ಚನ್ನಪಟ್ಟಣ: ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವುದರಿಂದ ದೇಶದ ಪ್ರತಿಯೊಂದು ಕ್ಷೇತ್ರ ಪ್ರಗತಿ ಸಾಧಿಸಲಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಕೆಂಗಲ್ ಕುವೆಂಪು ಪ್ರಥಮ ದರ್ಜೆ ಕಾಲೇಜಿನಲ್ಲಿ ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಯುವ ಬರಹಗಾರ್ತಿಯರ ರಾಜ್ಯಮಟ್ಟದ 15ನೇ ವರ್ಷದ ಕನ್ನಡ ಕಾವ್ಯ, ಸಂಸ್ಕೃತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಈಚೆಗೆ ಓದಿಗೆ ಗ್ರಹಣ ಹಿಡಿದಿದೆ. ಈ ವಿಚಾರದಲ್ಲಿ ಹಾದಿ ತಪ್ಪುತ್ತಿದ್ದೇವೆ. ಜನಪದರು ನಡೆದು ಬಂದ ಇತಿಹಾಸ ಮೆಲುಕು ಹಾಕಬೇಕು ಎಂದು ಕಿವಿಮಾತು ಹೇಳಿದರು.
ನಾಟಕಕಾರ ಎಲ್.ಎನ್.ಮುಕುಂದರಾಜ್ ಮಾತನಾಡಿ, ಕಂಪ್ಯೂಟರ್ ಹಾಗೂ ಮೊಬೈಲ್ ಹಾವಳಿಯಿಂದಾಗಿ ಹೊಸ ಬರಹಗಾರರು ಕಡಿಮೆಯಾಗುತ್ತಿದ್ದಾರೆ. ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಸಾಹಿತ್ಯ ಕ್ಷೇತ್ರ ಅಭಿವೃದ್ಧಿ ಕಾಣುತ್ತದೆ. ಸಮಾಜದ ಸಮಸ್ಯೆಗಳನ್ನು ಬಿಂಬಿಸುವ ಕಾವ್ಯಗಳ ರಚನೆಗೆ ಹೊಸ ಬರಹಗಾರರು ಮುಂದಾಗಬೇಕು. ಮಹಿಳಾ ಬರಹಗಾರರು ಹೆಚ್ಚು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ವಂದಾರಗುಪ್ಪೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಹೊಸಹಳ್ಳಿ ಶ್ರೀಕಂಠು, ಕಾಲೇಜಿನ ಕನ್ನಡದ ವಿಭಾಗದ ಮುಖ್ಯಸ್ಥ ಡಾ.ಎಚ್.ಎಲ್.ರವೀಂದ್ರ, ಟ್ರಸ್ಟ್ ಅಧ್ಯಕ್ಷ ಎಸ್.ರಾಮಲಿಂಗೇಶ್ವರ್, ತಾಲ್ಲೂಕು ಕಸಾಪ ನಿಕಟಪೂರ್ವ ಅಧ್ಯಕ್ಷ ಎಂ.ಶಿವಮಾದು, ಭಾ.ವಿ.ಪ ಅಧ್ಯಕ್ಷ ವಸಂತ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.