ADVERTISEMENT

ಹಾಡು ತಿರುಚುವಿಕೆಯಿಂದ ಆಶಯಕ್ಕೆ ಧಕ್ಕೆ: ಜಾನಪದ ಗಾಯಕ ಮಹದೇವಸ್ವಾಮಿ

ಜಾನಪದ ಜಾತ್ರೆ ಕಾರ್ಯಕ್ರಮದಲ್ಲಿ ಗಾಯಕ ಮಳವಳ್ಳಿ ಮಹದೇವಸ್ಥಾಮಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 2:09 IST
Last Updated 6 ಆಗಸ್ಟ್ 2025, 2:09 IST
<div class="paragraphs"><p>ರಾಮನಗರದ ವಿಜಯನಗರದ ಬನ್ನಿಮಂಟಪದ ಆವರಣದಲ್ಲಿ ನಾದ ಸಂಜೀವಿನಿ ಸಾಂಸ್ಕ್ರತಿಕ ಕಲಾ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಗಾಯಕ ಮಳವಳ್ಳಿಯ ಎಂ. ಮಹದೇವಸ್ವಾಮಿ ಅವರನ್ನು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸನ್ಮಾನಿಸಿದರು.&nbsp;</p></div>

ರಾಮನಗರದ ವಿಜಯನಗರದ ಬನ್ನಿಮಂಟಪದ ಆವರಣದಲ್ಲಿ ನಾದ ಸಂಜೀವಿನಿ ಸಾಂಸ್ಕ್ರತಿಕ ಕಲಾ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಜಾತ್ರೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಖ್ಯಾತ ಜಾನಪದ ಗಾಯಕ ಮಳವಳ್ಳಿಯ ಎಂ. ಮಹದೇವಸ್ವಾಮಿ ಅವರನ್ನು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮತ್ತು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಸನ್ಮಾನಿಸಿದರು. 

   

ರಾಮನಗರ: ‘ಅಕ್ಷರ ಜ್ಞಾನ ಇಲ್ಲದಿದ್ದರೂ ತಮ್ಮ ಅನುಭವದ ಮೂಲಕ ನಮ್ಮ ಜನಪದರು ಹಾಡಿ ಬಾಯಿಂದ ಬಾಯಿಗೆ ಉಳಿಸಿಕೊಂಡು ಬಂದಿರುವ ಜಾನಪದ ಹಾಡುಗಳನ್ನು ಇತ್ತೀಚೆಗೆ ತಿರುಚಿ ಹಾಡಲಾಗುತ್ತಿದೆ. ಇದರಿಂದಾಗಿ ಹಾಡಿನ ಮೂಲ ಆಶಯಕ್ಕೆ ಧಕ್ಕೆಯಾಗುತ್ತಿದೆ’ ಎಂದು ಖ್ಯಾತ ಜಾನಪದ ಗಾಯಕ ಮಳವಳ್ಳಿಯ ಎಂ. ಮಹದೇವಸ್ವಾಮಿ ಅಭಿಪ್ರಾಯಪಟ್ಟರು.

ನಗರದ ವಿಜಯನಗರದ ಬನ್ನಿಮಂಟಪದ ಆವರಣದಲ್ಲಿ ನಾದ ಸಂಜೀವಿನಿ ಸಾಂಸ್ಕ್ರತಿಕ ಕಲಾ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಜಾನಪದ ಜಾತ್ರೆ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಜನಪದರು ತಮ್ಮ ಕಷ್ಟ–ಸುಖ, ಸಂಬಂಧ–ಸ್ನೇಹ ಹಾಗೂ ಬದುಕಿನ ಅನುಭವಗಳನ್ನು ತಮ್ಮ ಹಾಡುಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಾವು ಯಥಾರೀತಿಯಲ್ಲಿ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಮಾಡಬೇಕು. ಅದುವೇ ನಾವು ನಮ್ಮ ಪರಂಪರೆ ಮತ್ತು ಸಂಸ್ಕೃತಿಗೆ ನೀಡುವ ದೊಡ್ಡ ಕೊಡುಗೆ’ ಎಂದರು.

ಶಾಸಕ‌ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ‘ಜಿಲ್ಲೆಯಲ್ಲಿ ಕಲೆಯನ್ನೇ ಪೂಜಿಸಿ ಆರಾಧಿಸುವ ಜಾನಪದ‌ ಕಲಾವಿದರಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸಿ ಗೌರವಿಸ ಕೆಲಸ ಮಾಡುವ ಜವಾಬ್ದಾರಿ ನಮ್ಮ‌ ಮೇಲಿದೆ. ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಿರಿಯ ಕಲಾವಿದರಿಗೆ ಪ್ರೋತ್ಸಾಹ ಕೊಟ್ಟು ಕಲೆಯನ್ನು ಪೋಷಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ಜಾನಪದ ಕಲೆಗಳು ಎಲ್ಲರನ್ನು ಸೆಳೆಯುವ ಶಕ್ತಿ ಹೊಂದಿವೆ. ಕಲಾವಿದರ ಪ್ರತಿಭೆ ಅನಾವರಣಕ್ಕೆ ಇಂತಹ ವೇದಿಕೆಗಳು ನೆರವಾಗಲಿವೆ. ಸಾಂಸ್ಕೃತಿಕ ಕ್ಷೇತ್ರವು ಒತ್ತಡದ ಜೀವನದಲ್ಲಿರುವ ವ್ಯಕ್ತಿಯನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತದೆ. ಅದಕ್ಕೆ ಪೂರಕವಾಗಿ ಟ್ರಸ್ಟ್ ಯಶಸ್ವಿ ಕಾರ್ಯಕ್ರಮಗಳನ್ನು ಮಾಡಲಿ’ ಎಂದು ಸಲಹೆ ನೀಡಿದರು.

ಕಲಾವಿದ ಮೈಸೂರು ಗುರುರಾಜ್, ನಗರಸಭೆ ಸದಸ್ಯರಾದ ಶಿವಸ್ವಾಮಿ, ಸೋಮಶೇಖರ್, ಟಿಎಪಿಸಿಎಂಎಸ್ ಅಧ್ಯಕ್ಷ ದೊಡ್ಡಿಸುರೇಶ್, ಆಶ್ರಯ ಸಮಿತಿ ಸದಸ್ಯ ಶಿವಕುಮಾರಸ್ವಾಮಿ, ಟ್ರಸ್ಟ್ ಅಧ್ಯಕ್ಷೆ ಶಶಿಕಲಾ, ಸಂಸ್ಥಾಪಕ ರಘು, ಮುಖಂಡರಾದ ಚಂದ್ರು, ಶಿವಶಂಕರ್, ಕೃಷ್ಣಮೂರ್ತಿ, ಗಾಯಕರಾದ ಶಿವು, ಚೌ.ಪು. ಸ್ವಾಮಿ, ಯಶಸ್ವಿನಿ, ಹೇಮಂತ್ ಹಾಗೂ ಇತರರು ಇದ್ದರು.

‘ಮೂಲ ಗಾಯಕರು ಮೂಲೆಗುಂಪು’

‘ರಾಜ್ಯದಾದ್ಯಂತ ಮೂಲ ಜಾನಪದ ಗಾಯಕರು ಸಾಕಷ್ಟು ಮಂದಿ ಇದ್ದಾರೆ. ಆದರೆ ಈಗ ಜಾನಪದವನ್ನು ತಿರುಚಿ ಹಾಡುವವರಿಗೇ ಹೆಚ್ಚು ಬೆಲೆ. ಅಂತಹವರಿಗೇ ವೇದಿಕೆಗಳು ಸಿಗುತ್ತವೆ. ಇದರಿಂದಾಗಿ ಮೂಲ ಗಾಯಕರು ಮೂಲೆಗುಂಪಾಗಿದ್ದಾರೆ. ಸರ್ಕಾರ ಅಂತಹ ಕಲಾವಿದರಿಗೆ ನೆರವಾಗಬೇಕು. ಸರ್ಕಾರಿ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ವೇದಿಕೆ ಒದಗಿಸಬೇಕು’ ಎಂದು ಮಹದೇವಸ್ವಾಮಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.