ಹಾರೋಹಳ್ಳಿ: ಇಲ್ಲಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಒಂದನೇ ಹಂತದ ರಾಮಸಾಗರ ಗ್ರಾಮದ ಬಳಿ ಇರುವ ಸ್ಟೌವ್ ಕ್ರಾಫ್ಟ್ ಕಾರ್ಖಾನೆಯ ತ್ಯಾಜ್ಯದ ನೀರು ಪಕ್ಕದ ಸುವರ್ಣಮುಖಿ ನಾಲೆ ಸೇರುತ್ತಿದ್ದು, ಆ ನೀರು ಮೇಡಮಾರನಹಳ್ಳಿ ಗ್ರಾಮದ ಕೃಷಿ ಭೂಮಿಗೆ ಹರಿಯುತ್ತಿದೆ. ಇದರಿಂದಾಗಿ ರೈತರು ತಮ್ಮ ಬೆಳೆ ನಷ್ಟವಾಗುವ ಆತಂಕದಲ್ಲಿದ್ದಾರೆ.
ತಾಲ್ಲೂಕು ಕೇಂದ್ರದ ಹೊರವಲಯದಲ್ಲಿರುವ ಗ್ರಾಮಗಳ ಬಹುತೇಕ ಕೃಷಿ ಭೂಮಿ ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನವಾಗಿ, ವಿವಿಧ ಕಾರ್ಖಾನೆಗಳು ತಲೆ ಎತ್ತಿವೆ. ಕೆಲ ಗ್ರಾಮಗಳಲ್ಲಿ ಅಲ್ಲೋ ಇಲ್ಲೋ ಎಂಬಂತೆ ಅಲ್ಪಸ್ವಲ್ಪ ಕೃಷಿ ಭೂಮಿ ಉಳಿದಿದ್ದು, ಅದರಲ್ಲೇ ರೈತರು ಬೇಸಾಯ ಮಾಡುತ್ತಿದ್ದಾರೆ. ರಾಗಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುತ್ತಾರೆ.
ಇದೀಗ ಆ ಭೂಮಿಗೂ ಕಾರ್ಖಾನೆಗಳ ತ್ಯಾಜ್ಯದ ನೀರು ಹರಿಯುತ್ತಿರುವುದರಿಂದ, ರೈತರು ಬೇಸಾಯಕ್ಕು ಕುತ್ತು ಬಂದಿದೆ. ರೈತರಿಗೆ ನಾಲೆ ನೀರು ಬಿಟ್ಟು ಬೇರೆ ಜಲಮೂಲಗಳಿಲ್ಲ. ಆದರೆ, ತ್ಯಾಜ್ಯದ ನೀರು ನೇರವಾಗಿ ನಾಲೆ ಸೇರುತ್ತಿರುವುದರಿಂದ ರೈತರ ಭೂಮಿಗೂ ಅದೇ ತ್ಯಾಜ್ಯದ ನೀರು ಬಂದು ಸೇರಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ರೈತರಿಗೆ ತ್ಯಾಜ್ಯ ನೀರಿನಿಂದ ಬೆಳೆ ಕೈ ಸೇರುತ್ತದೊ ಇಲ್ಲವೊ ಎಂಬ ಚಿಂತೆ ಶುರುವಾಗಿದೆ.
ನಾಲೆ ನೀರೇ ಗತಿ: ಮೇಡಮಾರನಹಳ್ಳಿ ಗ್ರಾಮದ ಸುಮಾರು 40 ರೈತರು ತಮ್ಮ ಜಮೀನಿನ ಬಳಿ ಇರುವ ಸುವರ್ಣಮುಖಿ ನಾಲೆಯನ್ನು ನೆಚ್ಚಿಕೊಂಡು ಬದುಕಿ ಭತ್ತ, ರಾಗಿ, ಜೋಳ ಬೆಳೆಯುತ್ತಿದ್ದಾರೆ. ಹೀಗಿರುವಾಗ ಅವರ ಹಿತ ಕಾಯಬೇಕಾದ ಕಾರ್ಖಾನೆಯವರು ತ್ಯಾಜ್ಯದ ನೀರನ್ನು ನಾಲೆಗೆ ಬಿಟ್ಟು ಜಮೀನುಗಳಿಗೆ ಹರಿಯುವಂತೆ ಮಾಡಿದ್ದಾರೆ ಎಂದು ಗ್ರಾಮದ ರೈತರಾದ ರಾಜು ವಿ., ವೆಂಕಟಪ್ಪ, ಸೀತಪ್ಪ, ಗಣೇಶ್, ತೀರ್ಥಾಚಾರಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಕೃಷಿ ಭೂಮಿಗಳನ್ನು ಕೈಗಾರಿಕೆಗಳಿಗಾಗಿ ಬಿಟ್ಟುಕೊಟ್ಟ ತಪ್ಪಿಗೆ ನಮಗ್ಯಾಕೆ ಈ ಶಿಕ್ಷೆ? ಅನ್ನ ಬೆಳೆದು ಕೊಡುವ ನಮಗೆ, ಅದರ ಬದಲಾಗಿ ವಿಷದ ನೀರನ್ನು ಕೊಡುವುದು ಎಷ್ಟು ಸರಿ? ನಮ್ಮ ಮೇಲೆ ಕಾರ್ಖಾನೆ ಮಾಲೀಕರಿಗೆ ಯಾಕಿಷ್ಟು ಕೋಪ? ಹೀಗಾದರೆ, ನಾವು ಬೆಳೆ ಬೆಳೆಯುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.
ನಿಯಮ ಉಲ್ಲಂಘನೆ: ಕಾರ್ಖಾನೆಯು ನಿಯಮ ಉಲ್ಲಂಘಿಸಿ ತ್ಯಾಜ್ಯದ ನೀರನ್ನು ನಾಲೆಗೆ ಬಿಟ್ಟಿದ್ದಾರೆ. ಈ ಕುರಿತು ರೈತರು ಅಧಿಕಾರಿಗಳಿಗೆ ದೂರು ಕೊಟ್ಟಿದ್ದಾರೆ. ಆದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕಾರ್ಖಾನೆಯ ಮಾಲೀಕ ಪ್ರಭಾವಿಯಾಗಿರುವುದೇ ಇದಕ್ಕೆ ಕಾರಣ. ನಮ್ಮ ಗೋಳು ಯಾರಿಗೂ ಕಾಣುತ್ತಿಲ್ಲ. ಅದರ ಪರಿಣಾಮವೇ ನಮ್ಮ ಹೊಲಗಳಿಗೆ ತ್ಯಾಜ್ಯ ಮತ್ತು ಶೌಚದ ನೀರು ಬರುತ್ತಿದೆ ಎಂದು ರೈತರಾದ ಸಿದ್ದಪ್ಪಾಜಿ, ಶಿವರಾಜು, ನವೀನ್ ಕುಮಾರ್, ಆನಂದ್, ಸೋಮಣ್ಣ, ರಾಜಾಚಾರಿ ಹೇಳಿದರು.
ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳ ನಿಯಮ ಉಲ್ಲಂಘನೆ, ತ್ಯಾಜ್ಯದ ನೀರು ಕೃಷಿ ಭೂಮಿ ಸೇರುತ್ತಿರುವ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಗಮನಕ್ಕೆ ತಂದರೂ ಯಾವ ಅಧಿಕಾರಿಯೂ ಇದುವರೆಗೆ ಸೂಕ್ತ ಕ್ರಮ ಕೈಗೊಂಡಿಲ್ಲ. ಹೀಗೆ ಬಂದು ಹಾಗೆ ಹೋಗುತ್ತಾರಷ್ಟೇ. ಇನ್ನಾದರೂ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಾಲೆ ಮತ್ತು ಜಮೀನುಗಳಿಗೆ ತ್ಯಾಜ್ಯ ನೀರು ಹರಿಯುತ್ತಿರುವುದರ ಕುರಿತು ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕು. ತ್ಯಾಜ್ಯ ನೀರು ಹರಿಯದಂತೆ ಕ್ರಮ ವಹಿಸಿ ರೈತರ ಹಿತ ಕಾಯಬೇಕು
ಶಿವರಾಜು ಮೇಡಮಾರನಹಳ್ಳಿ ಗ್ರಾಮಸ್ಥ
ಕಾರ್ಖಾನೆಯ ತ್ಯಾಜ್ಯ ನೀರು ಹರಿದಿದೆ ಎಂದು ದೂರು ಬಂದಿರುವ ಮೇಡಮಾರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಲಾಗುವುದು
ಮಂಜುನಾಥ್ ಪರಿಸರ ಅಧಿಕಾರಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ
‘ಮಾಲಿನ್ಯ ನಿಯಂತ್ರಣ ಮಂಡಳಿ ಸತ್ತಿದೆ’
‘ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ರಾಮಸಾಗರ ಬಳಿ ಕಾರ್ಯನಿರ್ವಹಿಸುತ್ತಿರುವ ಸ್ಟವ್ ಕ್ರಾಫ್ಟ್ ಕಾರ್ಖಾನೆಯವರು ತಮ್ಮ ತ್ಯಾಜ್ಯ ಮತ್ತು ಮಲದ ನೀರನ್ನು ನಾಲೆಗೆ ಬಿಟ್ಟಿದ್ದಾರೆ. ನಾಲೆ ನಂಬಿ ಸುಮಾರು 40 ರೈತರು ಬದುಕುತ್ತಿದ್ದಾರೆ. ರೈತರ ಜಮೀನುಗಳಿಗೂ ತ್ಯಾಜ್ಯ ನೀರು ನುಗ್ಗಿದೆ. ಹೀಗಾದರೆ ರೈತರನ್ನು ಕಾಪಾಡುವವರು ಯಾರು? ಇಂತಹ ಕೃತ್ಯಗಳ ಮೇಲೆ ಹದ್ದಿನ ಕಣ್ಣಿಡಬೇಕಾದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಬದುಕಿದೆಯೋ ಸತ್ತಿದೆಯೋ ತಿಳಿಯದಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸದಿದ್ದರೆ ಹೋರಾಟ ಮಾಡಲಾಗುವುದು’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಹೊಸದುರ್ಗ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.