ಮಾಗಡಿ: ಮಹಿಳೆಯರು ಅಧ್ಯಯನದ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡರೆ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಶೈಲಜಾ ತಿಳಿಸಿದರು.
ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ನಡೆದ ಸ್ತ್ರೀಶಕ್ತಿ ಸಂಘಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಏರ್ಪಡಿಸಿದ್ದ ಸಾಬೂನು ತಯಾರಿಕೆ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು.
ಮಾತೃ ಪ್ರಧಾನ ಕುಟುಂಬಗಳು ಕಣ್ಮರೆಯಾಗುತ್ತಿವೆ. ತೊಟ್ಟಿಲು ತೂಗುವ ಕೈಗಳು ದೇಶದ ಅಧಿಕಾರದ ಚುಕ್ಕಾಣಿ ಹಿಡಿಯಬಲ್ಲರು ಎಂಬುದಕ್ಕೆ ಅಹಲ್ಯಾಬಾಯಿ ಹೋಳ್ಕರ್, ರಾಣಿ ಅಬ್ಬಕ್ಕದೇವಿ ಇತರರಿಂದ ಮುನ್ನೆಲೆಗೆ ಬಂತು. ಆಧುನಿಕ ಕಾಲದಲ್ಲೂ ಸ್ತ್ರೀಯರನ್ನು ನೋಡುವ ಸಮಾಜದ ಸ್ಥಿತಿಗತಿ ಬದಲಾಗಿಲ್ಲ. ಮಹಿಳೆ ಅಡುಗೆ ಮನೆಯಿಂದ ಮನೆಯಂಗಳಕ್ಕೆ ಅಲ್ಲಿಂದ ಗ್ರಾಮದ ಬೀದಿಗೆ, ಮುಖ್ಯವಾಹಿನಿಗೆ ದಾಪುಗಾಲು ಇಡುವ ಕಾಲ ಬಂದಿದೆ. ಮನೆಯಲ್ಲಿಯೇ ಕುಳಿತು ಸಾಬೂನು, ಫೆನಾಯಿಲ್, ಶೌಚಾಲಯಕ್ಕೆ ಬಳಸುವ ಕ್ಲಿನಿಕಲ್ಸ್, ಗಂಧದ ಕಡ್ಡಿ, ವಸ್ತುಗಳನ್ನು ತಯಾರಿಸುವುದನ್ನು ಕಲಿತುಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಎನ್.ಪ್ರಭಾ ಬೆಳವಂಗಲ ಮಾತನಾಡಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಜನರಿಂದ ದೂರವಾಗಿವೆ. ಮಡಿಕೆ ತಯಾರಿಸುವ ಕುಂಬಾರ, ಮನೆಯಲ್ಲಿ ಸಾಂಬರು ಪುಡಿ ತಯಾರಿಸುವ ಮಹಿಳೆ ವಿಶ್ವವಿದ್ಯಾಲಯದಲ್ಲಿ ಕಲಿತವರಲ್ಲ. ಮನೆಯಲ್ಲಿಯೇ ಸಾಬೂನು, ಶೌಚಾಲಯಕ್ಕೆ ಬಳಸುವ ಕ್ರಿಮಿನಾಶಕ, ಮೇಣದ ಬತ್ತಿ ಅಲ್ಪಬಂಡವಾಳದಲ್ಲಿ ತಯಾರಿಸಿ ಶ್ರದ್ಧೆಯಿಂದ ವ್ಯವಹರಿಸಿದರೆ ಹಣ ಗಳಿಸಬಹುದು. ಟಿವಿ ಧಾರಾವಾಹಿ ನೋಡುವ ಬದಲು ಕರಕುಶಲ ಕಲೆ ರೂಢಿಸಿಕೊಂಡರೆ ಬದುಕು ಬಂಗಾರ ಮಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಅರ್ಥಶಾಸ್ತ್ರದ ಪ್ರಾಧ್ಯಾಪಕಿ ಡಾ.ಭವಾನಿ, ಡಾ.ವೀಣಾ ಮಾತನಾಡಿದರು. ಹಾರೋಹಳ್ಳಿ ಜನಪದ ಕಲಾವಿದೆ ಸುನಂದಮ್ಮ ತಂಡದವವರು ಜನಪದ ಗೀತೆಗಳನ್ನು ಹಾಡಿದರು. ಅಂಗನವಾಡಿ ಕಾರ್ಯಕರ್ತಯರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು, ಕಾಲೇಜಿನ ವಿದ್ಯಾರ್ಥಿನಿಯರು, ಪ್ರಾಧ್ಯಾಪಕರು, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.