ADVERTISEMENT

ನಾಟಿ ಹಸು ಸಾಕಲು ರೈತರು ಮುಂದಾಗಿ

ದೇಸಿ ತಳಿ ಪ್ರೋತ್ಸಾಹ ಯೋಜನೆಯಡಿ ಹಸುಗಳ ವಿತರಣೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:20 IST
Last Updated 8 ಫೆಬ್ರುವರಿ 2020, 14:20 IST
ಮರಳವಾಡಿಯಲ್ಲಿ ನಡೆದ ದೇಸಿ ತಳಿಗಳ ವಿತರಣೆ ಕಾರ್ಯಕ್ರಮದಲ್ಲಿ ಎಸ್‌.ರವಿ ಮಾತನಾಡಿದರು
ಮರಳವಾಡಿಯಲ್ಲಿ ನಡೆದ ದೇಸಿ ತಳಿಗಳ ವಿತರಣೆ ಕಾರ್ಯಕ್ರಮದಲ್ಲಿ ಎಸ್‌.ರವಿ ಮಾತನಾಡಿದರು   

ಮರಳವಾಡಿ (ಕನಕಪುರ): ಔಷಧ ಗುಣವುಳ್ಳ ನಾಟಿ ಹಸುಗಳ ಹಾಲಿಗೆ ಉತ್ತಮ ಬೇಡಿಕೆ ಮತ್ತು ಬೆಲೆಯಿದೆ. ಗ್ರಾಮೀಣ ಭಾಗದ ಜನರು ನಾಟಿಹಸುಗಳನ್ನು ಸಾಕುವ ಮೂಲಕ ಹೆಚ್ಚಿನ ಹಣಗಳಿಸಬೇಕೆಂದು ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ ರೈತರಿಗೆ ಸಲಹೆ ನೀಡಿದರು.

ಇಲ್ಲಿನ ಮರಳವಾಡಿಯಲ್ಲಿ ಬೆಂಗಳೂರು ಸಹಕಾರಿ ಹಾಲು ಒಕ್ಕೂಟದಿಂದ ರೈತರಿಗೆ ಒಕ್ಕೂಟದ ದೇಶಿ ತಳಿ ಪ್ರೋತ್ಸಾಹ ಯೋಜನೆಯಡಿ ಹಸುಗಳನ್ನು ವಿತರಿಸಿ ಮಾತನಾಡಿದರು.

ಹೈನುಗಾರಿಕೆಯಲ್ಲಿ ಬಮೂಲ್‌ ರಾಜ್ಯದಲ್ಲೇ ನಂಬರ್‌ ಒನ್‌ ಆಗಿದ್ದು ಹಾಲಿನ ಬೆಲೆಯಲ್ಲೂ ಮೊದಲನೇ ಸ್ಥಾನದಲ್ಲಿದೆ. ಇದರ ಜತೆಗೆ ನಾಟಿ ಹಸುಗಳ ಹಾಲಿನ ಸಂಗ್ರಹಣೆ ಮಾಡಿ 'ಎ ಟು ಮಿಲ್ಕ್‌' ಹೆಸರಿನಲ್ಲಿ ಈಗಾಗಲೇ ಮಾರ್ಕೆಟಿಂಗ್‌ ನಡೆದಿದೆ. ನಾಟಿ ಹಸುವಿನ ಹಾಲಿಗೆ ₹50 ಬೆಲೆ ಇದೆ ಎಂದರು.

ADVERTISEMENT

ತಟ್ಟೆಕೆರೆ ಮತ್ತು ದೊಡ್ಡೂರು ಗ್ರಾಮದಲ್ಲಿ ಪ್ರತ್ಯೇಕ ನಾಟಿ ಹಸು ಹಾಲಿನ ಡೇರಿ ತೆರೆಯಲಾಗಿದೆ. ಪ್ರಸ್ತುತ 1 ಸಾವಿರ ಲೀಟರ್‌ನಷ್ಟು ಹಾಲು ಪೂರೈಕೆಯಾಗುತ್ತಿದೆ. ಇದು ಬೆಂಗಳೂರಿನ ಜನತೆಗೆ ಸಾಕಾಗುತ್ತಿಲ್ಲ. 10 ಸಾವಿರ ಲೀಟರ್‌ಗಿಂತ ಹೆಚ್ಚು ಬೇಡಿಕೆ ಇದ್ದು ರೈತರು ಹಾಲು ಉತ್ಪಾದನೆಗೆ ಹೆಚ್ಚು ಗಮನ ಕೊಡಬೇಕೆಂದರು.

ಹೊಸದಾಗಿ ದೇಸಿ ತಳಿ ಖರೀದಿ ಮಾಡುವ ರೈತರಿಗೆ ಬಮೂಲ್‌ನಿಂದ ಪ್ರೋತ್ಸಾಹಧನವಾಗಿ ₹40ಸಾವಿರ ಕೊಡಲಾಗುತ್ತಿದೆ. ತಾಲ್ಲೂಕಿನಲ್ಲಿ 200 ಹಸುಗಳನ್ನು ಕೊಡುವ ಗುರಿ ಹೊಂದಿದ್ದು ಈಗ ಮೊದಲನೆ ಕಂತಿನಲ್ಲಿ 40 ಹಸುಗಳು ಬಂದಿವೆ. ದೇಶಿ ತಳಿಗಳಾದ ಗೀರ್‌ ಮತ್ತು ಸಾಹಿವಾಲ್‌ ಇಲ್ಲಿನ ವಾತವರಣಕ್ಕೆ ಹೊಂದುಕೊಳ್ಳುತ್ತವೆ. ನಾಟಿ ಹಸು ಹಾಲು ಬಮೂಲ್ ಗೆ ಮಾರಾಟ ಮಾಡುವಂತೆ ಮನವಿ ಮಾಡಿದರು.

ಹೈನುಗಾರಿಕೆ ಮಾಡುವ ರೈತರಿಗೆ ₹1ಲಕ್ಷ ಸಾಲ ವಾರ್ಷಿಕ ಶೇ3ರ ಬಡ್ಡಿದರದಲ್ಲಿ ಬಿಡಿಸಿಸಿ ಬ್ಯಾಂಕ್‌ನಿಂದ ಕೊಡಲಾಗುವುದು. ಹಾಲಿನ ಡೇರಿ ಹಾಗೂ ಸೊಸೈಟಿ ಮೂಲಕ ಬಂದ ರೈತರಿಗೆ ಸುಲಭವಾಗಿ ಸಾಲ ಸಿಗುತ್ತದೆ. ಸಕಾಲದಲ್ಲಿ ಹಿಂತಿರುಗಿಸಬೇಕು ಎಂದರು.

ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ. ನಾಟಿ ಹಸುಗಳ ಹಾಲಿಗೆ ತುಂಬ ಬೇಡಿಕೆ ಇರುವುದರಿಂದ ದೇಶಿ ತಳಿಗಳ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.

ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ ನಿರ್ದೇಶಕ ಎಚ್‌.ಎಸ್‌.ಹರೀಶ್‌ಕುಮಾರ್‌ ಮಾತನಾಡಿ, ಹೈನುಗಾರಿಕೆಯಲ್ಲಿ ಹೆಚ್ಚು ಲಾಭ ಸಿಗುತ್ತಿದ್ದು ಇದರತ್ತ ರೈತರು ಮುಖ ಮಾಡಬೇಕೆಂದು ಹೇಳಿದರು. ‌

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್‌.ಬಸಪ್ಪ, ಮುಖಂಡರಾದ ಇಕ್ಬಾಲ್‌ಹುಸೇನ್‌, ಎಂ.ಎನ್‌.ನಾಗರಾಜು, ಮುನಿಹುಚ್ಚೇಗೌಡ, ಯದುನಂದನ್‌ ಬಾಬು, ರಾಮಕೃಷ್ಣ, ಗೌತಮ್‌.ಎಂ.ಗೌಡ, ಭೈರೇಗೌಡ, ಸಬ್ದರ್‌ ಹುಸೇನ್‌, ಅಶೋಕ್‌, ಮಲ್ಲಪ್ಪ, ಸೋಮಶೇಖರ್‌, ರವಿಕುಮಾರ್‌, ನಂಜೇಗೌಡ, ಪಾಪಣ್ಣ, ಚಲುವಣ್ಣ, ಒಕ್ಕೂಟದ ಡಾ.ಜಗದೀಶ್‌, ಡಾ.ಶ್ರೀನಿವಾಸ್‌, ಡಾ.ವೆಂಕಟಸ್ವಾಮಿರೆಡ್ಡಿ, ಡಾ.ಆನಂದ, ಡಾ.ರಾಜೇಶ್‌, ವರದರಾಜು, ರವೀಂದ್ರ, ಪ್ರವೀಣ್‌, ಆದಿಲ್‌, ಕೃಷ್ಣ, ಡೇರಿ ಮುಖ್ಯ ಕಾರ್ಯದರ್ಶಿ. ಡೇರಿ ಅಧ್ಯಕ್ಷರು, ರೈತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.