ADVERTISEMENT

‘ಪ್ರಾಚೀನ ಜನಪದ ಕಲೆ ಕಲಿಯಿರಿ’

ಬೋರೆಹೊಲ ಕ್ಷೇತ್ರದಲ್ಲಿ ’ಜಾನಪದ ಜ್ಯೋತಿ-2018’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 11:26 IST
Last Updated 9 ಡಿಸೆಂಬರ್ 2018, 11:26 IST
ಬೋರೆಹೊಲ ಕ್ಷೇತ್ರದಲ್ಲಿ ಶ್ರೀ ಶಂಭುನಾಗಲಿಂಗೇಶ್ವರ ಭಕ್ತಿಗೀತೆ ಪುಸ್ತಕವನ್ನು ರಾಜು ಸ್ವಾಮಿ ಅವರು ಬಿಡುಗಡೆಗೊಳಿಸಿದರು
ಬೋರೆಹೊಲ ಕ್ಷೇತ್ರದಲ್ಲಿ ಶ್ರೀ ಶಂಭುನಾಗಲಿಂಗೇಶ್ವರ ಭಕ್ತಿಗೀತೆ ಪುಸ್ತಕವನ್ನು ರಾಜು ಸ್ವಾಮಿ ಅವರು ಬಿಡುಗಡೆಗೊಳಿಸಿದರು   

ಉಯ್ಯಂಬಳ್ಳಿ (ಕನಕಪುರ): ಸಂಸ್ಕೃತಿಯ ಜೀವ ಸೆಲೆಯಾಗಿರುವ ಪ್ರಾಚೀನ ಜಾನಪದ ಸಾಹಿತ್ಯ ಮತ್ತು ಕಲೆಯನ್ನು ಉಳಿಸಲು ಇಂದಿನ ಯುವ ಜನಾಂಗವು ಕಲೆಗಳನ್ನು ಕಲಿಯಲು ಆಸಕ್ತಿ ತೋರಬೇಕೆಂದು ಬೋರೆಹೊಲ ಕ್ಷೇತ್ರದ ಗುರು ರಾಜು ಸ್ವಾಮಿ ತಿಳಿಸಿದರು.

ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿ ಕೋಟೆಕೊಪ್ಪ ಬೋರೆಹೊಲ ಕ್ಷೇತ್ರದಲ್ಲಿ ಪ್ರಜ್ಙಾದೀವಿಗೆ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್ ಹಮ್ಮಿಕೊಂಡಿದ್ದ ‘ಜಾನಪದ ಜ್ಯೋತಿ-2018’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಪ್ರದೇಶಗಳಲ್ಲಿರುವ ಅನೇಕ ಜಾನಪದ ಕಲೆಗಳು ನಶಿಸಿ ಹೋಗುತ್ತಿವೆ. ಸಮುದಾಯಗಳನ್ನು ಒಟ್ಟುಗೂಡಿಸುತ್ತಿದ್ದಅನೇಕ ಹಬ್ಬ ಜಾತ್ರೆಗಳು ದೇಶಿ ಕ್ರೀಡೆಗಳು ಕಣ್ಮರೆಯಾಗುತ್ತಿವೆ ಎಂದರು.ಇಂತಹ ಸಂಸ್ಕೃತಿಯನ್ನು ಮುಂದಿನ ಯುವ ಜನಾಂಗವು ರೂಢಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಅರಕೆರೆಯ ಸಮಾಜ ಸೇವಕಿ ಚಂದ್ರಮ್ಮ ಮಾತನಾಡಿ, ಗ್ರಾಮೀಣ ಭಾಗದ ಜನರಿಂದ ಹುಟ್ಟಿರುವ ಈ ಜಾನಪದ ಗೀತೆಗಳು ತತ್ವಪದ, ಭಜನೆ, ಸೋಬಾನೆ ಗೀತೆ, ರಾಗಿ ಬೀಸುವ ಪದಗಳು, ಇಂದಿಗೂ ಜಾನಪದರ ಬಾಯಲ್ಲಿ ನಲಿದಾಡುತ್ತಿವೆ ಎಂದರು.

ಪ್ರಜ್ಞಾ ದೀವಿಗೆ ಟ್ರಸ್ಟ್‌ ಕಾರ್ಯದರ್ಶಿ ಎಚ್.ಸಿ ಹೊಳಸಾಲಯ್ಯ , ಕಲೆ ಉಳಿಸಿ ಬೆಳೆಸುವ ಸಲುವಾಗಿ ಟ್ರಸ್ಟ್ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕರ್ನಾಟಕದ ಜಾನಪದ ಕಲೆ ಪರಿಚಯಿಸುತ್ತಿದೆ ಎಂದರು.

ಸಿನಿಮಾ ಧಾರಾವಾಹಿ ಸಂಗೀತಕ್ಕೆ ಮಾರು ಹೋಗಿರುವ ಯುವ ಜನಾಂಗವನ್ನು ಜಾನಪದ ಕ್ಷೇತ್ರಕ್ಕೆ ಕರೆತರುತ್ತಿದೆ, ಇದು ಟ್ರಸ್ಟ್‌ನ ಮೂಲ ಉದ್ದೇಶ ಎಂದು ಹೇಳಿದರು.

ಬೋರೆಹೊಲ ಕ್ಷೇತ್ರದ ಸಾಹಿತಿ ಕೆ.ಆರ್ ನಾಗಲಿಂಗೇಶ್ವರ್, ಸಮಾಜಸೇವಕ ಕೆಲೂರು ಮಂಜುನಾಥ್, ಸಮಾಜ ಸೇವಕಿ ಭಾಗ್ಯಮ್ಮ, ಟ್ರಸ್ಟ್ ಅಧ್ಯಕ್ಷೆ ವಿನುತ ಆರ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯೆ ಶಿವಗೌರಮ್ಮ, ಸರ್ವಶಕ್ತಿ ಮಹಿಳಾ ವೇದಿಕೆ ರಾಜ್ಯ ಘಟಕದ ಅಧ್ಯಕ್ಷೆ ಲಕ್ಷ್ಮಮ್ಮ, ಎತ್ತಂಬಾಡಿಯ ಸಮಾಜ ಸೇವಕ ಗೋವಿಂದೇಗೌಡ, ನಲ್ಲಹಳ್ಳಿಯ ಮಹೇಶ್ ಉಪಸ್ಥಿತರಿದ್ದರು.

ಕೆ.ಆರ್ ನಾಗಲಿಂಗೇಶ್ವರ್ ವಿರಚಿತ ಧರ್ಮದೀವಿಗೆ ‘ಶ್ರೀ ಶಂಭುನಾಗಲಿಂಗೇಶ್ವರ’ ಎಂಬ ಭಕ್ತಿಗೀತೆಗಳ ಪುಸ್ತಕ ಬಿಡುಗಡೆ ಮಾಡಲಾಯಿತು.

ಏರಿಂದ್ಯಾಪನಹಳ್ಳಿಯ ನಾಗರಾಜು ಮತ್ತು ತಂಡ ರಂಗಗೀತೆ, ಜನಪದ ಗಾಯಕ ಕಿರಣ್ ಮತ್ತು ತಂಡ ಮೂಲ ಜನಪದ ಗೀತೆ, ಮಂಡ್ಯದ ನದಿಯಾರಿಂದ ಸೋಬಾನೆ ಗೀತೆ, ನಾಗರತ್ನ ತಂಡದವರು ಭಕ್ತಿ ಗೀತೆ, ಅನುಶ್ರೀ ಜನಪದ ಗೀತೆ ಹಾಡಿದರು.

ನಲ್ಲಹಳ್ಳಿಯ ಮುತ್ತುರಾಜು, ಹೊಸದುರ್ಗದ ದಶರಥ್ ಕೀಬೋರ್ಡ್‌ ವಾದನ, ಮಹೇಶ್ ತಬಲ ವಾದನ, ಕೆಬ್ಬರೆ ರಾಜು ಹಾರ್ಮೋನಿಯಂ ವಾದನದಲ್ಲಿ ಸಹಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.