ರಾಮನಗರ: ಕೋವಿಡ್ ಭೀತಿ ನಡುವೆಯೂ ಗುರುವಾರ ಮಾರುಕಟ್ಟೆಯಲ್ಲಿ ವರಮಹಾಲಕ್ಷ್ಮಿ ಹಬ್ಬದ ಖರೀದಿ ಜೋರಾಗಿತ್ತು. ಹೂವಿನ ಬೆಲೆ ಮಾತ್ರ ಗಗನಕ್ಕೆ ಏರಿತ್ತು!
ಶುಕ್ರವಾರದ ಲಕ್ಷ್ಮಿ ಹಬ್ಬಕ್ಕೆಂದು ಹೂವು ಕೊಳ್ಳಲು ಜನರು ಮಾರುಕಟ್ಟೆಗಳತ್ತ ಧಾವಿಸಿದ್ದರು. ಆದರೆ ಹೂವಿನ ಬೆಲೆ ಕೇಳಿಯೇ ಹೌಹಾರಿದರು. ಅದರಲ್ಲೂ ಕನಕಾಂಬರ ಹಾಗೂ ಮಲ್ಲಿಗೆ ಹೂವಿ ಪ್ರತಿ ಮಾರಿಗೆ ₹350-400 ದರದಲ್ಲಿ ಮಾರಾಟ ನಡೆದಿತ್ತು. ಇದ್ದದ್ದರಲ್ಲಿ ಸೇವಂತಿಗೆ ಹೂವು ಕೊಂಚ ಕೈಕೆಟಕುವಂತೆ ಇತ್ತು. ಅದೂ ಸಹ ಪ್ರತಿ ಮಾರಿಗೆ 150ರವರೆಗೆ ಬೆಲೆ ಏರಿಸಿಕೊಂಡಿತ್ತು. ಸಾಮಾನ್ಯ ದಿನಗಳಲ್ಲಿ ₹50ಕ್ಕೆಲ್ಲ ಈ ಹೂವು ಸಿಗುತ್ತಿತ್ತು. ಬಿಡಿ ಗುಲಾಬಿ (ಸಣ್ಣದು) ಪ್ರತಿ ಕೆ.ಜಿ.ಗೆ ₹400-450 ವರೆಗೆ ಮಾರಾಟ ನಡೆಯಿತು.
ಹಬ್ಬಕ್ಕೆ ದೇವರ ಮೂರ್ತಿಗೆ ಹೂವಿನ ಅಲಂಕಾರ ಮಾಡಿದರೆ, ಪೂಜೆ ಬಗೆಬಗೆಯ ಹಣ್ಣುಗಳನ್ನು ಇಡುವುದು ವಾಡಿಕೆ. ಹೀಗಾಗಿ ಮಾರುಕಟ್ಟೆಯಲ್ಲಿ ಹಣ್ಣುಗಳೂ ತಮ್ಮ ಬೆಲೆ ಏರಿಸಿಕೊಂಡಿದ್ದವು. ಏಲಕ್ಕೆ ಬಾಳೆ ಪ್ರತಿ ಕೆ.ಜಿ.ಗೆ ₹70-80ರಂತೆ ಮಾರಾಟವಾಯಿತು. ಪಚ್ಚೆ ಬಾಳೆ ₹40, ಮೋಸಂಬಿ ₹80, ದಾಳಿಂಬೆ ₹100, ಕಿತ್ತಳೆ ₹140, ದ್ರಾಕ್ಷಿ ₹100, ಫೈನ್ಆಪಲ್ ಒಂದಕ್ಕೆ ₹30 ಹಾಗೂ ಸೀಬೆಹಣ್ಣು 1ಕ್ಕೆ ₹ 10ರಂತೆ ಮಾರಾಟ ನಡೆಯಿತು. ಸೇಬಿನ ಹಣ್ಣು ಕೊಂಚ ದುಬಾರಿ ಆಗಿದ್ದು, ಪ್ರತಿ ಕೆ.ಜಿ.ಗೆ ₹200 ದರ ಇತ್ತು. ಇದಲ್ಲದೆ ಬಾಳೆ ಕಂದು, ವಿವಿಧ ಅಲಂಕಾರದ ಎಲೆಗಳು ಸಹ ಮಾರುಕಟ್ಟೆಯಲ್ಲಿ ಇದ್ದವು.
ಕೋವಿಡ್ ಭೀತಿಯಿಂದಾಗಿ ವ್ಯಾಪಾರ ಕೊಂಚ ಕಳೆಗುಂದಿತ್ತಾದರೂ ಸಂಜೆ ಹೊತ್ತಿಗೆ ಚುರುಕಾಗಿ ನಡೆಯಿತು. ‘ಕೋವಿಡ್ನಿಂದಾಗಿ ಕಳೆದ ಕೆಲವು ದಿನಗಳಿಂದ ಹೆಚ್ಚು ವ್ಯಾಪಾರ ಇರಲಿಲ್ಲ. ಆದರೆ ಗುರುವಾರ ಹೆಚ್ಚು ಮಾರಾಟ ನಡೆಯುವ ನಿರೀಕ್ಷೆ ಇದೆ. ಬೇಡಿಕೆ ಹೆಚ್ಚಾದ ಕಾರಣ ಸಹಜವಾಗಿಯೇ ಬೆಲೆ ಏರಿದೆ. ಸಂಜೆ ಇನ್ನಷ್ಟು ಚುರುಕಾಗಿ ವ್ಯಾಪಾರ ನಡೆಯಲಿದೆ’ ಎಂದು ಹಣ್ಣಿನ ವ್ಯಾಪಾರಿ ಸಾಗರ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.