ADVERTISEMENT

ರಾಮನಗರ | ಸ್ವಾತಂತ್ರ್ಯ ದಿನ: 4.8 ಲಕ್ಷ ಲಾಡು ವಿತರಣೆ

ಶಾಲಾ–ಕಾಲೇಜು, ಸರ್ಕಾರಿ ಕಚೇರಿಗಳಿಗೆ ವಿತರಣೆ: ಶಾಸಕ ಎಚ್.ಎ. ಇಕ್ಬಾಲ್ ಹುಸೇನ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 3:14 IST
Last Updated 15 ಆಗಸ್ಟ್ 2025, 3:14 IST
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲಾ–ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಲಾಡುಗಳ ಬಾಕ್ಸ್‌ಗಳನ್ನು ವಿತರಿಸಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು ಹಾಗೂ ಇತರರು ಇದ್ದಾರೆ
ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬೆಂಗಳೂರು ದಕ್ಷಿಣ ಜಿಲ್ಲೆಯ ಶಾಲಾ–ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು ಲಾಡುಗಳ ಬಾಕ್ಸ್‌ಗಳನ್ನು ವಿತರಿಸಿದರು. ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು ಹಾಗೂ ಇತರರು ಇದ್ದಾರೆ   

ರಾಮನಗರ: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರತಿ ವರ್ಷ ಆ. 15ರಂದು ಜಿಲ್ಲೆಯ ಶಾಲಾ–ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಲಾಡು ವಿತರಣೆ ಮಾಡುವ ಸಂಪ್ರದಾಯ ಮುಂದುವರಿಸಿಕೊಂಡು ಬಂದಿರುವ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರು, ಈ ಸಲವೂ 4.8 ಲಕ್ಷ ಲಾಡುಗಳನ್ನು ನಗರದ ಹೊರವಲಯದ ಎಸ್.ಎಸ್. ಕನ್ವೆನ್ಷನ್‌ ಹಾಲ್‌ನಲ್ಲಿ ವಿತರಣೆ ಮಾಡಿದರು.

ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆಯ ಅಧಿಕಾರಿಗಳು ಹಾಗೂ ಜಿಲ್ಲಾ ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಕೆ. ಸತೀಶ್ ಅವರ ಮೂಲಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ– ಕಾಲೇಜು ವಿದ್ಯಾರ್ಥಿಗಳು, ಅಂಗನವಾಡಿ, ಮದರಸ ಹಾಗೂ ಸರ್ಕಾರಿ ಕಚೇರಿಗಳ ಸಿಬ್ಬಂದಿಗೆ ಲಾಡು ತುಂಬಿದ ಬಾಕ್ಸ್‌ಗಳನ್ನು ಹಸ್ತಾಂತರಿಸಿದರು.

ಬಳಿಕ ಮಾತನಾಡಿದ ಹುಸೇನ್, ‘ನಾನು ತಾಲ್ಲೂಕು ಪಂಚಾಯಿತಿ ಸದಸ್ಯನಾಗಿದ್ದಾಗ ಕನಕಪುರ ತಾಲ್ಲೂಕಿನಲ್ಲಿ ಸ್ವಂತ ಖರ್ಚಿನಲ್ಲಿ ಸ್ವಾತಂತ್ರ್ಯ ದಿನದಂದು ವಿದ್ಯಾರ್ಥಿಗಳಿಗೆ ಸಿಹಿ ಹಂಚುವುದಕ್ಕೆ ಆರಂಭಿಸಿದೆ. 2014ರಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷನಾದ ಬಳಿಕ, ಸಿಹಿ ಹಂಚುವಿಕೆಯನ್ನು ಇಡೀ ಜಿಲ್ಲೆಗೆ ವಿಸ್ತರಿಸಿದೆ’ ಎಂದರು.

ADVERTISEMENT

‘ಬೆಂಗಳೂರು ದಕ್ಷಿಣ ಜಿಲ್ಲೆಯ ಐದು ತಾಲ್ಲೂಕುಗಳಿಗೆ ಮಾತ್ರ ಸೀಮಿತವಾಗಿದ್ದ ಸಿಹಿ ವಿತರಣೆಯನ್ನು ಈ ಸಲ ಪಕ್ಕದ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿಗೂ ವಿಸ್ತರಿಸಿರುವೆ. ಅಲ್ಲಿನ ಶಾಸಕ ಡಾ. ರಂಗನಾಥ್ ಅವರು ನನ್ನೊಂದಿಗೆ ಈ ಬಗ್ಗೆ ಚರ್ಚಿಸಿದ ಬೆನ್ನಲ್ಲೇ, ಅಲ್ಲಿನ ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ 72,194 ಲಾಡುಗಳನ್ನು ಕಳಿಸಿ ಕೊಡಲಾಗಿದೆ’ ಎಂದು ಹೇಳಿದರು.

‘ಶುಕ್ರವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಮೂರು ಸಾವಿರ ಲಾಡುಗಳನ್ನು ವಿತರಿಸಲಾಗುವುದು. ಸ್ವಾತಂತ್ರ್ಯ ದಿನಾಚರಣೆಯಂದು ಎಲ್ಲರೂ ಸಿಹಿ ಸವಿಯುವ ಮೂಲಕ ಸಂಭ್ರಮಿಸಬೇಕು’ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ತಾಲ್ಲೂಕು ಅಧ್ಯಕ್ಷ ವಿ.ಎಚ್. ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಅಸ್ಮತ್‌, ನಿಜಾಮುದ್ದೀನ್ ಶರೀಫ್, ಸಮದ್, ನಾಗಮ್ಮ, ಗಿರಿಜಮ್ಮ, ಬೈರೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಗಿರೀಶ್, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕಿರಣ್, ಮುಖಂಡರಾದ ಸಿ.ಎನ್.ಆರ್. ವೆಂಕಟೇಶ್, ರೈಡ್ ನಾಗರಾಜ್, ರಂಜಿತ್, ಗುರುಪ್ರಸಾದ್, ಅಧಿಕಾರಿಗಳು ಹಾಗೂ ಇತರರು ಇದ್ದರು.

‘ವರಿಷ್ಠರ ತೀರ್ಮಾನಕ್ಕೆ ತಲೆ ಬಾಗಬೇಕು’

‘ಸಚಿವ ಸಂಪುಟದಿಂದ ಕೆ.ಎನ್. ರಾಜಣ್ಣ ಅವರ ವಜಾ ಹೈಕಮಾಂಡ್ ತೀರ್ಮಾನ. ನಮ್ಮದು ಶಿಸ್ತಿನ ಪಕ್ಷ. ವರಿಷ್ಠರ ತೀರ್ಮಾನಕ್ಕೆ ಎಲ್ಲರೂ ತಲೆ ಬಾಗಲೇಬೇಕು. ರಾಹುಲ್ ಗಾಂಧಿ ನಮ್ಮ ರಾಷ್ಟ್ರ ನಾಯಕರು. ಚುನಾವಣಾ ಅಕ್ರಮದ ಬಗ್ಗೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ದಾರೆ. ಆ ಹೋರಾಟವನ್ನು ನಾವು ಬೆಂಬಲಿಸಿ ಶಕ್ತಿ ತುಂಬಬೇಕು. ನಾವು ಆ ಕೆಲಸ ಮಾಡುತ್ತಿದ್ದೇವೆ’ ಎಂದು ನಂತರ ಸುದ್ದಿಗಾರರಿಗೆ ಹುಸೇನ್ ಪ್ರತಿಕ್ರಿಯಿಸಿದರು. ‘ರಾಜಣ್ಣ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಷಡ್ಯಂತ್ರ ಮಾಡಿದ್ದಾರೆ’ ಎಂಬ ಬಿಜೆಪಿ ಆರೋಪಕ್ಕೆ ‘ಶಿವಕುಮಾರ್ ಪಕ್ಷದ ರಾಜ್ಯಾಧ್ಯಕ್ಷರು. ಆದರೆ ರಾಜಣ್ಣ ಅವರ ವಜಾ ತೀರ್ಮಾನ ಮಾಡಿರುವುದು ಕೇಂದ್ರದ ನಾಯಕರು. ಹಾಗಾಗಿ ಇಲ್ಲಿ ಪಿತೂರಿ ಮತ್ತು ಷಡ್ಯಂತ್ರದ ಮಾತು ಬರುವುದಿಲ್ಲ. ಕೇಂದ್ರ ನಾಯಕರ ತೀರ್ಮಾನದಲ್ಲಿ ರಾಜ್ಯ ನಾಯಕರ ಪಾತ್ರವಿಲ್ಲ. ರಾಜಣ್ಣ ಅವರು ಹಿರಿಯ ನಾಯಕರು. ಸಹಕಾರ ಕ್ಷೇತ್ರದಲ್ಲಿ ಅ‍ಪಾರ ಜ್ಞಾನವಿರುವ ಅವರು ಪಕ್ಷ ಕಟ್ಟಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಅವರು ಕಾಂಗ್ರೆಸ್ ಬಿಟ್ಟು ಯಾವ ಪಕ್ಷಕ್ಕೂ ಹೋಗಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.