ರಾಮನಗರ: ಕನಕಪುರ ತಾಲ್ಲೂಕಿನ ಕಪಾಲ ಬೆಟ್ಟ ಅರ್ಥಾತ್ ಮುನೇಶ್ವರ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದು ಸ್ವಾಗತಾರ್ಹ. ಇದು ಹಿಂದೂ ಜಾಗರಣ ವೇದಿಕೆ ಹೋರಾಟಕ್ಕೆ ಸಂದ ಜಯ ಎಂದು ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ದೋ.ಕೇಶವಮೂರ್ತಿ ತಿಳಿಸಿದರು.
"ಬೆಟ್ಟದಲ್ಲಿ ಅನುಮತಿ ಇಲ್ಲದೆ ಯಾವುದೇ ಕಾಮಗಾರಿ ನಡಸೆದಂತೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಈ ಪ್ರಕರಣವು ತಾತ್ವಿಕ ಅಂತ್ಯ ಕಾಣುವವರೆಗೂ ವೇದಿಕೆಯು ಹೋರಾಟ ನಡೆಸಲಿದೆ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಡಿ.ಕೆ. ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್ ವರಿಷ್ಠೆ ಸೋನಿಯಾ ಅವರನ್ನು ಮೆಚ್ಚಿಸಿ ಅಧಿಕಾರ ಪಡೆಯುವ ಸಲುವಾಗಿ ನಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 283ರಲ್ಲಿ ದಾಖಲಾಗಿರುವ 231 ಎಕರೆ ಸರ್ಕಾರಿ ಗೋಮಾಳದ ಪೈಕಿ ಪೈಕಿ 10 ಎಕರೆ ಜಾಗವನ್ನು ಕಾನೂನು ಬಾಹಿರವಾಗಿ ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಮಂಜೂರು ಮಾಡಿಸಿದ್ದರು’ ಎಂದು ಅವರು ಆರೋಪಿಸಿದರು.
"ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸರ್ಕಾರಿ ಜಾಗವನ್ನು ಯಾವುದೇ ಮತೀಯ ಸಂಘಟನೆಗಳಿಗೆ ನೀಡಬಾರದು. ಆದರೆ ಡಿ.ಕೆ. ಸಹೋದರರು ನಿಯಮಗಳನ್ನು ಗಾಳಿಗೆ ತೂರಿ, ತಮ್ಮ ಬೆಂಬಲಿಗರನ್ನು ಒಳಗೊಂಡಂತೆ ಟ್ರಸ್ಟ್ ರಚನೆ ಮಾಡಿದ್ದಾರೆ. ಅಲ್ಲದೆ, ಬೆಟ್ಟದಲ್ಲಿ ಕಾನೂನು ಬಾಹಿರವಾಗಿ ರಸ್ತೆ ನಿರ್ಮಾಣ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಹೇಳಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಸಿಂಗ್ ಮಾತನಾಡಿ "ಹಾರೋಬೆಲೆಯಲ್ಲಿ ಈಗಾಗಲೇ ಬೃಹತ್ ಚರ್ಚ್ ಇದೆ. ಅಲ್ಲಿ ಏಸು ಪ್ರತಿಮೆ ಸ್ಥಾಪನೆಯ ಅವಶ್ಯಕತೆ ಇಲ್ಲ. ಕೇವಲ ಸ್ಥಳೀಯ ರಾಜಕಾರಣಿಯ ರಾಜಕೀಯ ಲಾಭಕ್ಕಾಗಿ ನಿರ್ಮಾಣಕ್ಕೆ ಮುಂದಾಗಲಾಗಿತ್ತು. ಈಗಾಗಲಾದರೂ ಸರ್ಕಾರ ಜಮೀನು ಹಿಂಪಡೆದು ಗೋಮಾಳವಾಗಿಯೇ ಉಳಿಸಿಕೊಳ್ಳಬೇಕು. ಅದನ್ನು ಜೀವ ವೈವಿಧ್ಯತೆಯ ತಾಣವಾಗಿ ಅಭಿವೃದ್ಧಿ ಪಡಿಸಬೇಕು" ಎಂದು ಒತ್ತಾಯಿಸಿದರು.
ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಸುರೇಶ್ , ಜಿಲ್ಲಾ ಕಾರ್ಯದರ್ಶಿ ಅರುಣ್ಕುಮಾರ್ ಸಿಂಗ್, ಜಿಲ್ಲಾ ಪ್ರಚಾರ ಪ್ರಮುಖ ಧನಂಜಯ್ಯ, ವೇದಿಕೆ ಮಾತೃ ಸುರಕ್ಷಾ ಜಿಲ್ಲಾ ಸಂಯೋಜಕ ಬಾಲು ವೆಂಕಟೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.