಗಿ ಶಾಲಾ ಆವರಣದಲ್ಲಿ ಗಿಡ ನೆಡುವ ಹಾಗೂ ಪರಿಸರ ಸ್ವಚ್ಛಗೊಳಿಸುವ ಕೆಲಸವನ್ನು ಸಂಘಟನೆ ಮಾಡುತ್ತಿದೆ ಎಂದರು.

ಪ್ರತಿಯೊಬ್ಬ ವ್ಯಕ್ತಿಯು ತನ್ನ ಹುಟ್ಟುಹಬ್ಬದ ಅಂಗವಾಗಿ ಒಂದು ಗಿಡ ನೆಟ್ಟು ಬೆಳೆಸಿದರೆ ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ಗಿಡಗಳನ್ನು ಬೆಳೆಸಬಹುದಾಗಿದೆ. ಅಲ್ಲದೇ ಎಲ್ಲಾ ಮಹನೀಯರು ಮತ್ತು ದಾರ್ಶನಿಕರ ಜಯಂತಿ ಅಂಗವಾಗಿ ಗಿಡಗಳನ್ನು ನೆಟ್ಟು ಬೆಳೆಸಿದರೆ ನಾಡಿನಲ್ಲೇ ವನ ಸಂಪತ್ತನ್ನು ವೃದ್ಧಿಸಬಹುದಾಗಿದೆ ಎಂದು ತಿಳಿಸಿದರು.

ನೀಲಕಂಠೇಶ್ವರ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಚನ್ನನರಸಿಂಹಯ್ಯ ಮಾತನಾಡಿ, ಗಾಂಧೀಜಿ ಅವರನ್ನು ಇಂದು ನಾವು ಅವರ ಜಯಂತಿಯಂದು ಮಾತ್ರ ನೆನಪಿಸಿಕೊಳ್ಳುವಂತಹ ಸ್ಥಿತಿಗೆ ತಲುಪಿದ್ದೇವೆ. ಅವರ ಶಾಂತಿ, ಅಹಿಂಸಾ ಮಾರ್ಗವನ್ನು ಇಡೀ ವಿಶ್ವ ಅಳವಡಿಸಿಕೊಂಡು ಶಾಂತಿ ದಿನವನ್ನಾಗಿ ಆಚರಣೆ ಮಾಡುತ್ತಿದೆ. ಅವರ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಜಯಂತಿಯನ್ನು ಸಾರ್ಥಕ ಮಾಡಬೇಕು ಎಂದರು.

ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಆರ್‌. ದಾಸ್‌ರಾಜ್‌, ಖಜಾಂಚಿ ವಿಜಯಕುಮಾರ್‌, ಮುಖ್ಯಶಿಕ್ಷಕಿ ಎಸ್‌. ಪದ್ಮಾವತಿ, ಪ್ರಾಂಶುಪಾಲ ರಂಗನಾಥ್‌, ಸೆಂಟ್ರಲ್‌ ಬ್ಯಾಂಕ್‌ನ ಭಾರತಿ, ಸಂಘಟನೆಯ ಜಿಲ್ಲಾ ಅಧ್ಯಕ್ಷ ರಾಮಚಂದ್ರ, ಜಿಲ್ಲಾ ಮುಖಂಡ ಕೆ.ವಿ. ಆನಂದ, ಪದಾಧಿಕಾರಿಗಳಾದ ಮಹಾಲಿಂಗ, ಸುರೇಂದ್ರ, ಕಾಳಪ್ಪ, ನವೀನ್‌, ಸತೀಶ್‌, ಲೋಹಿತ್‌, ಸುನಿಲ್‌, ಸುಮಂತ್‌, ರಾಹುಲ್‌ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.