ADVERTISEMENT

ಹಾರೋಹಳ್ಳಿ: ಕಾಮಗಾರಿ ಸ್ಥಗಿತ ನಾಲೆಯಲ್ಲಿ ಹರಿಯದ ನೀರು- ಗ್ರಾಮಸ್ಥರ ಆಕ್ರೋಶ

ನಿಂತಲ್ಲೇ ನಿಂತ ನೀರು, ವಾಸನೆ, ಹುಳುಗಳ ಆವಾಸ ಸ್ಥಾನ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 3:01 IST
Last Updated 27 ಜನವರಿ 2026, 3:01 IST
   

ಹಾರೋಹಳ್ಳಿ: ಭೈರಮಂಗಲ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಅಂಬಿಗನಹಳ್ಳದಲ್ಲಿ ನಿರ್ಮಿಸುತ್ತಿರುವ ನಾಲೆಯು ಕಳೆದ 6 ತಿಂಗಳಿನಿಂದಲೂ ಕಾಮಗಾರಿ ಸ್ಥಗಿತತೊಂಡಿದೆ. ‌ಅರ್ಧಂಬರ್ಧ ಕಾಮಗಾರಿಯಿಂದ ನಾಲೆಯಲ್ಲಿ ನೀರು ಹರಿಯುತ್ತಿಲ್ಲ ಎಂದು ಹೊನ್ನಲಗನದೊಡ್ಡಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಹಾರೋಹಳ್ಳಿ ತಾಲ್ಲೂಕಿನ ಅಣೆದೊಡ್ಡಿಯಿಂದ ಕುರುಬರಹಳ್ಳಿಗೆ ವೃಷಭಾವತಿ ನೀರು ಹರಿಯುತ್ತಿದೆ. ನೀರು ಸರಾಗವಾಗಿ ಹರಿಯುವ ಸಲುವಾಗಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ನಾಲೆ ನಿರ್ಮಿಸಲಾಗುತ್ತಿದೆ. ನಾಲೆ ನಿರ್ಮಾಣದಿಂದ ನಾರಾಯಣಪುರ ಹೊನ್ನಾಲಗನದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಉಪಯೋಗವಾಗಲಿದೆ. ಆದರೆ, ನಾನಾ ಕಾರಣಗಳಿಂದ ಇದೀಗ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಮಗಾರಿಯಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಅರ್ಧಂಬರ್ಧ ಕಾಮಗಾರಿಯಿಂದ ಹಲವು ತಿಂಗಳಿನಿಂದ ನಾಲೆಯಲ್ಲಿ ನೀರು ನಿಂತಲ್ಲೇ ನಿಂತಿದೆ. ಇದರಿಂದ ನೀರು ವಾಸನೆ ಬಂದು ಹುಳುಗಳ ಆವಾಸ ಸ್ಥಾನವಾಗಿದೆ. ಇದರಿಂದ ಹಲವು ರೀತಿ ಆರೋಗ್ಯ ಪರಿಣಾಮ ಎದುರಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ಹೆಚ್ಚಿನ ಅನುದಾನ ಒದಗಿಸಿ ಕೆಲಸ ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ವೈಜ್ಞಾನಿಕ ಕಾಮಗಾರಿಯಾಗಲಿ: ನಾಲೆ ನಿರ್ಮಿಸುವ ಸಲುವಾಗಿ ನಾರಾಯಣಪುರ ಗ್ರಾಮದಲ್ಲಿ ಕಾಮಗಾರಿಯನ್ನು ಅನುಷ್ಠಾನ ಮಾಡಲಾಗಿದೆ. ವೈಜ್ಞಾನಿಕವಾಗಿ ಕಾಮಗಾರಿ ನಡೆಸದೆ ಬೇಕಾಬಿಟ್ಟಿಯಾಗಿ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ನೀರು ಸರಾಗವಾಗಿ ಹರಿಯದೆ ನಾಲೆಯ ಮೇಲೆಯೇ ನಿಲ್ಲುತ್ತಿದೆ. ನೀರು ಹೆಚ್ಚಾದರೆ ಕಾಲುವೆಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಶೇಖರ್, ರವಿಕುಮಾರ್, ಶಿವಣ್ಣ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.