ಸಾತನೂರು (ಕನಕಪುರ): ‘ಹೈನುಗಾರಿಕೆಯಲ್ಲಿ ಹಾಲಿಗೆ ನಿರ್ದಿಷ್ಟ ಹಾಗೂ ಗರಿಷ್ಠ ದರ ಸಿಗುತ್ತಿದೆ. ಜತೆಗೆ ಸರ್ಕಾರದಿಂದಲೂ ಪ್ರೋತ್ಸಾಹ ಧನ ಸಿಗುತ್ತಿದೆ. ರೈತರು ಹೈನುಗಾರಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು’ ಎಂದು ಬಮೂಲ್ ನಿರ್ದೇಶಕ ರಾಜಕುಮಾರ್ ಹೇಳಿದರು.
ಇಲ್ಲಿನ ಸಾತನೂರು ಹೋಬಳಿ ಎಲವಳ್ಳಿ ಗ್ರಾಮದ ಹಾಲಿನ ಡೇರಿ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ರೇಷ್ಮೆ ಗೂಡಿನ ಬೆಲೆ ಕಡಿಮೆಯಾಗಿ, ರೈತರನ್ನು ಸಂಕಷ್ಟಕ್ಕೆ ದೂಡಿದೆ. ಆದರೆ ಹೈನುಗಾರಿಕೆಯಲ್ಲಿ ಹಾಲಿನ ಧಾರಣೆ ಕಡಿಮೆಯಾಗಿಲ್ಲ. ವಾರ್ಷಿಕವಾಗಿ ಡೇರಿಯಿಂದ ಬೋನಸ್ ಸಿಗುತ್ತದೆ’ ಎಂದು ಹೇಳಿದರು.
ಎಲವಳ್ಳಿ ಡೇರಿ ಅಧ್ಯಕ್ಷ ವೈ.ಕೆ.ನಾಗರಾಜು ಮಾತನಾಡಿ, ‘ಪ್ರತಿ ಗ್ರಾಮದಲ್ಲೂ ಹಾಲಿನ ಡೇರಿ ಇರುವುದರಿಂದ ರೈತರಿಗೆ ಅನುಕೂಲವಾಗಿದೆ. ಜತೆಗೆ ನಮ್ಮ ತಾಲ್ಲೂಕಿನಲ್ಲಿಯೇ ಹಾಲು ಶೀಥಲೀಕರಣ, ಮೆಗಾ ಡೇರಿ ಇರುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ. ರೈತರು ಹೆಚ್ಚು ಜಿಡ್ಡಿನ ಅಂಶವಿರುವ ಗುಣಮಟ್ಟದ ಹಾಲನ್ನು ಡೇರಿಗೆ ನೀಡಬೇಕು’ ಎಂದು ಸಲಹೆ ನೀಡಿದರು.
ಡೇರಿಯ ಕಾರ್ಯದರ್ಶಿ ಚಂದ್ರಶೇಖರ್ 2018-19ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ವಿಸ್ತರಣಾಧಿಕಾರಿ ಪರ್ಹ ಜಬೀನಾ ಸೇರಿದಂತೆ ಡೇರಿಯ ಎಲ್ಲ ನಿರ್ದೇಶಕರು, ರೈತರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.