ADVERTISEMENT

ತುಂಗಣಿ: ಉಚಿತ ನೇತ್ರ ತಪಾಸಣೆ ಶಿಬಿರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2021, 6:20 IST
Last Updated 20 ಸೆಪ್ಟೆಂಬರ್ 2021, 6:20 IST
ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ
ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ನೇತ್ರ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡಿದ್ದ ನೌಕರರ ಸಂಘದ ಪದಾಧಿಕಾರಿಗಳು ಮತ್ತು ಆಸ್ಪತ್ರೆಯ ಸಿಬ್ಬಂದಿ   

ಕನಕಪುರ: ತಾಲ್ಲೂಕಿನ ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರದಲ್ಲಿ 150 ಮಂದಿ ತಪಾಸಣೆಗೆ ಒಳಗಾದರು. ಅವರಲ್ಲಿ 22 ಮಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದ್ದು, ಅವರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಮತ್ತು ತುಂಗಣಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಭಾಗಿತ್ವದಲ್ಲಿ ಇತ್ತೀಚೆಗೆ ಈ ತಪಾಸಣಾ ಶಿಬಿರ ನಡೆಯಿತು.

‘ಕೋವಿಡ್‌ ಕಾರಣದಿಂದ ನೇತ್ರ ತಪಾಸಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ, ಉಚಿತ ನೇತ್ರ ತಪಾಸಣಾ ಶಿಬಿರ ನಡೆಸಬೇಕೆಂದುಸಾರ್ವಜನಿಕವಾಗಿ ಕೇಳಿಬಂದ ಒತ್ತಾಯದ ಮೇರೆಗೆ ಈ ಶಿಬಿರ ನಡೆಸಲಾಗಿದೆ’ ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಚಿಕ್ಕೆಂಪೇಗೌಡ ತಿಳಿಸಿದರು.

ADVERTISEMENT

ಎರಡು ದಿನಗಳ ಕಾಲ ಕೋವಿಡ್‌ ಪರೀಕ್ಷೆ ನಡೆಸಿ ಯಾರಿಗೆ ಸೋಂಕು ಇಲ್ಲವೋ ಅಂತಹವರಿಗೆ ಶಿಬಿರದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ತುಂಗಣಿ ಪ್ರಾಥಮಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವೈ.ಶ್ರೀನಿವಾಸ್‌, ಪ್ರೈಮರಿ ಹೆಲ್ತ್‌ಕೇರ್‌ ಆಫೀಸರ್‌ ಆರ್‌. ವಿಶಾಲ, ನೇತ್ರಾಧಿಕಾರಿ ಶಿವಕುಮಾರ್‌ ಹಾಗೂ ಆಸ್ಪತ್ರೆ ಸಿಬ್ಬಂದಿಶಿಬಿರ ನಡೆಸಿಕೊಟ್ಟರು.

ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಎಚ್‌.ಬಿ. ಶಿವಲಿಂಗೇಗೌಡ, ರಾಜ್ಯ ಪರಿಷತ್‌ ಸದಸ್ಯ ಪ್ರಸನ್ನ ಕುಮಾರ್‌, ಪ್ರಧಾನ ಕಾರ್ಯದರ್ಶಿ ಎನ್‌. ಕುಮಾರ್‌, ಖಜಾಂಚಿ ಎನ್‌.ಪಿ. ಪುಟ್ಟಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಗೋವಿಂದರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಣೇಶ್‌, ಕ್ರೀಡಾ ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾಜು, ಮಂಜುನಾಥ್‌, ಸಂಘಟನಾ ಕಾರ್ಯದರ್ಶಿ ಪಂಚಲಿಂಗೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.