ಕನಕಪುರ: ಜಾರಿ ನಿರ್ದೇಶನಾಲಯ ಅಧಿಕಾರಿಗಳ ಕಸ್ಟಡಿಯಲ್ಲಿರುವ ಡಿ.ಕೆ.ಶಿವಕುಮಾರ್ ಅವರನ್ನು ಸೆ. 17 ರಂದು ಬಿಡುಗಡೆ ಮಾಡದಿದ್ದರೆ ತಾಲ್ಲೂಕಿನಿಂದ ಬೆಂಗಳೂರಿಗೆ ಬೃಹತ್ ಪಾದಯಾತ್ರೆ ಹೋಗುವುದಾಗಿ ಪ್ರತಿಭಟನಕಾರರು ತಿಳಿಸಿದರು.
ಇಲ್ಲಿನ ನಗರಸಭೆ ಮುಂಭಾಗ 'ನಾಗರಿಕ ಬಂಧುಗಳ' ವತಿಯಿಂದ ಶನಿವಾರ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಮಾತನಾಡಿದರು.
‘ಶಿವಕುಮಾರ್ ಇ.ಡಿ ವಿಚಾರಣೆಗೆ ಒಳಪಡಿಸಿದ ದಿನದಿಂದ ತಾಲ್ಲೂಕಿನಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ನಾಗರಿಕರು, ವ್ಯಾಪಾರಸ್ಥರು ಮುಕ್ತವಾಗಿ ಸಹಕಾರ ನೀಡಿದ್ದಾರೆ. ನಮ್ಮೊಂದಿಗೆ ಕೈ ಜೋಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ. ನಗರಸಭೆ ಮುಂಭಾಗ ನಿರಂತವಾಗಿ 10 ದಿನಗಳ ಕಾಲ ಪ್ರತಿಭಟನಾ ಧರಣಿ ನಡೆದಿದೆ. ಇದು ಶಿವಕುಮಾರ್ ಮೇಲಿನ ಅಭಿಮಾನಕ್ಕೆ ಸಾಕ್ಷಿ’ ಎಂದರು.
ಸೆ.17 ರ ವರೆಗೆ ಇ.ಡಿ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದೆ. 16 ರಂದು ಜಾಮೀನು ಅರ್ಜಿ ವಿಚಾರಣೆಯಾಗಲಿದೆ. 17 ರಂದು ಕಸ್ಟಡಿಯ ಅವಧಿ ಮುಗಿಯಲಿದ್ದು ಅಂದು ಏನಾಗುತ್ತದೆ ಎಂದು ನೋಡಿಕೊಂಡು ಮುಂದಿನ ಹೋರಾಟದ ತೀರ್ಮಾನ ಮಾಡುವುದಾಗಿ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಜಯರತ್ನ ರಾಜೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯೆ ಧನಲಕ್ಷ್ಮಿ ಚಂದ್ರನಾಯ್ಕ್, ಮುಖಂಡರುಗಳಾದ ಏಳಗಳ್ಳಿರವಿ, ಸಿಲ್ಕ್ರವಿ, ಚೀರಣಕುಪ್ಪೆ ರವಿ, ರವಿ, ನಾಗರಾಜು, ಗೋಪಾಲನಾಯ್ಕ್, ಹಲಗಪ್ಪ, ವೀರಭದ್ರಯ್ಯ, ಪುಟ್ಟಸ್ವಾಮಿ, ಸುಧಾ, ಲಕ್ಷ್ಮಿದೇವಮ್ಮ, ಶಿವರಾಮಚಾರಿ, ಅಮ್ಜದ್ ಆಲಿಖಾನ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.