ರಾಮನಗರ: ಲಾಕ್ಡೌನ್ನಿಂದ ರಾಜ್ಯದಲ್ಲಿ ಬೆಳೆ ನಷ್ಟ ಅನುಭವಿಸುತ್ತಿರುವ ರೈತರಿಗೆ ಅವರು ಬೆಳೆದ ಬೆಳೆಯ ಮೌಲ್ಯಕ್ಕೆ ಸರಿಸಮನಾಗಿ ಎಕರೆಗೆ 10-20 ಸಾವಿರ ಪರಿಹಾರ ನೀಡಬೇಕು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.
ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸೋಮವಾರ ಕೊರೊನಾ ಸೋಂಕು ನಿವಾರಕ ದ್ರಾವಣ ಸಿಂಪಡನೆ ಟನಲ್ಗೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಕ್ಡೌನ್ ಸಂದರ್ಭದಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವಲ್ಲಿ ಸರ್ಕಾರ ವಿಫಲವಾಗಿದೆ. ಪರಿಣಾಮವಾಗಿ ರೈತರು ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ. ಸದ್ಯಕ್ಕೆ ಸರ್ಕಾರಕ್ಕೆ ಹಣದ ಕೊರತೆಯಿಲ್ಲ. ರೈತರು ಕೃಷಿ ಮುಂದುವರಿಸಬೇಕಾದರೆ ಅವರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದು ಅವರು ಸಲಹೆ ನೀಡಿದರು. ಮಾವು ಸೇರಿದಂತೆ ಎಲ್ಲ ಕೃಷಿ ಉತ್ಪನ್ನಗಳ ಬೆಲೆ ಕುಸಿದಿದೆ. ರೈತರಿಂದ ಹೊಲದಲ್ಲೇ ಕೊಂಡುಕೊಳ್ಳುವ ವ್ಯವಸ್ಥೆ ಇನ್ನಾದರೂ ಬರಬೇಕು. ಕೃಷಿ ಉತ್ಪನ್ನಗಳನ್ನು ಹೊರ ರಾಜ್ಯಗಳಿಗೆ ರಫ್ತು ಮಾಡಲು ಇರುವ ಅಡೆತಡೆಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು.
ಕೊರೊನಾ ಸೋಂಕು ನಿವಾರಣೆಯ ದೃಷ್ಟಿಯಿಂದ ರಾಜ್ಯದ ಎಲ್ಲ ಕಡೆ ಸರ್ಕಾರವು ಕೊರಾನಾ ಸೋಂಕು ನಿವಾರಕ ದ್ರಾವಣ ಸಿಂಪಡನೆ ಘಟಕಗಳನ್ನು ತೆರೆಯಬೇಕು ಎಂದು ಅವರು ಇದೇ ಸಂದರ್ಭ ಸಲಹೆ ನೀಡಿದರು.
17ರಂದೇ ನಿಖಿಲ್ ವಿವಾಹ
ಪೂರ್ವ ನಿಗದಿಯಂತೆ ಇದೇ 17ರಂದು ನಿಖಿಲ್-ರೇವತಿ ವಿವಾಹ ನಡೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಎರಡೂ ಕುಟುಂಬದ 15-20 ಜನರು ಸೇರಿ ಸರಳವಾಗಿ ಬೆಂಗಳೂರಿನ ಮನೆಯ ಆವರಣದಲ್ಲೇ ಅಂದು ವಿವಾಹ ನೆರವೇರಿಸುತ್ತೇವೆ. ಮುಂದೆ ಅವಕಾಶ ಸಿಕ್ಕಾಗ ಬೇರೆ ಕಾರ್ಯಕ್ರಮವನ್ನು ಆಯೋಜಿಸುತ್ತೇವೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.