ADVERTISEMENT

ಕುದೂರು | ಸೋರುತಿಹದು ಶತಮಾನದ ಶಾಲೆ!

​ಪ್ರಜಾವಾಣಿ ವಾರ್ತೆ
Published 16 ಜುಲೈ 2024, 5:23 IST
Last Updated 16 ಜುಲೈ 2024, 5:23 IST
<div class="paragraphs"><p>ಶಿಥಿಲವಾದ ಶಾಲಾ ಕೊಠಡಿಯಲ್ಲಿ ಹೆಂಚು ಮುರಿದಿರುವುದು (ಎಡಚಿತ್ರ) ಬಿರುಕು ಬಿಟ್ಟ ಶಾಲಾ ಕೊಠಡಿ</p></div><div class="paragraphs"></div><div class="paragraphs"><p><br></p></div>

ಶಿಥಿಲವಾದ ಶಾಲಾ ಕೊಠಡಿಯಲ್ಲಿ ಹೆಂಚು ಮುರಿದಿರುವುದು (ಎಡಚಿತ್ರ) ಬಿರುಕು ಬಿಟ್ಟ ಶಾಲಾ ಕೊಠಡಿ


   

ಕುದೂರು: ಸುಣ್ಣ, ಬಣ್ಣ ಕಾಣದೆ ಮಾಸಿರುವ ಕಟ್ಟಡ, ಬೀಳುವ ಸ್ಥಿತಿಯಲ್ಲಿರುವ ಚಾವಣಿ ಮೇಲೆ ಒಡೆದ ಹೆಂಚು, ಅಲ್ಲಲ್ಲಿ ಬಿರುಕು ಬಿಟ್ಟು ಕುಸಿದಿರುವ ಗೋಡೆ, ಮಳೆ ಬಂದರೆ ಸೋರುವ ಕೊಠಡಿ, ಕಿತ್ತು ಹೋಗಿರುವ ನೆಲ...

ADVERTISEMENT

– ಇವಿಷ್ಟು ತಿಪ್ಪಸಂದ್ರ ಹೋಬಳಿಯ ಹುಳ್ಳೇನಹಳ್ಳಿ ಗ್ರಾಮದ ಶತಮಾನ ಕಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಿತ್ರಣ!

1924ರಲ್ಲಿ ಶುರುವಾದ ಈ ಶಾಲೆ ಇಲ್ಲಿವರೆಗೆ ಸಾವಿರಾರು ವಿದ್ಯಾರ್ಥಿಗಳ ಬದುಕು ರೂಪಿಸಿದೆ. ಆದರೆ, ಶಾಲೆಯ ಭವಿಷ್ಯ ಮಾತ್ರ ಶೋಚನಿಯವಾಗಿದೆ. 100 ವರ್ಷ ಹಳೆಯದಾದ ಶಾಲೆ ಬಹುತೇಕ ಶಿಥಿಲಗೊಂಡಿದೆ. ಶಿಕ್ಷಕರು ಆತಂಕದಲ್ಲೇ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. 

ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಸುಮಾರು 43 ಮಕ್ಕಳಿದ್ದಾರೆ. ಶಾಲೆಯಲ್ಲಿ ಒಟ್ಟು 8 ಕೊಠಡಿಗಳಿವೆ. ಆ ಪೈಕಿ 2 ಕೊಠಡಿ  ಸುಸ್ಥಿತಿಯಲ್ಲಿದ್ದು, ಉಳಿದ 3 ಕೊಠಡಿ ಸಂಪೂರ್ಣ ಶಿಥಿಲವಾಗಿವೆ ಎಂದು ಎನ್ನುತ್ತಾರೆ ಪೋಷಕರು ಮತ್ತು ಶಿಕ್ಷಕರು.

ಕಳೆದ ವರ್ಷ 60ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 43ಕ್ಕೆ ಕುಸಿದಿದೆ. ಶಾಲೆಯಲ್ಲಿ ಸದ್ಯ ನಾಲ್ವರು ಶಿಕ್ಷಕರಿದ್ದು ಇಬ್ಬರು ಮಾತ್ರ ಪೂರ್ಣಾವಧಿ ಶಿಕ್ಷಕರಾಗಿದ್ದು, ಒಬ್ಬರು ನಿಯೋಜನೆ ಮೇರೆಗೆ ಬರುತ್ತಿದ್ತಾರೆ. ಮತ್ತೊಬ್ಬರು ಅತಿಥಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.

ಶಾಲೆಯ ಕಟ್ಟಡದ ಕಾರಣಕ್ಕಾಗಿಯೇ ವಿದ್ಯಾರ್ಥಿಗಳ ದಾಖಲಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಿಥಿಲ ಕೊಠಡಿಗಳ ಪೈಕಿ ಕೆಲವನ್ನು ತುರ್ತಾಗಿ ದುರಸ್ತಿ ಮಾಡಬೇಕು. ಇನ್ನುಳಿದವು ಸುರಕ್ಷಿತವಾಗಿಲ್ಲ. ಅವು ಯಾವಾಗ ಬೀಳುತ್ತವೆಯೋ ಗೊತ್ತಿಲ್ಲ. ಈ ಕೊಠಡಿಗಳನ್ನು ಕೆಡವಿ  ಹೊಸದಾಗಿ ನಿರ್ಮಿಸಬೇಕಿದೆ.

ಒಡೆದ ಹೆಂಚಿನ ಕಿಂಡಿಗಳಿಂದ ಮಳೆಗಾಲದಲ್ಲಿ ನೀರು ಸೋರುತ್ತಿದೆ. ಜೋರು ಗಾಳಿ, ಮಳೆ ಬಂದಾಗಲೆಲ್ಲಾ ಹೆಂಚುಗಳು ಜಾರಿ ಬೀಳುತ್ತಿವೆ. ಮಳೆ ಬಂದರೆ, ಶಾಲೆ ಕೆರೆಯಾಗುತ್ತದೆ ಎನ್ನುತ್ತಾರೆ ವಿದ್ಯಾರ್ಥಿಗಳು. 

ಈ ಶಾಲೆಯಲ್ಲಿ ಕಲಿತ ಹಲವರು ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಹಾಗಾಗಿ ಸುತ್ತಮುತ್ತಲ ಗ್ರಾಮಸ್ಥರು ತಮ್ಮ ಮಕ್ಕಳನ್ನು ಇದೇ ಶಾಲೆಗೆ ಸೇರಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ಶಿಥಿಲವಾಗಿರುವ ಕಾರಣಕ್ಕೆ ಪಾಲಕರು ಈ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿದೆ ಎನ್ನುವುದು ಶಿಕ್ಷಕರ ಅಳಲು.  

ಶಾಲಾ ಕಟ್ಟಡದ ಒಳಗಿದ್ದ ಮರ ತೆರವುಗೊಳಿಸುವ ಸಂದರ್ಭದಲ್ಲಿ ಶಾಲೆಯ ಆವರಣ ಗೋಡೆ ಉರುಳಿ ಬಿದ್ದಿದೆ. ಕಾಂಪೌಂಡ್ ಇಲ್ಲದ ಕಾರಣ ಶಾಲೆಯ ಆವರಣ ರಾತ್ರಿ ವೇಳೆ ಪುಂಡ, ಪೋಕರಿಗಳು ಮತ್ತು ಕುಡುಕರ ಅಡ್ಡೆಯಾಗಿ ಬದಲಾಗುತ್ತದೆ. ಪ್ರತಿದಿನ ಬೆಳಗ್ಗೆ ಶಾಲೆಗೆ ಬರುವ ಮಕ್ಕಳು ಮತ್ತು ಶಿಕ್ಷಕರಿಗೆ ಮೊದಲು ದರ್ಶನವಾಗುವುದೇ ಈ ಮದ್ಯದ ಪ್ಯಾಕೆಟ್‌, ಸಿಗರೇಟ್ ತುಂಡುಗಳು!

ದಾನಿ ಕುಟುಂಬ ಅಡ್ಡಿ

ಸ್ಥಳೀಯರು ಈ ಹಿಂದೆ ದಾನವಾಗಿ ಕೊಟ್ಟ ಸರ್ಕಾರಿ ಶಾಲೆಯ ಜಾಗದ ಮೇಲೆ ದಾನಿಗಳ ಹೊಸ ಪೀಳಿಗೆ ಮತ್ತೆ ಹಿಡಿತ ಸಾಧಿಸಲು ಮುಂದಾಗಿರುವುದು ಶಾಲೆಯ ಹೊಸ ಕಟ್ಟಡ ನಿರ್ಮಾಣ ಮಾಡುವುದಕ್ಕೆ ದೊಡ್ಡ ಅಡ್ಡಿಯಾಗಿದೆ.

ಶತಮಾನದ ಹೊಸ್ತಿಲಲ್ಲಿರುವ ಹುಳ್ಳೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಕೊಠಡಿ ದುರಸ್ತಿ ಮಾಡಲು ಹೋದರೆ ಭೂಮಿ ದಾನ ಕೊಟ್ಟವರ ಕುಟುಂಬ ಸದಸ್ಯರು ತಡೆಯೊಡ್ಡುತ್ತಿದ್ದಾರೆ. ಇದರಿಂದ ಹಿನ್ನಡೆಯಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.