ಕನಕಪುರ: ಮದ್ಯಪಾನ ಮಾಡಲು ಹಣ ಕೊಡಲಿಲ್ಲವೆಂದು ಮಗನೊಂದಿಗೆ ಜಗಳವಾಡಿದ ತಂದೆ, ಅದೇ ದ್ವೇಷದಲ್ಲಿ ಮಲಗಿದ್ದ ಮಗನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ತಿಗಳರ ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗೋವಿಂದರಾಜು (33) ಕೊಲೆಯಾದವರು. ಕೃತ್ಯದ ಬಳಿಕ ಮನೆಯಿಂದ ಓಡಿ ಹೋಗಿದ್ದ ಆರೋಪಿ ತಂದೆ ಕೊಡ್ಲಿ ನಾಗರಾಜು (58) ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಆರೋಪಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದರು. ಈ ಪೈಕಿ, ಒಬ್ಬ ಮಗ ಕಾಯಿಲೆಯಿಂದಾಗಿ ವರ್ಷದ ಹಿಂದೆ ತೀರಿಕೊಂಡಿದ್ದ.
ಮದ್ಯವ್ಯಸನಿಯಾಗಿದ್ದ ನಾಗರಾಜು ಕುಡಿಯಲು ಹಣ ಕೊಡುವಂತೆ ಮನೆಯಲ್ಲಿ ಗೋವಿಂದರಾಜು ಜೊತೆ ಜಗಳವಾಡುತ್ತಿದ್ದರು. ರಾತ್ರಿಯೂ ಇದೇ ವಿಷಯಕ್ಕೆ ಇಬ್ಬರ ನಡುವೆ ಜಗಳವಾಗಿತ್ತು. ತಾಯಿ ಸಮಾಧಾನ ಮಾಡಿದ್ದರು. ರಾತ್ರಿ ನೆಲದ ಮೇಲೆ ಮಲಗಿದ್ದ ಮಗನ ತಲೆ ಮೇಲೆ ನಾಗರಾಜು ಭಾರವಾದ ಕಲ್ಲನ್ನು ಎತ್ತಿ ಹಾಕಿ ಪರಾರಿಯಾಗಿದ್ದಾನೆ.
ಕೂಗಿದ ಶಬ್ದ ಕೇಳಿ ಎಚ್ಚರಗೊಂಡ ತಾಯಿ ಮಗನಿದ್ದ ಕೊಠಡಿಗೆ ಬಂದು ನೋಡಿದಾಗ, ಮಗ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಅವರು ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರ ನೆರವಿನಿಂದ ದಯಾನಂದ ಸಾಗರ ಆಸ್ಪತ್ರೆಗೆ ಕರೆದೊಯ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುವಾಗ ಕೊನೆಯುಸಿರೆಳೆದರು.
ಬೆಳಿಗ್ಗೆಯೇ ಪೊಲೀಸ್ ಠಾಣೆಗೆ ಬಂದಿದ್ದ ಆರೋಪಿ ನಾಗರಾಜು, ನನ್ನ ಮಗನನ್ನು ಕೊಲೆ ಮಾಡಿದ್ದು ಶರಣಾಗಲು ಬಂದಿದ್ದೇನೆ ಎಂದು ಹೇಳಿದ್ದಾನೆ. ಕುಡಿದ ಮತ್ತಿನಲ್ಲಿ ಏನೋ ಹೇಳುತ್ತಿದ್ದಾನೆಂದು ಪೊಲೀಸರು ನಿರ್ಲಕ್ಷ್ಯಿಸಿದರು. ಆದರೂ, ಅನುಮಾನದ ಮೇರೆಗೆ ಗ್ರಾಮದವರಿಗೆ ಕರೆ ಮಾಡಿ ವಿಚಾರಿಸಿದಾಗ ಕೊಲೆ ವಿಷಯ ಖಚಿತವಾಗಿದೆ. ಅಲ್ಲದೆ, ನಾಗರಾಜು ಕೊಲೆ ಮಾಡಿರುವುದು ಗೊತ್ತಾಗಿದೆ. ಬಳಿಕ, ಪೊಲೀಸರು ನಾಗರಾಜುನನ್ನು ಬಂಧಿಸಿದ್ದಾರೆ.
ಗ್ರಾಮಕ್ಕೆ ಡಿವೈಎಸ್ಪಿ ಗಿರಿ, ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣ ಲಮಾಣಿ, ಪಿಎಸ್ಐ ಮನೋಹರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.