ADVERTISEMENT

ಪರಿಸರ ರಕ್ಷಣೆ: ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 13:42 IST
Last Updated 8 ಜುಲೈ 2019, 13:42 IST
ಚನ್ನಪಟ್ಟಣದ ಹನುಮಂತನಗರ ಪಾಠಶಾಲೆಯಲ್ಲಿ ರೇಣುಕಾ ಪ್ರಸಾದ್ ಗಿಡ ನೆಟ್ಟರು
ಚನ್ನಪಟ್ಟಣದ ಹನುಮಂತನಗರ ಪಾಠಶಾಲೆಯಲ್ಲಿ ರೇಣುಕಾ ಪ್ರಸಾದ್ ಗಿಡ ನೆಟ್ಟರು   

ಚನ್ನಪಟ್ಟಣ: ‘ವಿದ್ಯಾರ್ಥಿಗಳು ಪರಿಸರ ರಕ್ಷಣೆಯಲ್ಲಿ ಮಹತ್ತರ ಜವಾಬ್ದಾರಿ ವಹಿಸಬೇಕಿದೆ’ ಎಂದು ಟೊಯೊಟ ಹಾಗೂ ಕಿರ್ಲೋಸ್ಕರ್ ಮೋಟರ್ಸ್ ಘಟಕ ವ್ಯವಸ್ಥಾಪಕ ರೇಣುಕಾ ಪ್ರಸಾದ್ ಕಿವಿಮಾತು ಹೇಳಿದರು.

ಪಟ್ಟಣದ ಹನುಮಂತನಗರದ ಸರ್ಕಾರಿ ಕಿರಿಯ ಮಾದರಿ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ಮೋಟಾರ್ಸ್‌ನ ಜೋಡಣಾ ವಿಭಾಗದ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ ಹಾಗೂ ಗಿಡ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪ್ರಸಕ್ತ ದಿನಗಳಲ್ಲಿ ನಾವು ಸೇವಿಸುತ್ತಿರುವ ಆಹಾರದಿಂದ ಪ್ರಾರಂಭವಾಗಿ ಕುಡಿಯುವ ನೀರು, ಗಾಳಿಯೂ ವಿಷಮಿಶ್ರಿತವಾಗಿದೆ. ಪರಿಸರವನ್ನು ನಾಶಪಡಿಸುತ್ತಿರುವುದರಿಂದಲೇ ಈ ರೀತಿಯ ಅವ್ಯವಸ್ಥೆ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಪರಿಣಾಮ ಬೀರಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಘಟಕದ ಮತ್ತೊಬ್ಬ ವ್ಯವಸ್ಥಾಪಕ ಅಜಯ್ ಸಿಂಗ್ ಮಾತನಾಡಿ, ‘ಪ್ರಕೃತಿ ಸಂಪತ್ತು ಹೇರಳವಾಗಿದ್ದ ಕಾರಣ ಮಳೆಯ ಪ್ರಮಾಣ ಹೆಚ್ಚಾಗಿತ್ತು. ಆದರೆ ಮನುಷ್ಯ ಬುದ್ಧಿವಂತನಾದಂತೆಲ್ಲಾ ತನ್ನ ಐಷಾರಾಮಿ ಜೀವನ ಹಾಗೂ ಹಣದ ದುರಾಸೆಗೆ ಪ್ರಕೃತಿಗೆ ಕೊಡಲಿ ಹಾಕಿದ ಪರಿಣಾಮವೇ ಇಂದು ಮಳೆಯ ಕೊರತೆ ಎದುರಾಗಿ ಪ್ರಕೃತಿಯ ಜೊತೆ ಮಾನವ ಕೂಡಾ ಅವನತಿಯತ್ತ ಸಾಗುತ್ತಿದ್ದಾನೆ’ ಎಂದರು.

ವೆಂಕಟರಮಣಸ್ವಾಮಿ ಮಾತನಾಡಿ, ‘ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುವ ಉದ್ದೇಶದಿಂದ ಪ್ಲಾಂಟ್‌ನ ವತಿಯಿಂದ ಉಚಿತ ನೋಟ್ ಬುಕ್ ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಯಲ್ಲಿಯೆ ವಿಶ್ವಪರಿಸರ ದಿನಾಚರಣೆಯ ಅಂಗವಾಗಿ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಉದ್ಯಾನ ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ’ ಎಂದರು.

ಪ್ಲಾಂಟ್‌ನ ಸಹಾಯಕ ವ್ಯವಸ್ಥಾಪಕ ಮಹೇಶ್ ಗಾಣಿಗೇರ್, ಶಾಲೆಯ ಮುಖ್ಯಶಿಕ್ಷಕ ರಾಜು, ಸಹಶಿಕ್ಷಕಿ ಇಂದ್ರಮ್ಮ, ಕಂಪನಿಯ ಸೂರ್ಯ ನಾರಾಯಣ್, ಹರಿಪ್ರಸಾದ್, ಬಸವರಾಜ್, ಬಸವರಾಜ್ ಹೊಸಮನೆ, ಆಂಜನೇಯ ಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಶಿವರಾಮೇಗೌಡ, ಸಮಾಜ ಸೇವಕ ಮಹೇಶ್, ಅಶ್ವಥ್, ಚಿಕ್ಕಣ್ಣಪ್ಪ, ಕಾಂತರಾಜು ಹಾಗೂ ಚನ್ನಪಟ್ಟಣ ಲೀಡರ್ಸ್ ಅಕಾಡೆಮಿಯ ತಂಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.