ADVERTISEMENT

ಚನ್ನಪಟ್ಟಣ: ಶಾಲಾ ಮಕ್ಕಳಿಗೆ ಆಹಾರ ಧಾನ್ಯ ವಿತರಣೆ

​ಪ್ರಜಾವಾಣಿ ವಾರ್ತೆ
Published 26 ಮೇ 2021, 2:54 IST
Last Updated 26 ಮೇ 2021, 2:54 IST
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಶಾಲಾಮಕ್ಕಳಿಗೆ ಆಹಾರ ಧಾನ್ಯ ವಿತರಿಸಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ಶಾಲಾಮಕ್ಕಳಿಗೆ ಆಹಾರ ಧಾನ್ಯ ವಿತರಿಸಲಾಯಿತು   

ಚನ್ನಪಟ್ಟಣ: ತಾಲ್ಲೂಕಿನಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಬೇಕಾಗಿದ್ದ ಕಳೆದ 132 ದಿನಗಳ ಆಹಾರ ಧಾನ್ಯವನ್ನು ತಾಲ್ಲೂಕಿನ ಎಲ್ಲ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವಿತರಿಸಲಾಗುತ್ತಿದೆ.

ಸೋಮವಾರ ಮಧ್ಯಾಹ್ಯ ತಾಲ್ಲೂಕಿನ ಕೋಡಂಬಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸಹ ಶಿಕ್ಷಕರ ಮೂಲಕ ಪಡತರವನ್ನು ವಿತರಿಸಲಾಯಿತು. ಮಕ್ಕಳ ಜೊತೆಗೆ ಪೋಷಕರು ಬಂದು ಆಹಾರ ಧಾನ್ಯಗಳನ್ನು ಪಡೆದುಕೊಂಡರು.

ಒಂದರಿಂದ ಐದನೇ ತರಗತಿಯ ಮಕ್ಕಳಿಗೆ 11 ಕಿಲೋ ಅಕ್ಕಿ, 2.2 ಕಿಲೋ ಗೋಧಿ, ಎಣ್ಣೆ ಒಂದು ಲೀಟರ್, ಒಂದು ಕಿಲೋ ಉಪ್ಪು, ಆರನೇ ತರಗತಿಯಿಂದ ಎಂಟನೇ ತರಗತಿಯ ಮಕ್ಕಳಿಗೆ 16 ಕಿಲೋ ಅಕ್ಕಿ, 3.3 ಕಿಲೋ ಗೋಧಿ, ಒಂದು ಲೀಟರ್ ಎಣ್ಣೆ ಮತ್ತು ಒಂದು ಕಿಲೋ ಉಪ್ಪು. ಒಂಭತ್ತು ಮತ್ತು ಹತ್ತನೇ ತರಗತಿಯ ಮಕ್ಕಳಿಗೆ 19 ಕಿಲೋ
ಅಕ್ಕಿ, ಒಂದು ಲೀಟರ್ ಎಣ್ಣೆ ಮತ್ತು ಒಂದು ಕಿಲೋ ಉಪ್ಪನ್ನು ವಿತರಿಸಲಾಯಿತು.

ADVERTISEMENT

ಈಗ ವಿತರಿಸುತ್ತಿರುವ ಅಡುಗೆ ಎಣ್ಣೆ ಮತ್ತು ಉಪ್ಪು ಕಳೆದ ಸಾಲಿನ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನದು. ಅಂದರೆ ಆ ಮೂರು ತಿಂಗಳಿನಲ್ಲಿ ಅಕ್ಕಿ ಮತ್ತು ಗೋಧಿಯನ್ನು ವಿತರಿಸಲಾಗಿತ್ತು. ಈಗ ಹಿಂದಿನ ತಿಂಗಳುಗಳ ಎಣ್ಣೆ ಮತ್ತು ಉಪ್ಪಿನ ಜೊತೆಗೆ ಏಪ್ರಿಲ್ 14 ರ ತನಕ ಬಂದಿರುವ ಅಕ್ಕಿ ಮತ್ತು ಗೋಧಿಯನ್ನು ಕೊಡಲಾಗುತ್ತಿದೆ. ಬೇಳೆ ಇನ್ನೂ ಬಾರದಿರುವುದರಿಂದ ನೀಡಲಾಗಿಲ್ಲ ಎಂದು ಅಕ್ಷರ ದಾಸೋಹ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಜು ಮಾಹಿತಿ ನೀಡಿದರು.

ಕೊರೊನಾ ಸಂಕಷ್ಟದಲ್ಲೂ ಸಹ ಶಾಲಾ ಮಕ್ಕಳಿಗೆ ಅಲ್ಲಲ್ಲೇ ನೀಡಬೇಕಾದ ಆಹಾರ ಧಾನ್ಯಗಳನ್ನು ಸರಿಯಾದ ಸಮಯದಲ್ಲಿ ಸರ್ಕಾರ ಇಲಾಖೆಗೆ ನೀಡುತ್ತಿಲ್ಲ. ಒಂದು ಪದಾರ್ಥ ಕೊಟ್ಟರೆ ಮತ್ತೊಂದು ಪದಾರ್ಥವನ್ನು ನೀಡುತ್ತಿಲ್ಲ. ಅಧಿಕಾರಿಗಳು ಆ ಪದಾರ್ಥಗಳು ಬರುವ ತನಕ ಕಾಯುತ್ತಾ ಕೂರುವುದರಿಂದ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಆಹಾರ ಪದಾರ್ಥಗಳನ್ನು ನೀಡುತ್ತಿಲ್ಲ. ಸರ್ಕಾರ ಸರಿಯಾದ ವೇಳೆಗೆ ಆಹಾರ ಪದಾರ್ಥಗಳನ್ನು ನೀಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.