ADVERTISEMENT

ಸಿ.ಪಿ.ಯೋಗೇಶ್ವರ್ ಸತ್ತ ಕುದುರೆ: ಜೆಡಿಎಸ್ ಟೀಕೆ

ಶಾಸಕ ಎಚ್‌.ಡಿ ಕುಮಾರಸ್ವಾಮಿ ವಿರುದ್ಧದ ಲೇವಡಿಗೆ ಪ್ರತ್ತುತ್ತರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 14:43 IST
Last Updated 25 ಜುಲೈ 2020, 14:43 IST
ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು
ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು   

ಚನ್ನಪಟ್ಟಣ: ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್`ಸತ್ತ ಕುದುರೆ' ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ ಕಟುವಾಗಿ ಟೀಕಿಸಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಟಿ ನಡೆಸಿ, ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರನ್ನು ’ರಿಟೈರ್ಡ್ ಕುದುರೆ‘ ಎಂದು ಟೀಕಿಸಿದ್ದ ಯೋಗೇಶ್ವರ್ ವಿರುದ್ಧ ಹರಿಹಾಯ್ದರು.

ಎಚ್.ಡಿ.ಕುಮಾರಸ್ವಾಮಿ ಹಾಗೂ ಅವರ ಕುಟುಂಬ ಎಂದಿಗೂ ಓಡುವ ಕುದುರೆಗಳು. ಈಗಾಗಲೇ ಜನರಿಂದ ತಿರಸ್ಕೃತರಾದ ಯೋಗೇಶ್ವರ್ ’ಸತ್ತ ಕುದುರೆ‘ ಎಂದು ವಾಗ್ದಾಳಿ ನಡೆಸಿದರು.

ADVERTISEMENT

’ಯೋಗೇಶ್ವರ್ ಹಿಂದಿನ ಚುನಾವಣೆಯಲ್ಲಿ ಜನರಿಂದ ತಿರಸ್ಕತರಾಗಿದ್ದಾರೆ. ಇದೀಗ ಅತ್ತೂ ಕರೆದು ಪರಿಷತ್ ಸ್ಥಾನ ಪಡೆದು ಎರಡು ವರ್ಷದ ನಂತರ ತಾಲ್ಲೂಕಿಗೆ ಬಂದಿದ್ದಾರೆ. ಎಚ್.ಡಿ ಕುಮಾರಸ್ವಾಮಿ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. 20 ವರ್ಷ ಅಧಿಕಾರ ಅನುಭವಿಸಿದವರು ಸೋತ ನಂತರ ತಾಲ್ಲೂಕಿನ ಜನರ ಕಷ್ಟ ಕೇಳಲಿಲ್ಲ. ಅಧಿಕಾರವಿದ್ದರೆ ಮಾತ್ರ ಜನಸೇವೆಯೇ ? ಎರಡು ವರ್ಷ ವನವಾಸ, ಅಜ್ಞಾತವಾಸದಲ್ಲಿದ್ದೆ ಎಂದಿದ್ದಾರೆ. ಹಾಗಾದರೆ ಯೋಗೇಶ್ವರ್ ಯಾವ ಕಾಡಿಗೆ ಹೋಗಿದ್ದರು‘ ಎಂದು ಲೇವಡಿ ಮಾಡಿದರು.

ಕ್ಷೇತ್ರದಲ್ಲಿ ತಮಗೆ ಅಸ್ತಿತ್ವ ಇಲ್ಲ ಎಂಬುದು ಯೋಗೇಶ್ವರ್ ಅವರಿಗೆ ಮನವರಿಕೆಯಾಗಿದೆ. ಹಾಗಾಗಿ ಅಸ್ತಿತ್ವ ಉಳಿಸಿಕೊಳ್ಳಲು ಏಕಾಏಕಿ ಸರ್ಕಾರಿ ಕಚೇರಿ ಸಭಾಂಗಣದಲ್ಲಿ ಅವರ ಪಕ್ಷದ ಮುಖಂಡರನ್ನು ಕೂರಿಸಿಕೊಂಡು ದರ್ಬಾರ್ ಮಾಡಿದ್ದಾರೆ. ಇದಕ್ಕೆ ಜೆಡಿಎಸ್ ಮುಂದೆ ಅವಕಾಶ ಕೊಡುವುದಿಲ್ಲ. ಮುಂದೆ ಕುಮಾರಸ್ವಾಮಿ ಅವರ ವಿರುದ್ಧ ಲಘುವಾಗಿ ಮಾತನಾಡಿದರೆ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಜಯಮುತ್ತು ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಯೋಗೇಶ್ವರ್ ಮೆರೆದಿದ್ದರಿಂದಲೇ ಹಿಂದಿನ ಚುನಾವಣೆಯಲ್ಲಿ ಸೋಲಿನ ಫಲಿತಾಂಶ ದೊರೆತಿದೆ. ಈಗಲೂ ಮಾತನಾಡುವುದನ್ನು ನಿಲ್ಲಿಸಿಲ್ಲ. ಉತ್ತಮ ಆಡಳಿತಗಾರ ಎಂದು ತಿಳಿದೆ ಕುಮಾರಸ್ವಾಮಿ ಅವರನ್ನು ಜನರು ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿದ್ದಾರೆ. ಯೋಗೇಶ್ವರ್ ಸರ್ಟಿಫಿಕೇಟ್ ನೀಡುವ ಅನಿವಾರ್ಯತೆ ಕುಮಾರಸ್ವಾಮಿ ಅವರಿಗೆ ಇಲ್ಲ ಎಂದರು.

ಕೊರೊನಾ ಸಂದರ್ಭದಲ್ಲಿ ತಾಲ್ಲೂಕಿನ ಕಡೆಗೆ ಇಣುಕಿಯೂ ನೋಡದ ಯೋಗೇಶ್ವರ್, ಇದೀಗ ದಿಢೀರನೆ ಅಧಿಕಾರ ಬಂತೆಂದು ತಲೆಹಾಕಿದ್ದಾರೆ. ಅಧಿಕಾರವನ್ನು ಅಭಿವೃದ್ಧಿಯತ್ತ ಬಳಸಿಕೊಳ್ಳಬೇಕು. ಅದನ್ನು ಬಿಟ್ಟು ಹತಾಶರಾಗಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಭರದಲ್ಲಿ ಇನ್ನೊಬ್ಬರನ್ನು ಟೀಕಿಸುವುದಕ್ಕೆ ಬಳಸಿಕೊಳ್ಳುವುದು ತರವಲ್ಲ. ಗೌರವ ಮೀರಿ ಮಾತನಾಡಬೇಡಿ ಎಂದು ಎಚ್ಚರಿಸಿದರು.

ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡ ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.