ADVERTISEMENT

ಅಚ್ಚಲು: ನದಿಯಂಚಿನ ತ್ಯಾಜ್ಯ ತೆರವು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 6:07 IST
Last Updated 23 ಮಾರ್ಚ್ 2024, 6:07 IST
ರಾಮನಗರ ತಾಲ್ಲೂಕಿನ ಅಚ್ಚಲು ಗ್ರಾಮದ ಅರ್ಕಾವತಿ ನದಿಯಂಚಿನಲ್ಲಿ ವಿಲೇವಾರಿ ಮಾಡಿದ್ದ ತ್ಯಾಜ್ಯವನ್ನು ರಾಮನಗರ ನಗರಸಭೆಯಿಂದ ತೆರವುಗೊಳಿಸಿ, ಸ್ಥಳಕ್ಕೆ ಮಣ್ಣು ಹಾಕಿ ಸಮತಟ್ಟಗೊಳಿಸಲಾಯಿತು
ರಾಮನಗರ ತಾಲ್ಲೂಕಿನ ಅಚ್ಚಲು ಗ್ರಾಮದ ಅರ್ಕಾವತಿ ನದಿಯಂಚಿನಲ್ಲಿ ವಿಲೇವಾರಿ ಮಾಡಿದ್ದ ತ್ಯಾಜ್ಯವನ್ನು ರಾಮನಗರ ನಗರಸಭೆಯಿಂದ ತೆರವುಗೊಳಿಸಿ, ಸ್ಥಳಕ್ಕೆ ಮಣ್ಣು ಹಾಕಿ ಸಮತಟ್ಟಗೊಳಿಸಲಾಯಿತು   

ರಾಮನಗರ: ತಾಲ್ಲೂಕಿನ ಅಚ್ಚಲು ಗ್ರಾಮದ ಅರ್ಕಾವತಿ ನದಿಯಂಚಿನಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದನ್ನು ತಪ್ಪಿಸಿರುವ ರಾಮನಗರ ನಗರಸಭೆಯು, ಈಗಾಗಲೇ ಸ್ಥಳದಲ್ಲಿದ್ದ ಕಸವನ್ನು ಶುಕ್ರವಾರ ತೆರವುಗೊಳಿಸಿ, ಆ ಜಾಗಕ್ಕೆ ಮಣ್ಣು ಹಾಕಿ ಸಮತಟ್ಟ ಮಾಡಿದೆ.

ನದಿಯಂಚಿಗೆ ತ್ಯಾಜ್ಯ ತಂದು ಎಸೆಯುತ್ತಿರುವುದರಿಂದ ಕಸದ ಹೊಗೆ, ಅನಾರೋಗ್ಯ ಸೇರಿದಂತೆ ಗ್ರಾಮದಲ್ಲಿ ವಿವಿಧ ಸಮಸ್ಯೆಗಳು ಎದುರಾಗಿವೆ ಎಂದು ದೂರಿದ್ದ ಗ್ರಾಮಸ್ಥರು, ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದರು. ಬಹಿಷ್ಕಾರ ಕುರಿತ ಪೋಸ್ಟರ್‌ಗಳು‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಈ ಕುರಿತು ‘ಪ್ರಜಾವಾಣಿ’ಯು ಮಾರ್ಚ್ 20ರಂದು ‘ತ್ಯಾಜ್ಯದಿಂದ ಬೇಸತ್ತು ಚುನಾವಣೆ ಬಹಿಷ್ಕಾರ’ ಎಂಬ ವಿಶೇಷ ವರದಿ ಪ್ರಕಟಿಸಿತ್ತು.

ವರದಿ ಬೆನ್ನಲ್ಲೇ ನಗರಸಭೆ ಎಚ್ಚೆತ್ತುಕೊಂಡಿತ್ತು. ಪೌರಾಯುಕ್ತ ಎಲ್. ನಾಗೇಶ್ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ಥಳೀಯರ ಜೊತೆ ಮಾತುಕತೆ ನಡೆಸಿ ತ್ಯಾಜ್ಯ ತೆರವಿನ ಭರವಸೆ ನೀಡಿದ್ದರು. ಅದರಂತೆ, ಸ್ಥಳದಲ್ಲಿ ಜೆಸಿಬಿ ಹಾಗೂ ಟಿಪ್ಪರ್ ಲಾರಿಗಳ ಮೂಲಕ ಕಸ ತೆರವುಗೊಳಿಸಿ, ತ್ಯಾಜ್ಯದ ದುರ್ನಾತ ಬೀರದಂತೆ ಮಣ್ಣು ಹಾಕಿದ್ದಾರೆ.

ADVERTISEMENT

‘ಬಹಿಷ್ಕಾರ ಹಿಂಪಡೆಯಲು ಸಭೆ’

‘ತ್ಯಾಜ್ಯದಿಂದ ಊರಿಗೆ ಎದುರಾಗಿದ್ದ ಸಮಸ್ಯೆಯು ಮಾಧ್ಯಮದಲ್ಲಿ ಗಮನ ಸೆಳೆದ ತಕ್ಷಣ ನಗರಸಭೆಯವರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಸ್ಥಳೀಯರನ್ನು ಭೇಟಿ ಮಾಡಿದರು. ನಂತರ ತ್ಯಾಜ್ಯ ತೆರವು ಕಾರ್ಯ ಶುರು ಮಾಡಿದ್ದಾರೆ. ಸದ್ಯಕ್ಕೆ ಸಮಸ್ಯೆ ಬಗೆಹರಿದಿದೆ. ಚುನಾವಣೆ ಬಹಿಷ್ಕಾರ ನಿರ್ಧಾರವನ್ನು ಹಿಂಪಡೆಯುವ ಕುರಿತು ಗ್ರಾಮದ ಪ್ರಮುಖರೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹುಣಸನಹಳ್ಳಿ ಗ್ರಾಮ ಪಂಚಾಯಿತಿ ಪ್ರತಿನಿಧಿಸುವ ಗ್ರಾಮದ ಪಂಚಾಯಿತಿ ಸದಸ್ಯ ಟಿ. ಗೋಪಾಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.