ಮಾಗಡಿ: ಗಾಣಿಗಿತ್ತಿ ಅಯ್ಯೋ ಅಂದರೆ, ಮಗುವಿನ ನೆತ್ತಿ ತಣ್ಣಗಾಗೋಲ್ಲ ಎಂದು ಗ್ರಾಮದ ಮುಖಂಡ ರಂಗಹನುಮಯ್ಯ ಅಭಿಪ್ರಾಯ ಪಟ್ಟರು.
ತಿರುಮಲೆ ಚೌಡೇಶ್ವರಿ ದೇವಾಲಯದಲ್ಲಿ ಮಂಗಳವಾರ ರಾತ್ರಿ ನಡೆದ ರಾಷ್ಟ್ರೀಯ ನೇಕಾರ ದಿನಾಚರಣೆ ಹಾಗೂ ಪ್ರಧಾನ ಮಂತ್ರಿ ಎಂ.ನರೇಂದ್ರ ಮೋದಿ ಅವರಿಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರಮಿಕರಾದ ನೇಕಾರರನ್ನು ಗುರುತಿಸಿದ ಪ್ರಧಾನ ಮಂತ್ರಿಯನ್ನು ಅಭಿನಂದಿಸುತ್ತೇವೆ. ಕೇವಲ ನೇಕಾರರ ದಿನ ಘೋಷಿಸಿದರೆ ಸಾಲದು, ನೇಕಾರರ ಮಗ್ಗಗಳು ಇರುವಲ್ಲಿಗೆ ಕಚ್ಚಾವಸ್ತುಗಳನ್ನು ಸರಬರಾಜು ಮಾಡಿ, ಸಿದ್ದವಸ್ತುಗಳನ್ನು ಅಲ್ಲಿಯೇ ಖರೀದಿಸಿ, ಸ್ಥಳದಲ್ಲಿಯೇ ನಗದು ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಕೃಷಿಯ ನಂತರ ನೇಕಾರಿಕೆಯಿಂದ ಯುವಕರು ವಿಮುಖ
ರಾಗುತ್ತಿದ್ದಾರೆ. ನೇಕಾರರು ತಂತ್ರಜ್ಞಾನ ಬಳಸಿ, ಬಟ್ಟೆ ನೇಯುವ ಕಾರ್ಖಾನೆಗಳಿಗೆ ಟೆಕ್ಸ್ ಟೈಲ್ ಪ್ರವಾಸ ಕೈಗೊಳ್ಳಬೇಕು. ತಲೆಮಾರಿನಿಂದ ಬಂದಿರುವ ನೇಕಾರಿಕೆ ಕುಲಕಸುಬನ್ನು ಉನ್ನತೀಕರಣ ಮಾಡಿಕೊಂಡು ಸ್ವ ಉದ್ಯೋಗ ಆರಂಬಿಸಿ, ಇತರರಿಗೆ ನೌಕರಿ ನೀಡಬಹುದು. ನೇಕಾರರಿಗೆ ಅನುಕೂಲ ಮಾಡಿಕೊಡಲು ರಾಷ್ಟ್ರೀಯ ನೇಕಾರರ ದಿನ ಘೋಷಿಸಿರುವ ಪ್ರಧಾನ ಮಂತ್ರಿಗಳನ್ನು ನಾವೆಲ್ಲರೂ ಅಭಿನಂದಿಸೋಣ ಎಂದು ಬಿಜೆಪಿ ಮುಖಂಡ ತಿರುಮಲೆ ನಾರಾಯಣ ಸ್ವಾಮಿ ತಿಳಿಸಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ರಂಗಧಾಮಯ್ಯ ಮಾತನಾಡಿ, ಚೌಡೇಶ್ವರಿ ದೇಗುಲದ ಗೋಪುರ ದುರಸ್ತಿ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ನೇಕಾರರ ರಕ್ಷಣಾ ವೇದಿಕೆಯ ಅಧ್ಯಕ್ಷ ರಾಘವೇಂದ್ರ, ಬಿಜೆಪಿ ಮುಖಂಡ ಶಶಿಧರ್, ಗೋಪಾಲ್, ಭಾಸ್ಕರ್, ಹಿರಿಯ ನೇಕಾರರಾದ ಟಿ.ಎನ್.ಮುನಿಸ್ವಾಮಯ್ಯ, ನಾಗೇಶ್ವರ ರಾವ್, ಡಿ. ನರಸಿಂಹಮೂರ್ತಿ,ನಂಜಪ್ಪ, ರಾಮಣ್ಣ, ಮಂಜಪ್ಪ, ಸಿದ್ದಮ್ಮ ಹುಚ್ಚಪ್ಪ, ಪುಟ್ಟಶಂಕರಯ್ಯ, ಚೆನ್ನಪ್ಪ, ಎಂ.ಟಿ,ಶಿವಣ್ಣ, ನೇಕಾರರ ಸಂಘದ ಅಧ್ಯಕ್ಷ ಶಿವಕುಮಾರ್, ಹಿರಿಯ ನೇಕಾರ ಮಹಿಳೆಯರಾದ ಗಂಗಮ್ಮ, ಹೊನ್ನಮ್ಮ, ಪದ್ಮಮ್ಮ, ಚುಂಚಮ್ಮ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ನೇಕಾರ ಪ್ರಕೋಷ್ಠ ಸಂಚಾಲಕ ಚಂದ್ರಕಾಂತ್, ಉಪಾಧ್ಯಕ್ಷ ಕುಮಾರ್, ಒಬಿಸಿ ಕಾರ್ಯದರ್ಶಿ ರಾಜಗೋಪಾಲ್, ನಿರ್ದೇಶಕ ಶೇಷಗಿರಿ ವೇದಿಕೆಯಲ್ಲಿದ್ದರು. ತಿರುಮಲೆ ದೇವಾಂಗ ಮಂಡಳಿಯ ರಮೇಶ್, ನೇಕಾರರ ಸಹಕಾರ ಸಂಘದ ಪದಾಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.