ಮಾಗಡಿ: ಪಟ್ಟಣದ ಬೈಚಾಪುರ ರಸ್ತೆಯ ಅಂಚಿನಲ್ಲಿ ಇರುವ ರೇಷ್ಣೆ ಇಲಾಖೆಯ ಫಾರಂನಲ್ಲಿ ಶನಿವಾರ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಸಿಲುಕಿ ಮರಗಳು ಸುಟ್ಟು ಭಸ್ಮವಾಗಿವೆ. ಫಾರಂ ಸುತ್ತಲೂ ಕಾಂಪೌಂಡ್ ಇದೆ. ಒಳಗಡೆ ಪೂರ್ವಭಾಗದಲ್ಲಿ ಬೆಳೆದಿದ್ದ ಬಿದಿರುಮೆಳೆ ಮತ್ತು ಬೂರುಗದ ಮರಗಳ ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ.
ಬೆಂಕಿಯಿಂದ ಪಕ್ಕದ ನಟರಾಜ ಬಡಾವಣೆಯ ತುಂಬೆಲ್ಲ ಹೊಗೆ ತುಂಬಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿಯಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಠಾಣೆಯ ಅಧಿಕಾರಿ ರೇವಣ್ಣ ಮತ್ತು ಸಿಬ್ಬಂದಿ ಒಂದು ಗಂಟೆ ಪ್ರಯತ್ನಿಸಿ ಬೆಂಕಿಯನ್ನು ನಂದಿಸಲು ಶ್ರಮಿಸಿದರು.
ಫಾರಂ ಒಳಗೆ ಕೆಲವು ಒಣಗಿದ ಮರಗಳು ನೆಲಕ್ಕೆ ಬಿದ್ದಿದ್ದವು. ಈ ಮರಗಳು, ಬಿದಿರುಮೆಳೆ, ಬೂರುಗರ ಮರಗಳು ಸುಟ್ಟು ಭಸ್ಮವಾಗಿವೆ. ಇಷ್ಟೆಲ್ಲ ಅನಾಹುತ ನಡೆದರೂ ರೇಷ್ಮೆ ಇಲಾಖೆಯ ಅಧಿಕಾರಿಗಳು ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದ ಕಡೆ ಬರಲೇ ಇಲ್ಲ. ನಟರಾಜ ಬಡಾವಣೆಯ ನಿವಾಸಿಗಳು ಬೆಂಕಿ ನಂದಿಸಿದ ಅಗ್ನಿಶಾಮಕ ಅಧಿಕಾರಿಗಳನ್ನು ಅಭಿನಂದಿಸಿದರು. ಬೇಸಿಗೆಯಲ್ಲಿ ಬೆಂಕಿ ಹಚ್ಚುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಬೇಕು ಎಂದು ನಿವಾಸಿಗಳು ಮನವಿ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.