ಮಾಗಡಿ: ತಾಲ್ಲೂಕಿನ ಹಾಲಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಪರಿಸರದಿಂದ ಹೆಚ್ಚು ಲಾಭ ಗಳಿಸುತ್ತಿರುವ ಮನುಷ್ಯ ಪರಿಸರಕ್ಕೆ ಮಾರಕ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದು, ಪರಿಸರ ರಕ್ಷಣೆ ಮಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ.ಸ್ನೇಹ ಅಭಿಪ್ರಾಯಪಟ್ಟರು.
ಮರಗಳನ್ನು ಕಡಿಯುತ್ತಾ ಹೋದರೆ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಕೊಡುವುದಾದರೂ ಹೇಗೆ. ಹಣ ಕೊಟ್ಟು ಶುದ್ಧ ಗಾಳಿ ಪಡೆಯುವ ಸ್ಥಿತಿ ನಿರ್ಮಾಣವಾದರೂ ಅಚ್ಚರಿ ಪಡುವಂತಿಲ್ಲ. ಮರಗಳನ್ನು ಕಡಿದರೆ ಮಣ್ಣು ಸವಳಿಕೆ ಹೆಚ್ಚಾಗಿ ತೊಂದರೆ ಉಂಟಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರು ಆಲೋಚನೆ ಮಾಡಿ ಗಿಡಗಳನ್ನು ಬೆಳೆಸುವ ಕೆಲಸಕ್ಕೆ ಮುಂದಾಗಬೇಕು ಎಂದರು.
ಕೃಷಿ ವಿಸ್ತರಣಾಧಿಕಾರಿ ಡಾ.ಸೌಜನ್ಯ ಮಾತನಾಡಿ, ತಾಲ್ಲೂಕಿನಲ್ಲಿ ಅತಿ ಹೆಚ್ಚು ಗಿಡಮರಗಳನ್ನು ಬೆಳೆಸಿ ಪರಿಸರವನ್ನು ಸಮತೋಲನಕ್ಕೆ ತರುವ ಕೆಲಸ ಮಾಡಬೇಕು. ಜಿಕೆವಿಕೆ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಅನುಭವಗಳನ್ನು ಪಡೆದು ಉಪಯುಕ್ತ ಮಾಹಿತಿಯನ್ನು ಗ್ರಾಮಸ್ಥರಿಗೆ ತಿಳಿಸುವ ಕೆಲಸ ಮಾಡುತ್ತಿದ್ದಾರೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ಬೆಳೆ ಶಾಸ್ತ್ರ ವಿಜ್ಞಾನಿ ಡಾ.ಪ್ರಮಿತ, ಶಾಲಾ ಮುಖ್ಯ ಶಿಕ್ಷಕರು, ಜಿಕೆವಿಕೆ ಅಂತಿಮ ವರ್ಷದ ವಿದ್ಯಾರ್ಥಿನಿಯರು ಗ್ರಾಮಸ್ಥರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.